ಮತೀಯ ಶಕ್ತಿಗಳಿಂದ ಕೋಮು ಸೌಹಾರ್ದ ಹಾಳು ಮಾಡಲು ಯತ್ನ: ಡಿ.ಕೆ.ಶಿವಕುಮಾರ್ 

ಕಪಾಲಬೆಟ್ಟದ ಯೇಸುಪ್ರತಿಮೆ ನಿರ್ಮಾಣ ವಿರೋಧಿಸುವ ನೆಪದಲ್ಲಿ ಕೆಲವು ಮತೀಯ ಶಕ್ತಿಗಳು ಕೋಮುಸಾಮರಸ್ಯ ಹದಗೆಡಿಸಲು ಪ್ರಯತ್ನಿಸುತ್ತಿವೆ. 
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್

ಬೆಂಗಳೂರು: ಕಪಾಲಬೆಟ್ಟದ ಯೇಸುಪ್ರತಿಮೆ ನಿರ್ಮಾಣ ವಿರೋಧಿಸುವ ನೆಪದಲ್ಲಿ ಕೆಲವು ಮತೀಯ ಶಕ್ತಿಗಳು ಕೋಮುಸಾಮರಸ್ಯ ಹದಗೆಡಿಸಲು ಪ್ರಯತ್ನಿಸುತ್ತಿವೆ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. 

ಸುಳ್ಳು ಕಾರಣ, ಕಟ್ಟುಕತೆಗಳನ್ನು ಸೃಷ್ಟಿಸುತ್ತಿವೆ. ವದಂತಿಗಳನ್ನು ಹರಡುತ್ತಿವೆ. ಇದೇ ಜನವರಿ 13 ರಂದು ಕನಕಪುರ ಚಲೋ ಹೆಸರಿನಲ್ಲಿ ಕೋಮುಸಾಮರಸ್ಯ ಹಾಳು ಮಾಡಿ, ಗಲಭೆ, ಹಿಂಸಾಚಾರಕ್ಕೆ ಪ್ರೇರಣೆ ನೀಡುವುದು ಈ ಮತೀಯ ಶಕ್ತಿಗಳ ಹುನ್ನಾರವಾಗಿದೆ ಎಂದು ಹೇಳಿದ್ದಾರೆ

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, "ಕನಕಪುರದ ಮಹಾಜನರು ಶತ-ಶತಮಾನಗಳಿಂದಲೂ ಶಾಂತಿಪ್ರಿಯರು. ಮತೀಯ ಸಾಮರಸ್ಯಕ್ಕೆ ಹೆಸರಾದವರು. ಜಾತಿ, ಮತ, ಧರ್ಮದ ಭೇದವಿಲ್ಲದೆ ಸಹೋದರಭಾವದಿಂದ ಬದುಕಿದವರು, ಬದುಕುತ್ತಿರುವವರು. ಕೋಮುಸೌಹಾರ್ದತೆಯಲ್ಲಿ ಇಡೀ ನಾಡಿಗೇ ಮಾದರಿಯಾದವರು. 

ಅಂಥ ಶಾಂತಿ ಮತ್ತು ಸ್ನೇಹಪ್ರಿಯರನ್ನು ಕೆಣಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಕನಕಪುರದ ಮಹಾಜನತೆ ಅದೆಷ್ಟು ಪ್ರಬುದ್ಧರು, ಇಲ್ಲಿ ನೂರಾರು ವರ್ಷಗಳಿಂದ ಎಲ್ಲ ಕೋಮು ಮತ್ತು ಧರ್ಮದ ಜನರು ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದಾರೆ ಎಂಬುದು ಅವರಿಗೆ ಗೊತ್ತಿಲ್ಲ. ಹೀಗಾಗಿ ಕನಕಪುರ ಚಲೋ ಹೆಸರಿನಲ್ಲಿ ಮತೀಯ ಶಕ್ತಿಗಳು ನೀಡುವ ಯಾವುದೇ ಪ್ರಚೋದನೆಗೆ ಕನಕಪುರದ ಮಹಾಜನತೆ ಒಳಗಾಗಬೇಡಿ. ಅವರು ಎಷ್ಟೇ ಕೆರಸಿಳಿದರೂ ಸಹನೆ ಕಳೆದುಕೊಳ್ಳಬೇಡಿ. 

ತಾಳ್ಮೆ ಮತ್ತು ಸಂಯಮವನ್ನು ಕಾಪಾಡಿಕೊಳ್ಳಿ. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಕೊಡಬೇಡಿ. ಶಾಂತಿಗೆ ಭಂಗ ತರಬೇಡಿ ಎಂದು ಕೈಮುಗಿದು ವಿನಂತಿಸಿಕೊಳ್ಳುತ್ತೇನೆ ಎಂದು ಮನವಿ ಮಾಡಿಕೊಂಡಿದ್ದಾರೆ. ಕನಕಪುರದ ಜನತೆ ಮತೀಯ ಶಕ್ತಿಗಳ ವಿರುದ್ಧ ಒಗ್ಗಟ್ಟಿನಿಂದ ನಿಲ್ಲುತ್ತಾರೆ, ಕೋಮುಶಕ್ತಿಗಳ ಯಾವುದೇ ಪ್ರೇರಣೆ, ಹುನ್ನಾರಗಳಿಗೂ ಬಲಿಯಾಗುವುದಿಲ್ಲ. ಭ್ರಾತೃತ್ವವನ್ನು ಎತ್ತಿ ಹಿಡಿಯುತ್ತಾರೆ, ಸಾಮರಸ್ಯ, ಸೌಹಾರ್ಧತೆ ಕಾಪಾಡುತ್ತಾರೆಂಬ ಅದಮ್ಯ ವಿಶ್ವಾಸ, ನಂಬಿಕೆ ನನ್ನದು. ನಾವೆಲ್ಲರೂ ಶಾಂತಿಯಿಂದಲೇ ವಿಕೃತ ಮನಸ್ಸಿನ ಕೋಮುಶಕ್ತಿಗಳ ಸಂಚನ್ನು ಹಿಮ್ಮೆಟ್ಟಿಸೋಣ" ಎಂದು ಅವರು ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com