ಚಾಮರಾಜನಗರ: ಚಾಮರಾಜನಗರ ಕೆಎಸ್ಆರ್ಟಿಸಿ ಉಪವಿಭಾಗವು 2019 ರಲ್ಲಿ ಅಧಿಕ ಲಾಭ ಗಳಿಸಿದೆ. ಚಾಮರಾಜನಗರ ಉಪ ವಿಭಾಗದ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ನಂಜನಗೂಡು ಘಟಕಗಳಿಂದ ಪ್ರತಿನಿತ್ಯ 540 ಬಸ್ಸುಗಳು ಕಾರ್ಯಾಚರಿಸುತ್ತಿದ್ದು ಪ್ರತಿದಿನ ಸರಾಸರಿ 50-52 ಲಕ್ಷ ರೂ. ಆದಾಯ ಗಳಿಸುತ್ತಿದೆ.
2019 ರ ಏಪ್ರಿಲ್ನಿಂದ ಡಿಸೆಂಬರ್ವರೆಗಿನ ಲೆಕ್ಕಾಚಾರದ ಪ್ರಕಾರ, ಸಂಸ್ಥೆಯು 5 ಕೋಟಿ ರೂ ಹೆಚ್ಚುವರಿ ಆದಾಯ ಗಳಿಸಿದೆ. ಕಳೆದ ಬಾರಿಗೆ ಹೋಲಿಸಿದರೆ 2 ರಿಂದ 2.5 ಕೋಟಿ ರೂ. ಲಾಭಾಂಶದಲ್ಲಿ ಹೆಚ್ಚಳವಾಗಿದೆ ಎಂದು ಚಾಮರಾಜನಗರ ಸಾರಿಗೆ ಸಂಸ್ಥೆ ಉಪವಿಭಾಗಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.
ಚಾಮರಾಜನಗರ ಸಾರಿಗೆ ಸಂಸ್ಥೆ ಉಪವಿಭಾಗಧಿಕಾರಿ ಶ್ರೀನಿವಾಸ್ ಮಾತನಾಡಿ, ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಭಕ್ತರು ಹೆಚ್ಚಾಗಿ ಸಾರಿಗೆ ಸಂಸ್ಥೆ ಬಸ್ಗಳಲ್ಲೇ ಸಂಚರಿಸುವುದರಿಂದ ಸಂಸ್ಥೆಗೆ ಉತ್ತಮ ಆದಾಯ ಹರಿದು ಬಂದಿದೆ. ಯುಗಾದಿ, ಅಮಾವಾಸ್ಯೆ, ದೀಪಾವಳಿ ಸೇರಿದಂತೆ ವಿಶೇಷ ದಿನಗಳಲ್ಲಿ 200-400 ಹೆಚ್ಚುವರಿ ಬಸ್ಗಳು ಸಂಚರಿಸುವುದರಿಂದ ಈ ಬಾರಿ 9 ಕೋಟಿ 63 ಲಕ್ಷ ರೂ ಆದಾಯ ಬಂದಿದೆ. ಮಾದಪ್ಪನ ಭಕ್ತರಿಂದಲೇ ಈ ಬಾರಿ ಹೆಚ್ಚುವರಿ ಆದಾಯ ಬಂದಿದೆ ಎಂದು ಮಾಹಿತಿ ನೀಡಿದರು.
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನಗಳ ನಿರ್ಬಂಧ ಇರುವುದರಿಂದ ಸಾರಿಗೆ ಸಂಸ್ಥೆ ಬಸ್ಗಳಿಗೆ ವಾರಾಂತ್ಯದ ದಿನಗಳಲ್ಲಿ ಸರಾಸರಿ ದಿನವೊಂದಕ್ಕೆ 1.80 ಲಕ್ಷ ಆದಾಯ ಬರುತ್ತಿದೆ. ಬಿಳಿಗಿರಿರಂಗನನಾಥ ದೇವಾಲಯದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವುದರಿಂದ ಕಳೆದೆರಡು ವರ್ಷಗಳಿಂದ ಆದಾಯ ಸೋರಿಕೆಯಾಗಿದೆ ಎಂದರು.
- ಗುಳಿಪುರ ನಂದೀಶ ಎಂ
Advertisement