ಬೆಂಗಳೂರು: ಜ್ಞಾನಭಾರತಿ ವಿಶ್ವವಿದ್ಯಾಲಯದ ಹಾಸ್ಟೆಲ್ ನಲ್ಲಿ ಹಿರಿಯ ವಿದ್ಯಾರ್ಥಿಗಳ ಗುಂಪು ಇಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ನಡೆದಿದೆ.
ಸ್ನಾತಕೋತ್ತರ ವಿದ್ಯಾರ್ಥಿಗಳಾದ ಬಸವರಾಜ್ ಹಾಗೂ ಮಾರಪ್ಪ ಹಲ್ಲೆಗೊಳಗಾದವರು. ಈ ಸಂಬಂಧ ನಾಲ್ವರ ವಿರುದ್ಧ ಜ್ಞಾನಭಾರತಿ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆ ಖಂಡಿಸಿ ಕಿರಿಯ ವಿದ್ಯಾರ್ಥಿಗಳು ವಿವಿ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದು, ಕುಲಪತಿ ವೇಮುಗೋಪಾಲ್ ಅವರು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.
ಶುಕ್ರವಾರ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಮಾರಪ್ಪನ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆಯಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಸೇರಿ ಹಾಸ್ಟೆಲ್'ನ 163ನೇ ಕೊಠಡಿಯಲ್ಲಿ ಹುಟ್ಟುಹಬ್ಬ ಏರ್ಪಡಿಸಿದ್ದರು. ಆತನ ಸ್ನೇಹಿತ ಬಸವರಾಜ್ ಕೂಡ ಹುಟ್ಟುಹಬ್ಬ ಆಚರಣೆಯಲ್ಲಿ ಪಾಲ್ಗೊಂಡಿದ್ದ. ಕೇಕ್ ಕತ್ತರಿಸಿದ ಬಳಿಕ ಅದೇ ಕೊಠಡಿಯಲ್ಲಿ ಊಟ ಮಾಡಿದ್ದರು.
ಇದೇ ವೇಳೆ ಹಿರಿಯ ವಿದ್ಯಾರ್ಥಿಗಳಾದ ರವಿತೇಜ್, ಶ್ರೀಕಾಂತ್, ಸ್ಟಾಲಿನ್, ಕೃಷ್ಣ ಹಾಗೂ ಇತರೆ ಬಿಪಿಎಡ್ ವಿದ್ಯಾರ್ಥಿಗಳು ಏಕಾಏಕಿ 163ರ ಕೊಠಡಿಗೆ ನುಗ್ಗಿ, ಬಸವರಾಜ್ ಜೊತೆ ಗಲಾಟೆ ಆರಂಭಿಸಿದ್ದಾರೆ. ಈ ವೇಳೆ ಕೊಠಡಿಯಿಂದ ಹೊರಹೋಗಲು ಮುಂದಾದ ಬಸವರಾಜ್, ಮಾರಪ್ಪನನ್ನು ಹಿಡಿದು ಮನಸೋ ಇಚ್ಛೆ ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement