ಕೊಪ್ಪಳ: ಕೊಪ್ಪಳ ಜಿಲ್ಲಾಧಿಕಾರಿಗಳನ್ನು ಅವಹೇಳನ ಮಾಡಿದ ಆರೋಪದ ಮೇರೆಗೆ ಖ್ಯಾತ ಪವಿತ್ರ ಯಾತ್ರಾ ಕ್ಷೇತ್ರ ಅಂಜನಾದ್ರಿ ಬೆಟ್ಟದ ಅರ್ಚಕರನ್ನು ಬಂಧಿಸಲಾಗಿದೆ.
ಹೌದು.. ಕೊಪ್ಪಳ ಜಿಲ್ಲೆಯ ಡಿಸಿ ಸುನೀಲ್ ಕುಮಾರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ ಫೇಸ್ಬುಕ್ನಲ್ಲಿ ವಿಡಿಯೋ ಹರಿಬಿಟ್ಟಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಹನುಮನ ಜನ್ಮಸ್ಥಳ ಅಂಜನಾದ್ರಿ ಅರ್ಚಕ ವಿದ್ಯಾದಾಸ್ ಬಾಬಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಬಾಬಾನನ್ನುಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಕೊಪ್ಪಳ ಜಿಲ್ಲೆಯ ಡಿಸಿ ಸುನೀಲ್ ಕುಮಾರ್ ರನ್ನು ಗೂಂಡಾ ಎಂದು ಅಗೌರವ ತೋರಿದ್ದ ಬಾಬಾ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಈ ಸಂಬಂಧ ಗಂಗಾವತಿ ತಹಶಿಲ್ದಾರರಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಬೆಟ್ಟ ಹಾಗೂ ಜಿಲ್ಲಾಧಿಕಾರಿಗಳ ವಿರುದ್ಧ ಆಕ್ಷೇಪಾರ್ಹ ಶಬ್ದಗಳ ಬಳಕೆ ಮಾಡಿ ಪ್ರಚೋದನಾತ್ಮಕ ಹೇಳಿಕೆ ನೀಡಿರುವ ಅಂಜನಾದ್ರಿ ಬೆಟ್ಟದ ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ವಿರುದ್ಧ ಗ್ರಾಮೀಣ ಠಾಣೆ ಯಲ್ಲಿ ತಹಸೀಲ್ದಾರ್ ಎಲ್.ಡಿ. ಚಂದ್ರಕಾಂತ ಪ್ರಕರಣ ದಾಖಲಿಸಿದ್ದರು.
ಜ.17ರಂದು ವಿಮಲ್ ಕ್ರಿಷನ್ ಎಂಬುವರ ಫೇಸ್ಬುಕ್ ಹಾಗೂ ವಾಟ್ಸ್ ಆ್ಯಪ್ನಲ್ಲಿ ಅರ್ಚಕ ಮಹಾಂತ ವಿದ್ಯಾದಾಸ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಅಂಜನಾದ್ರಿ ಬೆಟ್ಟ ಹಾಗೂ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡಲಾಗಿದೆ. ವಿರೂಪಾಪೂರಗಡ್ಡಿಯಲ್ಲಿ ರೆಸಾರ್ಟ್ ನಡೆಸಲು ಜಿಲ್ಲಾಧಿಕಾರಿಗಳು ಪರವಾನಗಿ ನೀಡಿರುವ ಆರೋಪ ಮಾಡಲಾಗಿದೆ. ಸಾಮರಸ್ಯ ಹದಗೆಡುವಂತಹ ಹೇಳಿಕೆ ನೀಡಿರುವುದರಿಂದ ಮಹಾಂತ ವಿದ್ಯಾದಾಸ ಬಾಬಾ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.
ವರದಿ: ಬಸವರಾಜ ಕರುಗಲ್
Advertisement