ಬೆಂಗಳೂರು: ರಾಜಧಾನಿ ಬೆಂಗಳೂರಿನ ರಿಂಗ್ ರಸ್ತೆ ಮಾದರಿಯಲ್ಲಿ ನಿರ್ಮಿಸಲು 10 ರಸ್ತೆಗಳನ್ನು ಗುರುತಿಸಿ, ಕಾಮಗಾರಿಯು ಪ್ರಗತಿಯ ಹಂತದಲ್ಲಿದೆ. ಜೂನ್ ಅಂತ್ಯದೊಳಗೆ ಹಲವು ರಸ್ತೆ ಕಾಮಗಾರಿಗಳು ಪೂರ್ಣಗೊಂಡು ಸುಗಮ ಸಂಚಾರಕ್ಕೆ ನೆರವಾಗಲಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ವಿವಿಧ ರಸ್ತೆ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಯ ಪ್ರಗತಿ ಹಾಗೂ ಗುಣಮಟ್ಟವನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 21 ಕಿಲೋ ಮೀಟರ್ ಉದ್ದದ 137 ಕೋಟಿ ರೂಪಾಯಿ ಮೊತ್ತದ ಮೈನಹಳ್ಳಿ- ಬೂದಗೆರೆ ಕ್ರಾಸ್ ರಾಜ್ಯ ಹೆದ್ದಾರಿ ಕಾಮಗಾರಿ, 39 ಕಿಲೋ ಮೀಟರ್ ಉದ್ದದ 182 ಕೋಟಿ ರೂಪಾಯಿ ಮೊತ್ತದ ಹೊಸಕೋಟೆ ರಸ್ತೆ- ಅನೆಕಲ್ ವಯಾ ಅತ್ತಿಬೆಲೆ, ಸರ್ಜಾಪುರ ರಾಜ್ಯ ಹೆದ್ದಾರಿ ಕಾಮಗಾರಿ , 1.3 ಕಿಲೋ ಮೀಟರ್ ಉದ್ದದ 163 ಕೋಟಿ ರೂಪಾಯಿ ವೆಚ್ಚದ ಎಲಿವೇಟೆಡ್ ಕಾರಿಡಾರ್ ಕಾಮಗಾರಿಯು ಈಗಾಗಲೇ ಪ್ರಗತಿ ಹಂತದಲ್ಲಿವೆ.
ಈ ಕಾಮಗಾರಿಗಳನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು ಕೈಗೊಳ್ಳುತ್ತಿದೆ. ಈ ಕಾಮಗಾರಿಗಳನ್ನು ಶೀಘ್ರವಾಗಿ ಅನುಷ್ಠಾನಗೊಳಿಸಲು ಇರುವ ಅಡೆತಡೆ, ಭೂಸ್ವಾಧೀನ, ಸಮಸ್ಯೆಗಳನ್ನು ಚರ್ಚಿಸಲಾಗಿದೆ. ಸಮಸ್ಯೆಗಳ ಇತ್ಯರ್ಥಕ್ಕೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಔಟರ್ ರಿಂಗ್ ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನ ಸಮಸ್ಯೆಯಾಗಿರುವುದರಿಂದ ಅಲ್ಲಲ್ಲಿ 4- 5 ಕಿ.ಮೀ. ಉದ್ದದ ರಸ್ತೆಗಳನ್ನು ನಿರ್ಮಿಸಿ, ಜೋಡಿಸಲಾಗುತ್ತಿದೆ. ಪ್ರಸ್ತಾಪಿತ ರಸ್ತೆ ಕಾಮಗಾರಿಗಳಲ್ಲಿ ಮಧ್ಯದಲ್ಲಿ ಮರಗಳಿದ್ದು, ಈ ಮರಗಳನ್ನು ತೆರವುಗೊಳಿಸಿಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮುಖ್ಯ ಅರಣ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ರಮಕೈಗೊಂಡಿದ್ದಾರೆ ಎಂದು ಅವರು ತಿಳಿಸಿದರು.
ಮಂಗಳೂರು ಪ್ರಕರಣವನ್ನು ಯಾರೂ ಸಹಿಸಿಕೊಳ್ಳಲಾಗುವುದಿಲ್ಲ. ದೇಶದ ಭದ್ರತೆ ಹಾಗೂ ಜನರ ರಕ್ಷಣೆಗೆ ಹಿತದೃಷ್ಟಿಯ ಹಿನ್ನೆಲೆಯಲ್ಲಿ ಯೋಚಿಸಬೇಕು. ಹೇಳಿಕೆಗಳಿಂದ ಪೊಲೀಸರ ತನಿಖೆಗೆ ತೊಂದರೆಯಾಗಬಾರದು ಎಂದು ಅವರು ತಿಳಿಸಿದರು.
Advertisement