ಬೆಂಗಳೂರು: ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ದಿವಂಗತ ಗೌರಿ ಲಂಕೇಶ್ ಅವರ ಜನ್ಮ ವಾರ್ಷಿಕೋತ್ಸವ ಅಂಗವಾಗಿ ಇಂದು ನಡೆಯಬೇಕಿದ್ದ ಗೌರಿ ಸ್ಮರಣೆ ಉಪನ್ಯಾಸ ಕಾರ್ಯಕ್ರಮಕ್ಕೆ ಸೆನೆಟ್ ಹಾಲ್ ನೀಡಲು ಬೆಂಗಳೂರು ವಿಶ್ವವಿದ್ಯಾಲಯ ನಿರಾಕರಿಸಿದ ನಂತರ ಆ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್, ‘ಭಾರತ ಸಾಂವಿಧಾನಿಕ ಬಿಕ್ಕಟ್ಟಿನತ್ತ ಸಾಗುತ್ತಿದೆ’ವಿಷಯ ಕುರಿತು ಉಪನ್ಯಾಸ ನಿಗದಿಯಾಗಿತ್ತು. ಅಜಾದ್ ಅನಾರೋಗ್ಯಕ್ಕೊಳಗಾದಿದ್ದು, ಪ್ರಯಾಣ ಮಾಡದಂತೆ ಡಾಕ್ಟರ್ ಸಲಹೆ ನೀಡಿರುವುದಾಗಿ ತಿಳಿಸಲಾಗಿದೆ ಎಂದು ಕಾರ್ಯಕ್ರಮ ಆಯೋಜಕರಲ್ಲಿ ಒಬ್ಬರಾದ ಪ್ರೊಫೆಸರ್ ವಿಎಸ್ ಶ್ರೀಧರ ಹೇಳಿದ್ದಾರೆ.
17 ಸಾವಿರದ 700 ರೂ. ಡಿಡಿ ಪಾವತಿಯೊಂದಿಗೆ ಜನವರಿ 23 ರಂದು ಸೆನ್ ಹಾಲ್ ಬುಕ್ಕಿಂಗ್ ಗಾಗಿ ವಿವಿ ರಿಜಿಸ್ಟ್ರಾರ್ ಅವರಿಗೆ ಇ- ಮೇಲ್ ಕಳುಹಿಸಲಾಗಿದೆ. ಕಾರ್ಯಕ್ರಮಕ್ಕೆ ಇನ್ನೂ ಮೂರು ದಿನಗಳು ಇರುವಂತೆಯೇ ಆಹ್ವಾನ ಪತ್ರಿಕೆ ಹಾಗೂ ವಿವರವನ್ನು ಕಳುಹಿಸಲಾಗಿದೆ. ಆದರೆ, ಇಂದು ನಡೆಯಬೇಕಾಗಿದ್ದ ಕಾರ್ಯಕ್ರಮಕ್ಕೆ ಸೆನೆಟ್ ಹಾಲ್ ಕೊಡಲು ಸಾಧ್ಯವಿಲ್ಲ ಎಂಬುದಾಗಿ ರಿಜಿಸ್ಟ್ರಾರ್ ಇಮೇಲ್ ಕಳುಹಿಸಿದ್ದಾರೆ, ಕೊನೆ ಕ್ಷಣದಲ್ಲಿ ಏಕೆ ಹೀಗೆ ಮಾಡಿದ್ದರು ಎಂದು ಶ್ರೀಧರ ಪ್ರಶ್ನಿಸಿದ್ದಾರೆ.
ಸೆನೆಟ್ ಬುಲ್ ಬುಕ್ಕಿಂಗ್ ಸಂಬಂಧ ಜನವರಿ 29 ರಂದು ಇ-ಮೇಲ್ ಹಾಗೂ ಡಿಡಿ ಬಂದಿದೆ. ಇದನ್ನು ಅನುಮತಿಗಾಗಿ ಉಪ ಕುಲಪತಿಗಳಿಗೆ ವರ್ಗಾವಣೆ ಮಾಡಲಾಗಿದೆ. ವಿಶ್ವವಿದ್ಯಾಲಯದ ಆಡಳಿತಕ್ಕೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳುವ ಅಧಿಕಾರ ಅವರಿಗಿದೆ. ಅವರಿಂದ ಈವರೆಗೂ ಯಾವುದೇ ಪ್ರತ್ರಿಕಿಯೆ ಬಂದಿಲ್ಲ ಎಂದು ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ವಿ. ಶಿವರಾಂ ಹೇಳಿದ್ದಾರೆ.
ಬೇರೊಂದು ವೇದಿಕೆಯನ್ನು ಗುರಿತಿಸಲಾಗಿತ್ತು. ಆದರೆ, ಅಜಾದ್ ಅವರ ಗೈರು ಹಾಜರಿ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮುಂದೂಡಲು ನಿರ್ಧರಿಸಲಾಗಿದೆ. ಅವರು ಲಭ್ಯತೆಗಾಗಿ ಕಾಯಲಾಗುತ್ತಿದೆ ಎಂದು ಶ್ರೀಧರ ತಿಳಿಸಿದ್ದಾರೆ.
Advertisement