ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ(ಬಿಬಿಎಂಪಿ)12 ಸ್ಥಾಯಿ ಸಮಿತಿಗಳಿಗೆ 131 ಸದಸ್ಯರು ಶನಿವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎಲ್ಲಾ 12 ಸಮಿತಿಗಳಿಗೆ 11 ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಮಾತ್ರ 10 ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಒಂದು ವಾರದ ಬಳಿಕ ಮೇಯರ್ ನೇತೃತ್ವದಲ್ಲಿ ಅಧ್ಯಕ್ಷರ ಆಯ್ಕೆ ನಡೆಯಲಿದೆ.
ಸದಸ್ಯರ ಅಸಮಾಧಾನ, ಮಹಿಳೆಯರ ಕಣ್ಣೀರಿನ ನಡುವೆ ಬಿಬಿಎಂಪಿ 12 ಬಹುಬೇಡಿಕೆಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಎಲ್. ಶ್ರೀನಿವಾಸ್ ಆಯ್ಕೆ ಬಹುತೇಕ ಖಚಿತವಾಗಿದೆ. ಉಳಿದಂತೆ ನಗರಯೋಜನೆ ಸ್ಥಾಯಿ ಸಮಿತಿಗೆ ಅಶಾ ಸುರೇಶ್, ಬೃಹತ್ ಕಾಮಗಾರಿ ಸ್ಥಾಯಿ ಸಮಿತಿಗೆ ಮೋಹನ್ ಕುಮಾರ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಹನುಮಂತಯ್ಯ, ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಮಮತ ಶರವಣ, ಆರೋಗ್ಯ ಸ್ಥಾಯಿ ಸಮಿತಿಗೆ ಮಂಜುನಾಥ ರಾಜು, ಶಿಕ್ಷಣ ಸ್ಥಾಯಿ ಸಮಿತಿಗೆ ಮಂಜುಳ ನಾರಾಯಣ ಸ್ವಾಮಿ, ಸಿಬ್ಬಂದಿ ಸುಧಾರಣೆ ಸ್ಥಾಯಿ ಸಮಿತಿಗೆ ಅರುಣ ರವಿ, ಅಪೀಲು ಸ್ಥಾಯಿ ಸಮಿತಿಗೆ ಗುಂಡಣ್ಣ, ತೋಟಗಾರಿಕೆ ಸ್ಥಾಯಿ ಸಮಿತಿಗೆ ಉಮಾದೇವಿ, ಮಾರುಕಟ್ಟೆ ಸ್ಥಾಯಿ ಸಮಿತಿಗೆ ಪದ್ಮಾವತಿ, ವಾರ್ಡ್ ಕಾಮಗಾರಿ ಸ್ಥಾಯಿ ಸಮಿತಿಗೆ ಜಿ.ಕೆ ವೆಂಕಟೇಶ್ ಅವರ ಆಯ್ಕೆ ಬಹುತೇಕ ನಿಚ್ಚಳವಾಗಿದೆ.
ಇಂದು ಬಿಬಿಎಂಪಿಯ 12 ಸ್ಥಾಯಿ ಸಮಿತಿಯ ಸ್ಥಾನಗಳಿಗೆ ಪಾಲಿಕೆ ಕೇಂದ್ರ ಕಛೇರಿ ಕೆಂಪೇಗೌಡ ಪೌರ ಸಭಾಂಗಣದ ಸಭಾಂಗಣ - 01 ರಲ್ಲಿ ಅಪರ ಆಯುಕ್ತ(ಆಡಳಿತ) ಅನ್ಬುಕುಮಾರ್ರವರ ನೇತೃತ್ವದಲ್ಲಿ ಬೆಳಗ್ಗೆ 8.00 ರಿಂದ 9.30 ರವರೆಗೆ ನಾಮಪತ್ರವನ್ನು ಸ್ವೀಕರಿಸಲಾಯಿತು. ತದನಂದರ ಕೆಂಪೇಗೌಡ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಡಾ. ಎನ್.ವಿ. ಪ್ರಸಾದ್ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆಯಿತು.
Advertisement