ಚಾಮರಾಜನಗರ: ರೈತರು ಕೃಷಿಯಿಂದ ವಿಮುಖವಾಗುತ್ತಿರುವುದನ್ನು ತಡೆಯುವ ನಿಟ್ಟಿನಲ್ಲಿ ಕೂಲಿಯಾಳುಗಳ ಪ್ರಮಾಣ ತಗ್ಗಿಸುವ ಸಲುವಾಗಿ ಬೆಂಗಳೂರಿನ ನಿವೃತ್ತ ಸೈನಿಕರೊಬ್ಬರು ಕೂಯ್ಲು ಮಾಡಲು ಪರಿಚಯಿಸಿರುವ ಕೂಯ್ಲುಗತ್ತಿಯ ಪ್ರಾತ್ಯಕ್ಷಿಕೆ ನಡೆಸಿದರು.
ಕೊಳ್ಳೇಗಾಲ ತಾಲೂಕಿನ ತೇರಂಬಳ್ಳಿ ಗ್ರಾಮದ ಡಿ. ಶಾಂತಮಲ್ಲು ಅವರ ಭತ್ತದ ತಾಕಿನಲ್ಲಿ ರೈತರಿಗೆ ಭತ್ತದ ಕಟಾವು ಪ್ರಾತ್ಯಕ್ಷಿಕೆ , ಕೂಯ್ಲುಗತ್ತಿ ಜೋಡಣೆ, ಬಳಕೆ, ರಿಪೇರಿ ಮತ್ತು ನಿರ್ವಹಣೆ ಬಗ್ಗೆ ನಿವೃತ್ತ ಸೈನಿಕ ಯು.ಎಂ. ತಾರಾನಾಥ್ ಅವರು ತಿಳಿಸಿಕೊಟ್ಟರು.
ಬಹು ಬೆಳೆ ಕಟಾವು..
ಕೂಯ್ಲು ಕತ್ತಿ ಮೂಲಕ ಬತ್ತ, ರಾಗಿ, ಜೋಳ, ಹುರುಳಿ, ಹಸಿರೆಲೆ ಗೊಬ್ಬರಕ್ಕಾಗಿ ಬೆಳೆಸುವ ಸೆಣಬು, ಡಯಾಂಚ, ಆಲಸಂದೆ, ಹಾಗೂ ಕಳೆಗಳನ್ನು ಕಟಾವು ಮಾಡಬಹುದು. ಕಳೆಯನ್ನು ಕಳೆ ಕೊಚ್ಚುವ ಯಂತ್ರದ ಮೂಲಕ ಕಟಾವು ಮಾಡಿದರೆ ಕಳೆಯನ್ನು ಅಲ್ಲೇ ಪುಡಿ ಪುಡಿ ಮಾಡುತ್ತದೆ. ಕೊಯ್ಲುಗತ್ತಿ ಗುಡ್ಡೆಯಾಕುತ್ತದೆ. ಮಾನವ ಶ್ರಮದ ಮೂಲಕ ಬಳಕೆ ಮಾಡುವುದರಿಂದ ಇಂಧನ ಉಳಿತಾಯವಾಗಲಿದೆ.
ಕತ್ತಿಯನ್ನು ಉಜ್ಜಿ ಬೇಕಾದ ರೀತಿ ಚೂಪು ಮಾಡಿಕೊಳ್ಳಬುಹುದಾಗಿದ್ದು, ರೈತರು ಕಳೆ ನಿಯಂತ್ರಣ ಮಾಡಲು ಸಾಧ್ಯವಾಗದೆ ಕೂಲಿಯಾಳು ಸಿಗದ ಪರಿಣಾಮ ಇತ್ತೀಚಿನ ದಿನಗಳಲ್ಲಿ ಕಳೆ ನಾಶಕ ಮೊರೆ ಹೋಗುತ್ತಿದ್ದರು. ಇದರಿಂದಾಗಿ ಭೂಮಿ ಸತ್ವ ಕಳೆದುಕೊಂಡು ಹಾಳಾಗುತ್ತಿದ್ದು, ಇದೀಗ ಕೂಯ್ಲುಗತ್ತಿ ಮೂಲಕ ಕಳೆ ಕತ್ತರಿಸುವುದರಿಂದ ಅಲ್ಲೇ ಸಾವಯವ ಗೊಬ್ಬರವನ್ನು ತಯಾರು ಮಾಡಿಕೊಳ್ಳಲು ಅನುಕೂಲವಾಗಿದೆ ಎನ್ನುತ್ತಾರೆ ತಾರನಾಥ್ .
ಈ ಕೂಯ್ಲುಗತ್ತಿ ಮೂಲಕ ಒಬ್ಬ ಒಂದು ಎಕರೆ ಕಟಾವು ಮಾಡಬಹುದಾಗಿದೆ. ಕುಡುಗೋಲು ಮೂಲಕ ಒಂದು ಎಕರೆ
ಕಟಾವು ಮಾಡಲು ೬ರಿಂದ ೮ ಆಳು ಬೇಕು. ಯಂತ್ರಗಳ ಮೂಲಕ ಕಟಾವು ಮಾಡಿಸಿದರೆ ೭ರಿಂದ ೮ ಸಾವಿರವಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಕಟಾವು ಮಾಡುವವರು ಕಡಮೆಯಾಗುತ್ತಿದ್ದು. ಕೂಯ್ಲುಗತ್ತಿ ವರದಾನವಾಗಿದೆ ಎನ್ನುತ್ತಾರೆ
ರೈತ ಶಾಂತಮಲ್ಲು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9845941118
ವರದಿ: ಗೂಳಿಪುರ ನಂದೀಶ
Advertisement