ಮಡಿಕೇರಿ: ಗುರುತು ಪರಿಶೀಲನೆ ಪ್ರಕ್ರಿಯೆ ಅಂಗವಾಗಿ ಕೊಡಗು ಜಿಲ್ಲೆಯ ಮೂರು ಕೇಂದ್ರಗಳಿಗೆ ಕಾಫಿ ಎಸ್ಟೇಟ್ ಗಳಲ್ಲಿ ಕೆಲಸ ಮಾಡುವ ಸಾವಿರಾರು ವಲಸೆ ಕಾರ್ಮಿಕರನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಮಡಿಕೇರಿ, ವಿರಾಜಪೇಟೆ ಮತ್ತು ಕುಶಾಲನಗರ ಪಟ್ಟಣಗಳಲ್ಲಿ ಸಾವಿರಾರು ಕಾರ್ಮಿಕರು ಸೇರಿದ್ದರು. ಇಲ್ಲಿ ಪೊಲೀಸರು ಕಾರ್ಮಿಕರ ಆಫ್ ಲೈನ್ ಮತ್ತು ಆನ್ ಲೈನ್ ಗುರುತು ಪರಿಶೀಲನೆ ನಡೆಸಿದ್ದಾರೆ.
ಕೊಡಗು ಸೂಪರಿಂಟೆಂಡೆಂಟ್ ಡಾ ಸುಮನ್ ಡಿ ಪನ್ನೇಕರ್ ಆದೇಶದ ಪ್ರಕಾರ, ಜಿಲ್ಲಾ ಪೊಲೀಸರು ಕಾಫಿ ಎಸ್ಟೇಟ್ ಮಾಲೀಕರು ತಮ್ಮ ವಲಸೆ ಕಾರ್ಮಿಕರ ಜೊತೆ ಆಯಾ ಸರಹದ್ದಿನ ಪೊಲೀಸ್ ಠಾಣೆಗೆ ದಾಖಲೆಗಳೊಂದಿಗೆ ಬರುವಂತೆ ಸೂಚಿಸಿದರು. ಅಲ್ಲಿಂದ ಪ್ರೊಸೆಸಿಂಗ್ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಯಿತು.
ಈ ಪರಿಶೀಲನೆ ಪ್ರಕ್ರಿಯೆ ಸಾಯಂಕಾಲದವರೆಗೆ ನಡೆಯಿತು. ಬೆಳಗಿನ ಹೊತ್ತು ಮಾಧ್ಯಮ ಪ್ರತಿನಿಧಿಗಳನ್ನು ಈ ಕೇಂದ್ರದೊಳಗೆ ಹೋಗಲು ಬಿಡಲಿಲ್ಲ. ಕಾರ್ಮಿಕರ ಸಂಖ್ಯೆ ಕಡಿಮೆಯಾದ ನಂತರ ಅಪರಾಹ್ನ ಮಾಧ್ಯಮ ಪ್ರತಿನಿಧಿಗಳನ್ನು ಬಿಡಲಾಯಿತು.
ವಲಸೆ ಕಾರ್ಮಿಕರಲ್ಲಿ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಿಂದ ಬಂದ ಕಾರ್ಮಿಕರು ಬಹುತೇಕ ಮಂದಿ ಇದ್ದಾರೆ. ಅವರಲ್ಲಿ ನಿನ್ನೆ ಪರಿಶೀಲನೆ ವೇಳೆ ಆಧಾರ್ ಕಾರ್ಡು, ಪ್ಯಾನ್ ಕಾರ್ಡು ಮತ್ತು ವೋಟರ್ ಐಡಿ ನೀಡುವಂತೆ ಹೇಳಲಾಗಿತ್ತು. ಬಹುತೇಕ ಮಂದಿ ಎಸ್ಟೇಟ್ ಕಾರ್ಮಿಕರಾಗಿದ್ದರೆ ಕೆಲವರು ನಿರ್ಮಾಣ ಕಟ್ಟಡ ಕಾಮಗಾರಿಯಲ್ಲಿ ಮತ್ತು ರೆಸಾರ್ಟ್ ಗಳಲ್ಲಿ ಕೆಲಸ ಮಾಡುವವರಾಗಿದ್ದಾರೆ.
5 ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಪರಿಶೀಲನೆ ನಡೆಸಲಾಯಿತು. ಅವರಲ್ಲಿ ಸುಮಾರು 500 ಮಂದಿಯಲ್ಲಿ ಯಾವುದೇ ದಾಖಲೆಗಳಿಲ್ಲ. ಇಂತವರು ಕೆಲಸಕ್ಕಿರುವ ಮಾಲೀಕರ ಬಳಿ ಮೂಲ ದಾಖಲೆಗಳನ್ನು ಸಂಗ್ರಹಿಸುವಂತೆ ಹೇಳಲಾಗಿದೆ ಎಂದು ಪೊಲೀಸ್ ವರಿಷ್ಠ ಹೇಳಿದ್ದಾರೆ.
Advertisement