ಮಂಗಳೂರು: ಸಿಎಎ ವಿರೋಧಿ ಪ್ರತಿಭಟನೆ ವೇಳೆ ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರ ಕುಟುಂಬಸ್ಥರಿಗೆ ಕರ್ನಾಟಕ ಸರ್ಕಾರ ಘೋಷಿಸಿದ್ದ ಪರಿಹಾರವನ್ನು ವಾಪಾಸ್ ಪಡೆದ ನಡುವೆಯೇ ಸಾರ್ವಜನಿಕರು ಸಂತ್ರಸ್ತರ ಕುಟುಂಬಕ್ಕೆ ಅಪಾರ ಪ್ರಮಾಣದಲ್ಲಿ ಧನ ಸಹಾಯಮಾಡುತ್ತಿದ್ದಾರೆ.
ಮಂಗಳೂರು ಮತ್ತು ದೇಶದ ಮತ್ತಿತರ ಪ್ರದೇಶಗಳ ಜೊತೆಗೆ ವಿದೇಶದಿಂದಲೂ ಹಣ ಹರಿದು ಬರುತ್ತಿದೆ. ಘೋಷಿಸಿದ್ದ ಪರಿಹಾರ ಹಣವನ್ನು ಸರ್ಕಾರ ತಡೆ ಹಿಡಿದಿದ್ದಕ್ಕೆ ರಾಜ್ಯದ ಜನತೆ ಆಘಾತ ವ್ಯಕ್ತ ಪಡಿಸಿದ್ದಾರೆ.ನೌಶೀನ್ ಕುದ್ರೋಳಿ ಮತ್ತು ಜಲೀಲ್ ಕಂದಕ್ ಗೋಲಿಬಾರ್ ಘಟನೆಯಲ್ಲಿ ಮೃತಪಟ್ಟಿದ್ದರು. ಇವರ ಕುಟುಂಬಕ್ಕೆ ಯಡಿಯೂರಪ್ಪ ತಲಾ 10 ಲಕ್ಷ ರು ಪರಿಹಾರ ಘೋಷಿಸಿದ್ದರು, ಆದರೆ ಇವರಿಬ್ಬರ ಹೆಸರಿನಲ್ಲಿ ಎಫ್ ಐ ಆರ್ ದಾಖಲಾಗಿದ್ದರ ಹಿನ್ನಲೆಯಲ್ಲಿ ಪರಿಹಾರ ರದ್ದುಗೊಳಿಸಲಾಗಿತ್ತು.
ಸರ್ಕಾರದ ಈ ನಿರ್ಧಾರದಿಂದ ಕೋಪಗೊಂಡ ಅನೇಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ವಿವಿಧ ಭಾಷೆ ಧರ್ಮದ ಜನತೆ ಸಂತ್ರಸ್ತರ ಕುಟುಂಬಕ್ಕೆ ಹಣದ ನೆರವು ನೀಡಲು ಮುಂದೆ ಬರುತ್ತಿದ್ದಾರೆ, ಈಗಾಗಲೆ ಹೆಚ್ಚಿನ ಪ್ರಮಾಣದಲ್ಲಿ ಹಣ ಸಂಗ್ರವಾಗಿದ್ದು, ಈ ತಿಂಗಳೊಳಗೆ ಸಂತ್ರಸ್ತರ ಕುಟುಂಬಕ್ಕೆ ಹಣ ನೀಡಲಾಗುವುದು ಎಂದು ಮುಸ್ಲಿಂ ಕೇಂದ್ರ ಸಮಿತಿ ಅಧ್ಯಕ್ಷ ಕೆ.ಎಸ್ ಮಹಮೊದ್ ಮಸೂದ್ ತಿಳಿಸಿದ್ದಾರೆ,
Advertisement