ಮಕ್ಕಳ ಹಕ್ಕುಗಳ ಆಯೋಗಕ್ಕೆ ತಾರಾ ನೇಮಕ ಕಾನೂನು ಬಾಹಿರ, ಸಿಎಂ ಯಡಿಯೂರಪ್ಪ ಶಿಫಾರಸ್ಸು ವಾಪಸ್!

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಚಿತ್ರನಟಿ ಶೃತಿ ಅವರನ್ನು ಹಾಗೂ ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ವಿಧಾನಪರಿಷತ್ ಮಾಜಿ ಸದಸ್ಯೆ ತಾರಾ ಅನುರಾಧ ಅವರನ್ನು ನೇಮಿಸಿರುವ ಮುಖ್ಯಮಂತ್ರಿ....
ತಾರಾ (ಸಂಗ್ರಹ ಚಿತ್ರ)
ತಾರಾ (ಸಂಗ್ರಹ ಚಿತ್ರ)

ಬೆಂಗಳೂರು: ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಚಿತ್ರನಟಿ ಶೃತಿ ಅವರನ್ನು ಹಾಗೂ ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ವಿಧಾನಪರಿಷತ್ ಮಾಜಿ ಸದಸ್ಯೆ ತಾರಾ ಅನುರಾಧ ಅವರನ್ನು ನೇಮಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಡೆ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. 

ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಶೃತಿ ಅವರ ನೇಮಕ ಮಾಡಲು ಯಾವುದೇ ಅಡ್ಡಿ ಎದುರಾಗಿಲ್ಲ. ಆದರೆ ಮಕ್ಕಳ ಹಕ್ಕುಗಳ ಆಯೋಗಕ್ಕೆ ತಾರಾ ಅನುರಾದ ಹೆಸರು ಪರಿಗಣನೆಯಾಗಿಲ್ಲ. ತಾರಾ ಅವರ ನೇಮಕಾತಿ ಕಡತ ನೇಮಕ ಮಾಡಲು ನಿಯಮಗಳಡಿ ಸಾಧ್ಯವಿಲ್ಲ ಎಂಬ ಹಿಂಬರಹದೊಂದಿಗೆ ವಾಪಸಾಗಿದೆ. ನಿಯಮಗಳನ್ನು ತಿಳಿಯದೆಯೇ ಯಡಿಯೂರಪ್ಪ ಹೆಸರನ್ನು ಶಿಫಾರಸು ಮಾಡಿ ಮುಖ್ಯಮಂತ್ರಿ ಅವರು ಸಹಿ ಹಾಕಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. 

ಜ‌ .1ರಂದು ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಕಮಾಡುವಾಗ ಈ ಎರಡು ಸ್ಥಾನಕ್ಕೆ‌ ಹೆಸರನ್ನು ಶಿಫಾರಸು ಮಾಡಿ ತಕ್ಷಣದಿಂದ ಆದೇಶ ಜಾರಿ ಮಾಡುವಂತೆ ಯಡಿಯೂರಪ್ಪ ಸೂಚಿಸಿದ್ದರು. ಆದೇಶ ಪ್ರತಿ ಮಕ್ಕಳ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆಗೆ ಹೋಗಿದೆ‌. ಆದರೆ ಅವಧಿ ಮುಗಿಯುವ ಮೊದಲೇ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಅಧ್ಯಕ್ಷರ ನೇಮಕಾತಿ ಮಾಡಲು ಸಾಧ್ಯವಿಲ್ಲ ಎಂಬ ಸಚಿವೆ ಶಶಿಕಲಾ‌ ಜೊಲ್ಲೆ ಅವರ ಹಿಂಬರಹದೊಂದಿಗೆ ಪತ್ರ ಜ.10ರಂದು ಮುಖ್ಯಮಂತ್ರಿಗಳ ಕಚೇರಿಗೆ ವಾಪಸು ಬಂದಿದೆ. ಆದರೆ ಸೋಮವಾರ ಜ.20ರಂದು ಆದೇಶ ಹೊರಡಿಸಲಾಗಿದೆ. 

ಸಂಪುಟ ರಚನೆ ಬಳಿಕ ತಾರಾ ಅನುರೂಧ ಸೇರಿದಂತೆ ಹಲವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದರು. ಅದರಂತೆ ತಾರಾ ಅವರ ಹೆಸರನ್ನು ಮಕ್ಕಳ ರಕ್ಷಣಾ ಆಯೋಗಕ್ಕೆ ಶಿಫಾರಸು ಮಾಡಿದಾರೆ. ಶಿಫಾರಸು ಪತ್ರಕ್ಕೆ ಸಹಿ ಹಾಕಿದ್ದಾರಾದರೂ ಈ ಆಯೋಗದ ನಿಯಮದ ಬಗ್ಗೆ ಅಧಿಕಾರಿಗಳು ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಿಲ್ಲ ಎನ್ನಲಾಗಿದೆ. 

ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ  ಸ್ಥಾನ ಮೂರು ವರ್ಷಗಳ ಅವಧಿಯದ್ದು. ಇದು ಸಂವಿಧಾನಿಕ ಹುದ್ದೆ. ಈ ಹುದ್ದೆಗೆ ನಾಮನಿರ್ದೇಶನ ಮಾಡುವುದಾಗಲೀ, ನೇರ ನೇಮಕಾತಿ ಮಾಡಲು ಅವಕಾಶವಿಲ್ಲ. ಈ ಹುದ್ದೆ ನೇಮಕಕ್ಕೂ ಮುನ್ನ ಅರ್ಜಿ ಆಹ್ವಾನಿಸಲಾಗುತ್ತದೆ. ಸಮಿತಿ ಅಂತಿಮಗೊಂಡ ಪಟ್ಟಿಯಲ್ಲಿ ಮೊದಲಿಗರನ್ನು ಅಧ್ಯಕ್ಷರನ್ನಾಗಿ ಮಾಡಲಾಗುತ್ತದೆ. 
ವಿಶೇಷ ಎಂದರೆ ಈ ಹುದ್ದೆಗೆ ಯಾವುದೇ ರಾಜಕೀಯ ವ್ಯಕ್ತಿಗಳನ್ನು ನೇಮಿಸಲು ಬರುವುದಿಲ್ಲ. ಒಂದು ವೇಳೆ ನೇಮಿಸುವುದಾದರೆ ಆ ವ್ಯಕ್ತಿ ತಾನು ಯಾವುದೇ ರಾಜಕೀಯ ಪಕ್ಷದ ಸದಸ್ಯನಲ್ಲ ಎಂದು ಷರಾ ನಮೂದಿಸಬೇಕು. ಒಂದು ವೇಳೆ ಅಧ್ಯಕ್ಷರನ್ನು ಬದಲಾಯಿಸಬೇಕಾದರೆ ಅಥವಾ ಅವರ ಸೇವೆ ಉತ್ತಮವಾಗಿರದಿದ್ದರೆ ಸಮಿತಿಯ ಅಂತಿಮ ಪಟ್ಟಿಯಲ್ಲಿನ ಎರಡನೇ ಸ್ಥಾನದಲ್ಲಿರುವವರನ್ನು ನೇಮಿಸಬಹುದಾಗಿದೆ. 

ಮಕ್ಕಳ ಕಲ್ಯಾಣ ಅಭಿವೃದ್ಧಿ 2005ರ ಕೇಂದ್ರದ ಕಾಯಿದೆ ಇದಾಗಿದ್ದು, ನಿಯಮ 70ರಡಿಯಲ್ಲಿ ಈ ಬಗ್ಗೆ ವಿವರವಾಗಿ ಹೇಳಲಾಗಿದೆ.
ಅಂತೋನಿ ಸಬಾಸ್ಟಿಯನ್ ಎನ್ನುವವರು ಸದ್ಯ ಅಧ್ಯಕ್ಷರಾಗಿದ್ದು ಕಳೆದ ಡಿ‌2018ರಲ್ಲಿ ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಮೂರು ವರ್ಷಗಳ ಅವಧಿಗೆ ನೇಮಕಗೊಂಡಿದ್ದು ಇನ್ನೂಎರಡು ವರ್ಷ ಆಯೋಗಕ್ಕೆ ನೇಮಕ ಮಾಡಲು ಸಾಧ್ಯವಿಲ್ಲ.

ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಆ ಸರ್ಕಾರದಲ್ಲಿ ನೇಮಕಗೊಂಡಿದ್ದ ನಿಗಮಮಂಡಳಿಯ ಹುದ್ದೆಯನ್ನು ಸರ್ಕಾರ ಬದಲಾಯಿಸಿತ್ತು. ಆದರೆ ಮಕ್ಕಳ ರಕ್ಷಣಾ ಆಯೋಗದ ನಿಗಮದ ಅಧ್ಯಕ್ಷರನ್ನು ಬದಲಾಯಿಸಲು ಸಾಧ್ಯವಿಲ್ಲ. ಇಷ್ಟೆಲ್ಲ ಕಾನೂನು ನಿಯಮ ಇದ್ದರೂ ಸಹ ಮುಖ್ಯಮಂತ್ರಿ ಯಡಿಯೂರಪ್ಪ ತಾರಾ ಹೆಸರಿನ ಶಿಫಾರಸಿಗೆ ಆದೇಶ ಮಾಡಿದ್ದು ಏಕೆ? ನಿಯಮ ಕಾಯಿದೆ ತಿಳಿಯದೆಯೇ ಸಹಿ ಹಾಕಿದರಾ? ಎನ್ನುವ ಚರ್ಚೆ ನಡೆಯುತ್ತಿದೆ. 

ಯುಎನ್ಐ ಕನ್ನಡ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮಕ್ಕಳಾ ಕಲ್ಯಾಣಾಭಿವೃದ್ಧಿ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ಶಿಲ್ಪಾ, "ಈ ಹುದ್ದೆಯ ಅವಧಿ ಇನ್ನೂ ಪೂರ್ಣಗೊಂಡಿಲ್ಲ‌. ಈಗಾಗಲೇ ಅಂತೋನಿ ಸಬಾಸ್ಟಿಯೇನ್ ಅಧ್ಯಕ್ಷರಾಗಿ ಇರುವುದರಿಂದ ಬದಲಾವಣೆ ಮಾಡಲು ಬರುವುದಿಲ್ಲ‌‌. ಈ ಹುದ್ದೆಗೆ ತಾರಾ ಅವರ ನೇಮಕಕ್ಕೆ ಮುಖ್ಯಮಂತ್ರಿಗಳ ಶಿಫಾರಸು ಪತ್ರ ಬಂದಿತ್ತಾದರೂ ನಿಯಮಗಳ ಪ್ರಕಾರ  ನೇಮಕ ಸಾಧ್ಯವಿಲ್ಲ ಎಂದು ಸಚಿವೆ ಶಶಿಕಲಾ ಜೊಲ್ಲೆ ಅವರು ಸ್ಪಷ್ಟಪಡಿಸಿ ಪತ್ರವನ್ನು ಮುಖ್ಯಮಂತ್ರಿಗಳ ಕಚೇರಿಗೆ ಹಿಂದೆ ಕಳುಹಿಸಿದ್ದಾರೆ ಎಂದರು. 

ತಾರಾ ಅನುರಾಧ ಮಾತನಾಡಿ, ಸಚಿವ ಸಂಪುಟ ಬಳಿಕ ನಿಗಮ‌ - ಮಂಡಳಿಗೆ ನೇಮಕ ಮಾಡುವುದಾಗಿ ಮುಖ್ಯಮಂತ್ರಿ  ಯಡಿಯೂರಪ್ಪ ತಮಗೆ ತಿಳಿಸಿದ್ದರು. ಇದರ ಅನುಸಾರ ಮಕ್ಕಳ ರಕ್ಷಣಾ ಆಯೋಗಕ್ಕೆ ಶಿಫಾರಸು ಮಾಡಿದ್ದರು. ಆದರೆ ಜ. 10ರಂದು ಮಹಿಳಾ ಮತ್ತು ಮಕ್ಕಳಾ ಕಲ್ಯಾಣ ಇಲಾಖೆಯಿಂದ ಪತ್ರ ಹಿಂದೆಕ್ಕೆ ಹೋಗಿದೆ. ನಿಯಮದಲ್ಲಿ ನೇಮಕಾತಿ ಮಾಡಲು ಬರುವುದಿಲ್ಲ ಎಂಬ ಕಾರಣವನ್ನು ಇಲಾಖೆ ನೀಡಿದೆ" ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com