ಬೈಕ್ ಅಡ್ಡಗಟ್ಟಿ ಪೆಟ್ರೋಲ್ ಸುರಿದು ವ್ಯಕ್ತಿಯ ಕೊಲೆ

ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಅವರು ಮೃತಪಟ್ಟಿರುವ ಘಟನೆ ಆನೇಕಲ್ ಸಮೀಪ ನಡೆದಿದೆ.
ಬೈಕ್ ಅಡ್ಡಗಟ್ಟಿ ಪೆಟ್ರೋಲ್ ಸುರಿದು ವ್ಯಕ್ತಿಯ ಕೊಲೆ
ಬೈಕ್ ಅಡ್ಡಗಟ್ಟಿ ಪೆಟ್ರೋಲ್ ಸುರಿದು ವ್ಯಕ್ತಿಯ ಕೊಲೆ

ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಅವರು ಮೃತಪಟ್ಟಿರುವ ಘಟನೆ ಆನೇಕಲ್ ಸಮೀಪ ನಡೆದಿದೆ.

ಹೆನ್ನಾಗರದ  ಹೊಸಹಳ್ಳಿಯಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ ಜ್ಯೋತಪ್ಪ(51) ಸಾವನ್ನಪ್ಪಿದವರು. ಈ ಬಗ್ಗೆ ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಜ್ಯೋತಪ್ಪ ಅವರನ್ನು ಹಿಂಬಾಲಿಸಿ  ಆಸಿಡ್ ಎರಚಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಇಬ್ಬರು ದುಷ್ಕರ್ಮಿಗಳ  ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಜಿಗಣಿಯಿಂದ ಹೊಸಹಳ್ಳಿಗೆ ಜ್ಯೋತಪ್ಪ ಅವರು  ಶುಕ್ರವಾರ ರಾತ್ರಿ 7ರ ವೇಳೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಬೈಕ್‌ನಲ್ಲಿ  ಹಿಂಬಾಲಿಸಿದ ಇಬ್ಬರು ದುಷ್ಕರ್ಮಿಗಳು ಹೆನ್ನಾಗರ ಬಳಿ ಬರುತ್ತಿದ್ದಂತೆ ನಿರ್ಜನ  ಪ್ರದೇಶವೊಂದರಲ್ಲಿ ಜ್ಯೋತಪ್ಪ ಅವರ ಸ್ಕೂಟರ್ ಅಡ್ಡಗಟ್ಟಿದ್ದಾರೆ.

ಕೆಳಗಿಳಿದು  ತಪ್ಪಿಸಿಕೊಳ್ಳಲು ಯತ್ನಿಸಿದ ಜ್ಯೋತಪ್ಪ ಅವರಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ  ಆಸಿಡ್ ಹಾಗೂ ಪೆಟ್ರೋಲ್ ಸುರಿದು ಬೆಂಕಿಯನ್ನು ಹಚ್ಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಕಿ  ಹೊತ್ತಿಕೊಂಡು ನರಳಾಡುತ್ತ ನೆರವಿಗಾಗಿ ಕಿರುಚಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು  ಜ್ಯೋತಪ್ಪನನ್ನು ರಕ್ಷಿಸಿ ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ದೇಹದ  ಶೇ.60 ಭಾಗ ಸಂಪೂರ್ಣ ಸುಟ್ಟು ಹೋಗಿದ್ದ ಅವರನ್ನು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮುಂಜಾನೆ ಮೃತಪಟ್ಟಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಜ್ಯೋತಪ್ಪ  ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಸೂರ್ಯಸಿಟಿ  ಪೊಲೀಸರು ಪರಿಶೀಲನೆ ನಡೆಸಿ ಕೊಲೆಗೈದ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com