ತಾಂತ್ರಿಕ ದೋಷ: ಕೆಐಎಗೆ ಮರಳಿದ ಗೋ ಏರ್ ವಿಮಾನ, ನಿಲ್ದಾಣದಲ್ಲೇ ಪ್ರಯಾಣಿಕರ ಪ್ರತಿಭಟನೆ

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗುರುವಾರ ರಾತ್ರಿ ಥೈಲ್ಯಾಂಡ್ ನ ಪುಕೆಟ್ ತೆರಳುತ್ತಿದ್ದ ಗೋ  ಏರ್  ವಿಮಾನ ತಾಂತ್ರಿಕ  ದೋಷದಿಂದ  ಬೆಂಗಳೂರಿಗೆ ಮರಳಿತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗುರುವಾರ ರಾತ್ರಿ ಥೈಲ್ಯಾಂಡ್ ನ ಪುಕೆಟ್ ತೆರಳುತ್ತಿದ್ದ ಗೋ  ಏರ್  ವಿಮಾನ ತಾಂತ್ರಿಕ  ದೋಷದಿಂದ  ಬೆಂಗಳೂರಿಗೆ ಮರಳಿತು.ಈ ಘಟನೆ ನಡೆದಾಗ  173 ಪ್ರಯಾಣಿಕರೊಂದಿಗೆ ವಿಮಾನ 10,000 ಅಡಿ ಎತ್ತರದಲ್ಲಿ ಹಾರಾಡುತ್ತಿತ್ತು ಎನ್ನಲಾಗಿದೆ. 

ಜಿ8 -241, ಸಂಖ್ಯೆಯ ನಿಯೋ ಎ320 ವಿಮಾನ ಶುಕ್ರವಾರ ಬೆಳಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ  ಬೆಳಗ್ಗೆ 2-30 ರ ಸುಮಾರಿನಲ್ಲಿ ಟೇಕಾಪ್ ಆಗಿದೆ. ಆದರೆ, ಹಾರಾಟದ ಮಧ್ಯೆದಲ್ಲಿ ತಾಂತ್ರಿಕ ದೋಷ ಉಂಟಾಗಿ ಬೆಂಗಳೂರಿಗೆ ವಾಪಾಸ್ ಆಗಿದೆ. 

ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಲು ಎಂಜಿನಿಯರ್ ಗಳ ತಂಡ ಮೂರ್ನಾಲ್ಕು ತಾಸು ತೆಗೆದುಕೊಂಡಿತ್ತು. ಅಷ್ಟರಲ್ಲೇ ವಿಮಾನದ ಪೈಲೆಟ್ ಸೇರಿದಂತೆ ಇನ್ನಿತರ ಸಿಬ್ಬಂದಿಯ ಪಾಳಿ ಮುಗಿದುಹೋಗಿತ್ತು. ಹೀಗಾಗಿ, ಪರ್ಯಾಯ ಸಿಬ್ಬಂದಿಯನ್ನು ಗೋಏರ್ ಕಲ್ಪಿಸಿದೆ.

ಆದರೆ, ಶುಕ್ರವಾರ ಬೆಳಗ್ಗೆ ಮಂಜು ಆವರಿಸಿದ ಕಾರಣ ವಿಮಾನ ಹಾರಾಟ ಮತ್ತಷ್ಟು ವಿಳಂಬವಾಯಿತು. ಇದರಿಂದಾಗಿ ವಿಮಾನದಲ್ಲಿದ್ದ ನೂರಕ್ಕೂ ಹೆಚ್ಚು ಪ್ರಯಾಣಿಕರು ಏರ್ಲೈನ್ಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಮಂಜು ಮುಸುಕಿದ ವಾತಾವರಣ ತುಂಬಾ ಹೊತ್ತಿನವರೆಗೂ ಮುಂದುವರೆದ ಕಾರಣ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. 

 ತಾಂತ್ರಿಕ ಕಾರಣದಿಂದ ಸುಮಾರು 6 ತಾಸು ವಿಮಾನದೊಳಗೆ ಕುಳಿತಿದ್ದ ನೂರಕ್ಕೂ ಹೆಚ್ಚು ಪ್ರಯಾಣಿಕರು ಗೋ ಏರ್ ಏರ್ ಲೈನ್ಸ್ ವಿರುದ್ಧ ವಿಮಾನ ನಿಲ್ದಾಣದಲ್ಲಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ ಘಟನೆಯೂ ನಡೆದಿದೆ. ಪ್ರಯಾಣಿಕರಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ಗೋ ಏರ್ ಕಂಪನಿ ವಿಷಾಧ ವ್ಯಕ್ತಪಡಿಸಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com