ಬೆಂಗಳೂರು: ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನೋರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬುಧವಾರ ತಡರಾತ್ರಿ ಚಾಮರಾಜಪೇಟೆಯ ಆಜಾದ್ ನಗರದಲ್ಲಿ ನಡೆದಿದೆ.
35 ವರ್ಷದ ಲೋಕೇಶ್ ಅಲಿಯಾಸ್ ಸ್ಮಶಾನ ಲೋಕಿ ಕೊಲೆಯಾದ ಯುವಕ. ನಾಗರಬಾವಿ ನಿವಾಸಿಯಾಗಿದ್ದ ಲೋಕೇಶ್, ನಿನ್ನೆ ತಡರಾತ್ರಿ ಚಾಮರಾಜಪೇಟೆಯ ಆಜಾದ್ ನಗರಕ್ಕೆ ಬೈಕ್ ನಲ್ಲಿ ತೆರಳಿದ್ದಾಗ, ಈತ ಬರುವುದನ್ನೇ ಕಾದು ಕುಳಿತಿದ್ದ ಮೂರ್ನಾಲ್ಕು ಜನರ ತಂಡ ಏಕಾಏಕಿ ಮಚ್ಚು, ಲಾಂಗ್ನಿಂದ ಹಲ್ಲೆ ನಡೆಸಿ ಹತ್ಯೆಗೈದು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಮೃತ ಲೋಕೇಶ್ ರೌಡಿಶೀಟರ್ ಸೈಕಲ್ ರವಿ ಸಹಚರನಾಗಿದ್ದು ಫೈನಾನ್ಸ್ ಹಾಗೂ ಬಡ್ಡಿ ವ್ಯವಹಾರ ಮಾಡುತ್ತಿದ್ದ. ಈ ಹಿಂದೆ ಕೊಲೆ ಆರೋಪದಡಿ ಜೈಲು ಶಿಕ್ಷೆ ಅನುಭವಿಸಿದ್ದ ಎನ್ನಲಾಗಿದೆ.
ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಚಾಮರಾಜಪೇಟೆ ಪೊಲೀಸ್ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಹತ್ತಿರದ ಸ್ಥಳದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುವ ಮೂಲಕ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Advertisement