ಆನೆಗೊಂದಿ ಉತ್ಸವ: ಮೈನವಿರೇಳಿಸುವ ಯುವಕರ ಬೈಕ್ ಸ್ಟಂಟ್!
ಆನೆಗೊಂದಿಯಲ್ಲಿ ಜ.9 ಮತ್ತು 10ರಂದು ನಡೆಯಲಿರುವ ಉತ್ಸವ-20ರ ಅಂಗವಾಗಿ ಶುಕ್ರವಾರ ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಯುವಕರ ಬೈಕ್ ಸ್ಟಂಟ್ ನೆರೆದವರ ಮೇನೆವರೇಳುವಂತೆ ಮಾಡಿತ್ತು
Published: 03rd January 2020 02:46 PM | Last Updated: 03rd January 2020 05:55 PM | A+A A-

ಯುವಕರ ಬೈಕ್ ಸ್ಟಂಟ್
ಗಂಗಾವತಿ: ಆನೆಗೊಂದಿಯಲ್ಲಿ ಜ.9 ಮತ್ತು 10ರಂದು ನಡೆಯಲಿರುವ ಉತ್ಸವ-20ರ ಅಂಗವಾಗಿ ಶುಕ್ರವಾರ ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಯುವಕರ ಬೈಕ್ ಸ್ಟಂಟ್ ನೆರೆದವರ ಮೇನೆವರೇಳುವಂತೆ ಮಾಡಿತ್ತು
ಭಟ್ಕಳ ಮೂಲದ ಸಾಹಸಿ ಬೈಕ್ ರೈಡರ್ ಗಳಾದ ಅಖಿಲ್, ಸೈಯದ್ ಗೌಸ ಹಾಗೂ ಸಚಿನ್ ನೀಡಿದ ಬೈಕ್ ಸ್ಟಂಟ್ ಗಳು ನೆರೆದವರಲ್ಲಿ ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತ್ತು. ಈ ಯುವಕರು ಸುಮಾರು ಅರ್ಧಗಂಟೆಗಳ ಕಾಲ ಬೈಕ್ ಸ್ಟಂಟ್ ಮಾಡಿದರು.
ಫ್ರಿಸ್ಟೈಲ್ ರೈಡಿಂಗಿನಲ್ಲಿ ವೀಲ್ಹಿಂಗ್ , ಸ್ಟಾಪಿ, ಫ್ಲಾಗ್ ಮಾರ್ಚಿಂಗ್, ಡ್ರಪ್ಟಿಂಗ್, ಚೈನ್ ಶೋ, ಬರ್ನೊ, ಹ್ಯಾಂಡಲ್ ಕ್ರಿಷ್, ಸ್ಟಾಂಡಿಂಗ್, ಸ್ಲಿಪಿಂಗ್, 350 ಡಿಗ್ರಿ ಸ್ಟಂಟ್, ಫೈಯರ್ ರಿಂಗ್ ಹೀಗೆ ನಾನಾ ನಮೂನೆಯ ಸ್ಟಂಟ್ ಮಾಡುವ ಮೂಲಕ ಜನರ ಗಮನ ಸೆಳೆದರು.
ಮತ್ತೊಂದೆಡೆ ನಡೆದ ಗಾಳಿಪಟ ಹಾರಿಸುವ ಕ್ರೀಡೆ ಜನರ ಗಮನ ಸೆಳೆಯಿತು.
ಶುಭ್ರ ಬಾನಂಗಳದಲ್ಲಿ ಹತ್ತಾರು ನಮೂನೆ, ನಾನಾ ವಿನ್ಯಾಸದ ಹಾರಾಡಿ ಚಿತ್ತಾರ ಮೂಡಿಸಿದವು. ಅಂತರಾಷ್ಟ್ರೀಯ ಗಾಳಿಪಟ ಪ್ರದರ್ಶಕರಾದ ಬೆಂಗಳೂರಿನ ಕೆ.ವಿ.ರಾವ್, ಮೈಸೂರಿನ ಸುಭಾಶ್ ಹಾಗೂ ದೊಡ್ಡಬಳ್ಳಾಪುರದ ಮುನಿಷ್ ಸುಮಾರು 30ಕ್ಕೂ ಹೆಚ್ಷು ಮಾದರಿಯ ಗಾಳಿಪಟ ಹಾರಿಸಿ ಜನರ ಗಮನ ಸೆಳೆದರು.
ಇದರಲ್ಲಿ ಮುಖ್ಯವಾಗಿ ರೋರಿಂಗ್, ಟೇಲ್, ಸಿರೀಸ್, ಸ್ಟಂಟ್, ಡೆಲ್ಟಾ, ಸಿಡಿ, ಅಕ್ಟೋಪಸ್, ಡಾಲ್ಫಿನ್, ಎಲ್ಇಡಿ, ಪ್ಲೇನ್, ಈಗಲ್, ಸ್ಪೈಡರ್, ಟೈಗರ್ ಮಾದರಿಯ ಗಾಳಿಪಟಗಳು ಜನರು ಮುಖ್ಯವಾಗಿ ಶಾಲಾ ಮಕ್ಕಳಗಮನ ಸೆಳೆದವು
ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ, ಜಿಲ್ಲಾ ಪಂಚಾಯತಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ಗಾಳಿ ಪಟ ಹಾರಿಸುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದರು.
ವರದಿ: ಎಂ ಜೆ ಶ್ರೀನಿವಾಸ್