ಬೆಂಗಳೂರು: ಅನಾರೋಗ್ಯದಿಂದ ಬನ್ನೇರುಘಟ್ಟ ಮುಖ್ಯರಸ್ತೆ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಿತ್ಯೋತ್ಸವ ಕವಿ ಪ್ರೊ. ನಿಸ್ಸಾರ್ ಅಹಮದ್ ರವರ ಪುತ್ರ ನವೀದ್ ಅವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ 10 ಲಕ್ಷ ರೂ. ನೆರವು ನೀಡಲಾಯಿತು.
ಮೇಯರ್ ವೈದ್ಯಕೀಯ ಪರಿಹಾರ ನಿಧಿಗೆ 15 ಕೋಟಿ ರೂ. ಮೀಸಲಿಡಲು ಮಂಗಳವಾರ ನಡೆದ ಪಾಲಿಕೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಜತೆಗೆ, ಅನಾರೋಗ್ಯಕ್ಕೆ ತುತ್ತಾಗಿರುವ ನಿತ್ಯೋತ್ಸವ ಕವಿ ನಿಸ್ಸಾರ್ ಅಹಮದ್ ಹಾಗೂ ಅವರ ಪುತ್ರ ನವೀದ್ ನಿಸ್ಸಾರ್ ಅವರ ಚಿಕಿತ್ಸೆಗೆ ಪಾಲಿಕೆಯಿಂದ 20 ಲಕ್ಷ ರೂ. ಆರ್ಥಿಕ ನೆರವು ನೀಡಲು ಅಂಗೀಕಾರ ನೀಡಲಾಯಿತು. ಮಹಾಪೌರರಾದ ಗೌತಮ್ ಕುಮಾರ್ ಅವರು ಬುಧವಾರ ಈ ಹಣದ ಚೆಕ್ ಹಸ್ತಾಂತರಿಸಿದರು. ಉಪಮಹಾಪೌರರಾದ ರಾಮ ಮೋಹನ ರಾಜು, ಪಾಲಿಕೆ ಸದಸ್ಯ ಎಲ್.ಶ್ರೀನಿವಾಸ್ ಉಪಸ್ಥಿತರಿದ್ದರು.
ಮಂಗಳವಾರ ನಡೆದ ಪಾಲಿಕೆ ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಪ್ರಸ್ತಾವನೆ ಮಂಡಿಸಿ ಒಪ್ಪಿಗೆ ಪಡೆದರು. ಮೇಯರ್ ವೈದ್ಯಕೀಯ ನೆರವು ನಿಧಿಯಿಂದ ಪರಿಹಾರ ಬಯಸಿ ಕಳೆದ ಮೂರು ತಿಂಗಳಿಂದ ನೂರಾರು ಅರ್ಜಿಗಳು ಬಂದಿದ್ದು, ವೈದ್ಯಕೀಯ ನಿಧಿ ಖಾಲಿ ಆಗಿರುವುದರಿಂದ ಸೌಲಭ್ಯ ಸಿಗುತ್ತಿರಲಿಲ್ಲ ಹಾಗೂ 3 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಾಕಿ ಉಳಿದಿವೆ.
Advertisement