ಬೆಂಗಳೂರು: ಕಳ್ಳತನಕ್ಕೆಂದು ಮನೆಗೆ ನುಗ್ಗಿದ ಕಳ್ಳನೋರ್ವ ಸಿಕ್ಕಿಬೀಳುತ್ತೇನೆ ಎಂದು ಭಯಗೊಂಡ ತನ್ನನ್ನು ತಾನೇ ಅಗ್ನಿಗಾಹುತಿ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಹೆಎಚ್ಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ವಿಭೂತಿಪುರದಲ್ಲಿ ಈ ಘಟನೆ ನಡೆದಿದ್ದು, ಮೊಹನ್ ಎಂಬ ಸಿವಿಲ್ ಎಂಜಿನಿಯರ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ನಿನ್ನೆ ಬೆಳಗ್ಗೆ6.30 ರ ಸುಮಾರಿನಲ್ಲಿ ಮೋಹನ್ ಮತ್ತು ಅವರ ಕುಟುಂಬ ಹೊರಗೆ ತೆರಳಿತ್ತು. ಇದೇ ಸಮಯಕ್ಕಾಗಿ ಕಾಯುತ್ತಿದ್ದ ಕಳ್ಳ ಶಶಾಂಕ್ ಮನೆಗೆ ನುಗ್ಗಿದ್ದಾನೆ. ಆದರೆ ಒಳಗೆ ಬಂದು ಹೊರ ಹೋಗಲಾಗದೇ ಒದ್ದಾಡಿದ್ದಾನೆ.
ಈ ಹೊತ್ತಿಗಾಗಲೇ ಮನೆಯ ಮಾಲೀಕ ಮೋಹನ್ ಮನೆಗೆ ವಾಪಸ್ ಆಗಿದ್ದು, ಮನೆಯಲ್ಲಿ ಬರುತ್ತಿದ್ದ ಶಬ್ದಗಳಿಂದ ಶಂಕೆಗೊಂಡ ಅವರು ಕೂಡಲೇ ಮನೆಗೆ ಬಾಗಿಲು ಹಾಕಿದ್ದಾರೆ. ಅಲ್ಲದೆ ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ಹೊತ್ತಿಗೆ ಅಪಾಯದ ಮುನ್ಸೂಚನೆ ಅರಿತ ಕಳ್ಳ ತಪ್ಪಿಸಿಕೊಳ್ಳಲು ಯತ್ನಿದ್ದಾನೆ. ಅದು ಸಾಧ್ಯವಾಗದೇ ಪೊಲೀಸರಿಗೆ ಸಿಕ್ಕಿ ಬೀಳುತ್ತೇನೆ ಎಂಬ ಭಯದಿಂದ ನೇಣು ಹಾಕಿಕೊಳ್ಳಲು ಯತ್ನಿಸಿದ್ದಾನೆ. ಅದೂ ಸಫಲವಾಗದಿದ್ದರಿಂದ ರೂಮಿನಲ್ಲಿದ್ದ ತಲೆದಿಂಬು ಇತರೆ ವಸ್ತುಗಳನ್ನು ತಂದು ಗ್ಯಾಸ್ ಲೀಕ್ ಮಾಡಿ ತನಗೇ ತಾನೇ ಬೆಂಕಿ ಹಚ್ಚಿಕೊಂಡಿದ್ದಾನೆ.
ಈ ವೇಳೆ ಇದನ್ನು ಕಂಡ ಮನೆ ಮಾಲೀಕ ಮೋಹನ್ ಅಕ್ಕಪಕ್ಕದವರಿಗೆ ವಿಚಾರ ತಿಳಿಸಿದ್ದಾರೆ. ಆಗ ಪೊಲೀಸರಿಗೆ ವಿಷಯ ಮುಟ್ಟಿಸಲಾಗಿದ್ದು, ಸ್ಥಳಕ್ಕಾಗಿಮಿಸಿದ ಪೊಲೀಸರು ಬೆಂಕಿ ನಂದಿಸಿ ಆತನನ್ನು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗಾಯಾಳು ಕಳ್ಳನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಅಂತೆಯೇ ಆತನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.
Advertisement