ಮಂಗಳೂರು ಅಷ್ಟೇ ಅಲ್ಲ, ಬೆಂಗಳೂರು ವಿಮಾನ ನಿಲ್ದಾಣದಲ್ಲೂ ಬಾಂಬ್ ಇಟ್ಟಿದ್ದ!

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟು ಇದೀಗ ಪೊಲೀಸರಿಗೆ ಶರಣಾಗಿರುವ ಆರೋಪಿ ಆದಿತ್ಯಾ ರಾವ್ ಈ ಹಿಂದೆ ಬೆಂಗಳೂರು ವಿಮಾನ ನಿಲ್ದಾಣದಲ್ಲೂ ಬಾಂಬ್ ಇಟ್ಟಿದ್ದ ಎಂಬ ಸ್ಫೋಟಕ ಮಾಹಿತಿ ಪೊಲೀಸರಿಂದ ಲಭ್ಯವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟು ಇದೀಗ ಪೊಲೀಸರಿಗೆ ಶರಣಾಗಿರುವ ಆರೋಪಿ ಆದಿತ್ಯಾ ರಾವ್ ಈ ಹಿಂದೆ ಬೆಂಗಳೂರು ವಿಮಾನ ನಿಲ್ದಾಣದಲ್ಲೂ ಬಾಂಬ್ ಇಟ್ಟಿದ್ದ ಎಂಬ ಸ್ಫೋಟಕ ಮಾಹಿತಿ ಪೊಲೀಸರಿಂದ ಲಭ್ಯವಾಗಿದೆ.

ಇಷ್ಟಕ್ಕೂ ಯಾರು ಈ ಆದಿತ್ಯ ರಾವ್?
ಉಡುಪಿಯ ಮಣಿಪಾಲ ಮೂಲದ ಎಂಜಿನಿಯರ್ ಆಗಿರುವ ಆದಿತ್ಯ ರಾವ್ ಈ ಹಿಂದೆಯೂ ಹುಸಿಬಾಂಬ್ ಕರೆ ಮಾಡಿ ಜೈಲು ಶಿಕ್ಷೆ ಅನುಭವಿಸಿದ್ದ. 2012ರಲ್ಲಿ ಖಾಸಗಿ ಬ್ಯಾಂಕಲ್ಲೂ ಕೆಲಸ ಮಾಡಿದ್ದ ಈತ ಬೆಂಗಳೂರಿನಲ್ಲಿ ಈ ಹಿಂದೆ ವಿಮಾನ ನಿಲ್ದಾಣಕ್ಕೆ ಹುಸಿಬಾಂಬ್ ಬೆದರಿಕೆ ಹಾಕಿದ್ದ. ಹುಸಿಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ 9 ತಿಂಗಳು ಜೈಲುವಾಸ ಅನುಭವಿಸಿದ್ದ. ಜೈಲುವಾಸ ಬಳಿಕ ಕೆಲಸ ಸಿಗದೇ ಮಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.

ಕುಂದಾಪುರ ಮೂಲದ ಆರೋಪಿ, ಉಡುಪಿಯ ಮಣಿಪಾಲ್‌ನ ಕೆಎಚ್‌ಬಿ ಕಾಲೊನಿಯಲ್ಲಿ ಕೆಲ ವರ್ಷಗಳ ಕಾಲ ವಾಸವಿದ್ದ. ಮಣಿಪಾಲ್‌ದಲ್ಲೇ 2007ರಲ್ಲಿ ಎಂಬಿಎ ಪದವಿ ಮುಗಿಸಿ ಕೆಲಸ ಅರಸಿ ಬೆಂಗಳೂರಿಗೆ ಬಂದು ಎಂ.ಜಿ.ರಸ್ತೆಯಲ್ಲಿರುವ ಪ್ರತಿಷ್ಠಿತ ಬಹುರಾಷ್ಟ್ರೀಯ ಬ್ಯಾಂಕ್‌ನಲ್ಲಿ ಕೆಲಸಕ್ಕೆ ಸೇರಿದ್ದ. ಒಂದು ವರ್ಷದ ಬಳಿಕ ಅಲ್ಲಿ ಕೆಲಸ ತೊರೆದು, ಮತ್ತೊಂದು ಬ್ಯಾಂಕ್‌ನಲ್ಲಿ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಹುದ್ದೆಗೆ ಸೇರಿದ್ದ. ಅಲ್ಲಿ ಬರೀ ಆರು ತಿಂಗಳು ಕೆಲಸ ಮಾಡಿ, ಮತ್ತೆ ಈ ಹಿಂದೆ ಕೆಲಸ ಮಾಡಿದ್ದ ಬ್ಯಾಂಕ್‌ನಲ್ಲೇ ಕೆಲಸಕ್ಕೆ ಸೇರಿದ್ದ. ಬ್ಯಾಂಕ್‌ನಲ್ಲಿ ಉತ್ತಮ ವೇತನ ದೊರಕುತ್ತಿತ್ತು. ಆದರೆ, ಆ ಕೆಲಸವನ್ನು ಬಿಟ್ಟು ಮೂಡಬಿದರೆಯ ಆಳ್ವಾಸ್‌ ಕಾಲೇಜಿನಲ್ಲಿ ಸೆಕ್ಯುರಿಟಿ ಕೆಲಸಕ್ಕೆ ಸೇರಿದ್ದ. ಅಲ್ಲಿ ಕೆಲ ದಿನ ಕೆಲಸ ಮಾಡಿ ಮಂಗಳೂರಿನ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಗಾರ್ಡ್‌ ಕೆಲಸಕ್ಕೆ ಸೇರಿದ್ದ.

ಎ.ಸಿ. ಆಗದ್ದಕ್ಕೆ ಕೆಲಸ ಬಿಟ್ಟಿದ್ದ ಭೂಪ
ನಿರರ್ಗಳವಾಗಿ ಇಂಗ್ಲಿಷ್‌ ಮಾತನಾಡುವ ಆರೋಪಿ ಆದಿತ್ಯಾ ರಾವ್ ಒಟ್ಟು ನಾಲ್ಕು ಸಿಮ್‌ ಕಾರ್ಡ್‌ಗಳನ್ನು ಬಳಕೆ ಮಾಡುತ್ತಿದ್ದ. ವಿಚಾರಣೆ ವೇಳೆ ಉತ್ತಮ ವೇತನದ ಬ್ಯಾಂಕ್‌ ಕೆಲಸ ಬಿಟ್ಟಿದ್ದು ಏಕೆ ಎಂದು ಕೇಳಿದಾಗ, ನನಗೆ ಎ.ಸಿ. ಎಂದರೆ ಆಗುವುದಿಲ್ಲ. ನನಗೆ ನೈಸರ್ಗಿಕ ಗಾಳಿ ಮತ್ತು ಬೆಳಕು ಇರುವ ಕಡೆ ಕೆಲಸ ಮಾಡಬೇಕು. ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು. ಅದಕ್ಕಾಗಿ ಸೆಕ್ಯುರಿಟಿ ಕೆಲಸ ಮಾಡಲು ಬಯಸಿದ್ದೆ ಎಂದು ಹೇಳಿದ್ದ. ಆರೋಪಿಯ ತಂದೆ ಬ್ಯಾಂಕ್‌ವೊಂದರ ನಿವೃತ್ತ ನೌಕರರಾಗಿದ್ದಾರೆ. ಸಹೋದರ ಬ್ಯಾಂಕ್‌ನಲ್ಲಿ ಕ್ಲರ್ಕ್‌ ಆಗಿ ಕೆಲಸ ಮಾಡುತ್ತಾರೆ. ಮದುವೆ ಆಗಿಲ್ಲವೇಕೆ ಎಂದು ಪೊಲೀಸರು ಕೇಳಿದಾಗ, ನಾನೇ ಬದುಕುವುದು ಕಷ್ಟ ಇನ್ನು ಹೆಂಡತಿ ಮಕ್ಕಳನ್ನು ಬೇರೆ ಸಾಕಬೇಕೇ ಎಂದು ಪ್ರಶ್ನೆ ಮಾಡಿದ್ದ. ಪಾಲಕರ ಬಳಿ ಆರೋಗ್ಯದ ಕುರಿತು ವಿಚಾರಿಸಿದಾಗ, ಆತನ ಆರೋಗ್ಯ ಸರಿಯಿದೆ ಎಂದು ತಿಳಿಸಿದ್ದಾರೆ.

ಏರ್‌ಪೋರ್ಟ್‌ನಲ್ಲಿ ಸೆಕ್ಯುರಿಟಿ ಕೆಲಸ ಕೇಳಿದ್ದ
ವಿಮಾ ಕಂಪನಿಯಲ್ಲಿ ಲ್ಯಾಪ್‌ಟಾಪ್‌ ಕಳವು ಮಾಡಿದ ಆದಿತ್ಯ, ಕೆಲ ದಿನಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಗಾರ್ಡ್‌ ಕೆಲಸ ಕೇಳಿಕೊಂಡು ಹೋಗಿದ್ದ. ಈ ವೇಳೆ ಸಂಬಂಧಪಟ್ಟವರು ಕೆಲಸ ಇಲ್ಲವೆಂದು ಹೇಳಿ ಕಳುಹಿಸಿದ್ದರು. ಇದರಿಂದ ಕುಪಿತಗೊಂಡ ಆದಿತ್ಯ, ದ್ವೇಷದಿಂದ ಇಂಟರ್‌ ನೆಟ್‌ನಲ್ಲಿ ವಿಮಾನ ನಿಲ್ದಾಣದ ಮಾಹಿತಿ ವಿಚಾರಣೆ ಸಂಖ್ಯೆ ಹುಡುಕಿ, ಆ.20ರಂದು ಹುಸಿ ಬಾಂಬ್‌ ಕರೆ ಕರೆ ಮಾಡಿದ್ದ. ಅದಾದ ಬಳಿಕ ಆ.27 ರಂದು ವಿಮಾನ ನಿಲ್ದಾಣದ ಏರ್‌ ಏಷಿಯಾ ಏರ್‌ಲೈನ್ಸ್‌ ಕೌಂಟರ್‌ಗೆ ಕರೆ ಮಾಡಿ, ಕೊಚ್ಚಿ ಮತ್ತು ಹೈದರಾಬಾದ್‌ಗೆ ಪ್ರಯಾಣಿಸುವ ವಿಮಾನ ಹಾಗೂ ಮುಂಬೈ, ಕೊಯಮತ್ತೂರು, ದೆಹಲಿಗೆ ಪ್ರಯಣಿಸುವ ವಿಮಾನಗಳಲ್ಲಿ ಬಾಂಬ್‌ ಇರಬಹುದು ಎಂದು ಬೆದರಿಕೆ ಹಾಕಿದ್ದ. 

ಶುಲ್ಕ ಕೇಳಿದ್ದಕ್ಕೆ ಬಾಂಬ್‌ ಬೆದರಿಕೆ !
ರೈಲು ನಿಲ್ದಾಣದ ಲಗೇಜ್‌ ಕೊಠಡಿಯಲ್ಲಿ ತನ್ನ ಬ್ಯಾಗ್‌ ಇರಿಸಿದ್ದ ಆರೋಪಿ ಆದಿತ್ಯ, ಲಗೇಜ್‌ ಮರಳಿ ಪಡೆಯುವಾಗ ಸಿಬ್ಬಂದಿ ಶುಲ್ಕ ಕಟ್ಟುವಂತೆ ಕೇಳಿದ್ದರು. ಈ ವೇಳೆ ನನ್ನ ಬಳಿಯೇ ಹಣ ಕೇಳುತ್ತೀರಾ ಎಂದು ಸಿಬ್ಬಂದಿ ಜತೆ ಜಗಳ ಮಾಡಿದ್ದ. ಅದೇ ದಿನ (ಆಗಸ್ಟ್ 27) ಸಂಜೆ 4 ಗಂಟೆಗೆ ರೈಲ್ವೆ ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ರೈಲ್ವೆ ನಿಲ್ದಾಣದ ಕ್ಲಾಕ್‌ ರೂಮ್‌ನಲ್ಲಿ ಬಾಂಬ್‌ ಇದೆ ಎಂದು ಹೇಳಿದ್ದ. ಪೊಲೀಸರು ತಪಾಸಣೆ ನಡೆಸಿದಾಗ ಅದೊಂದು ಹುಸಿ ಕರೆ ಎಂದು ಗೊತ್ತಾಗಿತ್ತು. ಪೇಯಿಂಗ್‌ ಗೆಸ್ಟ್‌ನಲ್ಲಿ ಲ್ಯಾಪ್‌ಟಾಪ್‌ ಕಳವು ಮಾಡಿದ್ದ ಬಗ್ಗೆ ವಿಚಾರಣೆ ನಡೆಸಿದಾಗ, ತನ್ನ ಕ್ರೆಡಿಟ್‌ ಕಾರ್ಡ್‌ ಬಿಲ್‌ ಹೆಚ್ಚಾಗಿತ್ತು. ಕಟ್ಟಲು ಸಾಧ್ಯವಾಗದೆ ಲ್ಯಾಪ್‌ಟಾಪ್‌ ಕದ್ದು, ಮಾರಾಟಕ್ಕೆ ಇಟ್ಟಿದ್ದಾಗಿ ತಪ್ಪೊಪ್ಪಿಕೊಂಡಿದ್ದ.

ಮಠದಲ್ಲೂ ಕೆಲಸ
ಚಂಚಲ ಮನಸ್ಸಿನ ವಿಚಿತ್ರ ಸ್ವಭಾವದ ಆರೋಪಿ, 2013ರಲ್ಲಿ ಉಡುಪಿಯ ಪುತ್ತಿಗೆ ಮಠಕ್ಕೆ ತೆರಳಿ ಅಡುಗೆ ಸಹಾಯಕನಾಗಿ ಕೆಲ ಕಾಲ ಕೆಲಸ ಮಾಡಿದ್ದಾನೆ. ತದ ನಂತರ ವಾಪಸ್‌ ಬೆಂಗಳೂರಿಗೆ ಬಂದು ಜಯನಗರದ ಜೀವ ವಿಮಾ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ. ಕೆಲಸ ಮಾಡುವ ಕಂಪನಿಯ ಲ್ಯಾಪ್‌ಟಾಪ್‌ ಕಳ್ಳತನ ಮಾಡಿ ಕೆಲಸ ತೊರೆದಿದ್ದ. ಈ ಬಗ್ಗೆ ಜಯನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸುದ್ದಗುಂಟೆಪಾಳ್ಯದಲ್ಲಿರುವ ಪೇಯಿಂಗ್‌ ಗೆಸ್ಟ್‌ನಲ್ಲಿ ವಾಸವಿದ್ದ ಆರೋಪಿ, ರೂಮ್‌ಮೇಟ್‌ನ ಲ್ಯಾಪ್‌ಟಾಪ್‌ ಕಳವು ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಜೂನ್ 30ರಂದು ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಆದಿತ್ಯನ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿತ್ತು.

ಒಟ್ಟಾರೆ ಆರೋಪಿ ಆದಿತ್ಯಾ ರಾವ್ ಬಂಧನದೊಂದಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್ ವಿಚಾರಕ್ಕೆ ತಾರ್ಕಿಕ ತೆರೆ ಬಿದ್ದಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com