ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾದವರೆಲ್ಲರೂ ಮುಸ್ಲೀಮರೇ: ರೇಣುಕಾಚಾರ್ಯ

ಮುಸ್ಲೀಮರೆಲ್ಲಾ ಭಯೋತ್ಪಾದಕರಲ್ಲ. ಆದರೆ ಇದುವರೆಗಿನ ಎಲ್ಲಾ ಭಯೋತ್ಪಾದಕ ಪ್ರಕರಣಗಳಲ್ಲಿ ಭಾಗಿಯಾಗಿರುವವರೆಲ್ಲರೂ ಮುಸ್ಲೀಮರೇ ಎಂದು ಬಿಜೆಪಿ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ. 
ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾದವರೆಲ್ಲರೂ ಮುಸ್ಲೀಮರೇ: ರೇಣುಕಾಚಾರ್ಯ
ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾದವರೆಲ್ಲರೂ ಮುಸ್ಲೀಮರೇ: ರೇಣುಕಾಚಾರ್ಯ

ಬೆಂಗಳೂರು: ಮುಸ್ಲೀಮರೆಲ್ಲಾ ಭಯೋತ್ಪಾದಕರಲ್ಲ. ಆದರೆ ಇದುವರೆಗಿನ ಎಲ್ಲಾ ಭಯೋತ್ಪಾದಕ ಪ್ರಕರಣಗಳಲ್ಲಿ ಭಾಗಿಯಾಗಿರುವವರೆಲ್ಲರೂ ಮುಸ್ಲೀಮರೇ ಎಂದು ಬಿಜೆಪಿ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲೀಂ ಸಮುದಾಯದವರೆಲ್ಲ ಭಯೋತ್ಪಾದಕರಲ್ಲ ಎಂಬುದನ್ನು ಒಪ್ಪುತ್ತೇನೆ. ನಾವು ಸಹ ಮುಸ್ಲೀಮರನ್ನು ಗೌರವಿಸುತ್ತೇವೆ. ಆದರೆ ಮದರಸಾಗಳಲ್ಲಿ ಭಯೋತ್ಪಾದನೆ ಬೋಧಿಸಲಾಗುತ್ತಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಪ್ರತಿಭಟನೆಗೆ ಕೆಲವು ಮಸೀದಿಗಳಲ್ಲಿ ಫತ್ವಾ ಹೊರಡಿಸಲಾಗಿದೆ. ಈ ದೇಶದಲ್ಲಿ ಹುಟ್ಟಿದವರೇ ಆಗಿದ್ದರೆ ಮುಸ್ಲೀಮರು ಪೌರತ್ವ ಕಾಯ್ದೆ ವಿರೋಧಿಸುತ್ತಿರಲಿಲ್ಲ ಎಂದರು. 

ನಮ್ಮ ದೇವಸ್ಥಾನಗಳಲ್ಲಿ ಕುಂಕುಮ ಪ್ರಸಾದ ವಿತರಣೆ ಮಾಡಿದರೆ ಕೆಲವು ಮಸೀದಿಗಳಲ್ಲಿ ಭಯೋತ್ಪಾದನೆ ಹುಟ್ಟುಹಾಕುವ ಜತೆಗೆ  ಮದ್ದುಗುಂಡುಗಳ ಸಂಗ್ರಹಣೆ ಮಾಡುತ್ತಿದ್ದಾರೆ. ನಮಗೂ ತಾಳ್ಮೆ ಇದ್ದು, ನಮ್ಮ ತಾಳ್ಮೆ ಕೆಣಕಬೇಡಿ ಎಂದು ರೇಣುಕಾಚಾರ್ಯ ಮುಸ್ಲೀಂ ಸಮುದಾಯಕ್ಕೆ ಎಚ್ಚರಿಕೆ ನೀಡಿದರು. 

ಪೌರತ್ವ ತಿದ್ದುಪಡಿ ಕಾಯ್ದೆ ಪರ ಮತ್ತು ವಿರುದ್ದವಾಗಿ ದೇಶದ ಉದ್ದಗಲಕ್ಕೆ ಚರ್ಚೆಯಾಗುತ್ತಿದ್ದು, ಕಾಯ್ದೆ ಬಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಅಪ ಪ್ರಚಾರ ಮಾಡುತ್ತಿದ್ದಾರೆ.  ಇದು ಖಂಡನೀಯ. ಕೆಲವು ಮುಸಲ್ಮಾನ ಸಂಘಟನೆಗಳೊಂದಿಗೆ ಸೇರಿ ಮಸೀದಿಗಳಲ್ಲಿ ಪತ್ವ ಹೊರಡಿಸಿ ಕಾಯ್ದೆ ವಿರುದ್ಧ ಹೋರಾಟ ಸಂಘಟಿಸುತ್ತಿದ್ದಾರೆ ಎಂದು ಆರೋಪಿಸಿದರು. 

ಕಾಂಗ್ರೆಸ್, ಜೆಡಿಎಸ್ ಪಕ್ಷಗಳನ್ನು ಜನ ಸಂಪೂರ್ಣವಾಗಿ ತಿರಸ್ಕರಿಸಿದ್ದು, ಮತಬ್ಯಾಂಕ್ ರಾಜಕಾರಣಕ್ಕಾಗಿ ಪೌರತ್ವ ತಿದ್ದಪಡಿಯನ್ನು ವಿರೋಧಿಸಬೇಡಿ. ಈ ತಿದ್ದುಪಡಿ ಕಾಯ್ದೆಯಲ್ಲಿ ಒಂದೇ ಒಂದು ತಪ್ಪು ಅಂಶ ತೋರಿಸಿ ನೋಡೋಣ ಎಂದು ಸವಾಲು ಹಾಕಿದ ರೇಣುಕಾಚಾರ್ಯ, ವಿನಾ ಕಾರಣ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದರು. 

ಕಾಂಗ್ರೆಸ್ ಮುಖಂಡರಾದ ಜಮೀರ್ ಅಹ್ಮದ್, ಯು.ಟಿ ಖಾದರ್ ದೇಶ ದ್ರೋಹಿಗಳು. ಸಂಘ ಪರಿವಾರವನ್ನು ನಿಷೇಧಿಸಬೇಕು ಎಂದು ಹೇಳುತ್ತಿದ್ದಾರೆ. ಆದರೆ ಸಂಘ ಪರಿವಾರದವರು ದೇಶ ಉಳಿಸುವ ಕೆಲಸ ಮಾಡುತ್ತಿದ್ದಾರೆ. ನೆರೆ, ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಸ್ವಯಂ ಸೇವಕರಂತೆ ತೊಡಗಿಸಿಕೊಂಡು, ಜೀವ ಪಣಕ್ಕಿಟ್ಟು ಕೆಲಸ ಮಾಡುವ ಸಂಸ್ಕೃತಿ ಹೊಂದಿದ್ದಾರೆ. ಸಂಘ ಪರಿವಾರದ ಬಗ್ಗೆ ಈ ರೀತಿ ಮಾತಾಡಿದರೆ ಸರಿ ಇರಲ್ಲ ಎಂದು ಎಚ್ಚರಿಕೆ ನೀಡಿದರು. 

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಜೆಡಿಎಸ್ ಕಾರ್ಯಕರ್ತನಿಗೆ ಹಲ್ಲೆ ಮಾಡಿದ ಕಾರಣಕ್ಕೆ ತಪ್ಪಿತಸ್ಥರನ್ನು ಶೂಟ್ ಮಾಡಿ ಎಂದು ಹೇಳಿದ್ದರು. ಈಗ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸವನ್ನು ಇವರು ಮಾಡಿರಲಿಲ್ಲವೆ?. ನಿಮಗೆ ಅಂಗ ರಕ್ಷಕರಾಗಿ ಪೊಲೀಸರು ಬೇಕು. ಆದರೆ ಉಳಿದ ಪೊಲೀಸರ ಬಗ್ಗೆ ಗೌರವ ಹೊಂದಿಲ್ಲ. ಮಂಗಳೂರಲ್ಲಿ ಸಿಕ್ಕಿದ ಸ್ಪೋಟಕ ಮುಖಕ್ಕೆ ಹಾಕುವ ಪೌಡರ್ ಆಗಿರುತ್ತದೆ. ಇದೆನಾ ನಿಮ್ಮ ಕಾಳಜಿ ಎಂದು ವ್ಯಂಗ್ಯವಾಡಿದರು. 

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹಜ್ ಭವನ ನಿರ್ಮಿಸಿದ್ದರು. ಶಾದಿ ಮಹಲ್ ಗಳಿಗೆ ಹಣ ಕೊಟ್ಟರು. ಆದರೆ ಕುಮಾರಸ್ವಾಮಿ ಮುಸ್ಲೀಂ ಸಮುದಾಯಕ್ಕೆ ಏನು ಮಾಡಿದ್ದಾರೆ. ನನ್ನ ಕ್ಷೇತ್ರದಲ್ಲಿ ಎಂಟರಿಂದ ಹತ್ತು ಸಾವಿರ ಮುಸ್ಲೀಂ ಸಮುದಾಯದವರಿದ್ದು, ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಇನ್ನು ಕೆಲವರು ನಮಗೆ ಮತಹಾಕಿಲ್ಲ. ಹಾಗೆಂದು ನಾವು ಅವರನ್ನು ದ್ವೇಷಿಸಲು ಸಾಧ್ಯವಿಲ್ಲ ಎಂದರು. 

ಕಳೆದ 2005 ರಲ್ಲಿ ನ್ಯಾಶನಲ್ ಟ್ರಾವೆಲ್ಸ್ ನಲ್ಲಿ ಬಂದೂಕು ಸಿಕ್ಕಿತ್ತು. ಈ ಬಗ್ಗೆ ಮಾಧ್ಯಮಗಳಲ್ಲೂ ವರದಿಯಾಗಿತ್ತು. ಇದು ಅಪರಾಧ ಅಲ್ಲವೆ?. ಅಂಥವರನ್ನ ಪ್ರೀತಿ ಮಾಡಬೇಕೆ. 2005ರಲ್ಲಿ ಜಮೀರ್ ಅಹಮದ್ ಅವರ ಮಾಲೀಕತ್ವದ ನ್ಯಾಷನಲ್ ಟ್ರಾವಲ್ಸ್ ನಲ್ಲಿ ಬಂದೂಕಗಳು ಸಿಕ್ಕಿಬಿದ್ದಿದ್ದವು. ಆಗ ಜಮೀರ್ ದುಬೈಗೆ ಹೋಗಿ ಬಂದಿದ್ದರು. ಇದು ಜಮೀರ್ ಅಹಮದ್ ಅವರ ದೇಶದ್ರೋಹ ಕೃತ್ಯವಲ್ಲವೇ ಎಂದರು. 

ನಾವು ಇಡೀ ಕರ್ನಾಟಕವನ್ನೇ ಕೇಸರೀಕರಣ ಮಾಡುತ್ತೇವೆ. ಹಿಂದುತ್ವದ ಬಗ್ಗೆ ಯುವಕರಲ್ಲಿ ಅರಿವು ಮೂಡಿಸುತ್ತೇವೆ. ಕೇಸರಿಕರಣ ಎಂದರೆ ಕೇಸರಿಶಾಲು ಹಾಕುವುದಲ್ಲ. ನಾವು ಕ್ರಾಂತಿ ಮಾಡುವುದಿಲ್ಲ. ಶಾಂತಿ ಹರಡುತ್ತೇವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com