ಬೆಂಗಳೂರು: ದಿನದಿಂದ ದಿನಕ್ಕೆ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಾಥಮಿಕ-ಎರಡನೇ ಹಂತದ ಕೊರೋನಾ ಸಂಪರ್ಕಗಳ ಟ್ರೇಸಿಂಗ್ ಹಾಗೂ ಟೆಸ್ಟಿಂಗ್ ನ್ನು ತಜ್ಞರ ಸಲಹೆ ಮೇರೆಗೆ ಕೈಬಿಡುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಜ್ಞರ ಜೊತೆ ನಡೆದ ಸಭೆಯಲ್ಲಿ ಈ ಸಲಹೆ ಬಂದಿದ್ದು, ಸಂಪರ್ಕ ಅಥವಾ ಪ್ರಯಾಣದ ಹಿನ್ನೆಲೆ ಇಲ್ಲದವರಿಗೂ ಕೋವಿಡ್-19 ಸೋಂಕು ತಗುಲುತ್ತಿರುವುದು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಹಾಗೂ ಎರಡನೇ ಹಂತದ ರೋಗ ಸಂಪರ್ಕಗಳನ್ನು ಪತ್ತೆ, ಪರೀಕ್ಷೆ ಮಾಡುವುದನ್ನು ಸರ್ಕಾರ ಕೈಬಿಡಲು ಚಿಂತನೆ ನಡೆಸಿದೆ.
ಈಗಿರುವ ಸಂಪನ್ಮೂಲಗಳನ್ನು ಆದ್ಯತೆಯ ಮೆರೆಗೆ ಬಳಕೆ ಮಾಡಿಕೊಂಡು ಹೆಚ್ಚು ಅಪಾಯವಿರುವ ಪ್ರಕರಣಗಳತ್ತ ಹಾಗೂ ಗಂಭೀರ ಪ್ರಕರಣಗಳತ್ತ ಗಮನ ಹರಿಸಲು ತಜ್ಞರು ಸಲಹೆ ನೀಡಿದ್ದಾರೆ. ಈ ಸಲಹೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗಿದೆ.
ಅತಿ ಹೆಚ್ಚು ಅಪಾಯದಲ್ಲಿರುವ ರೋಗಿಗಳ ಸಂಪರ್ಕವನ್ನು 24 ಗಂಟೆಗಳಲ್ಲಿ ಪತ್ತೆ ಮಾಡುವುದಕ್ಕಾಗಿ ಸರ್ಕಾರ ಬಿಬಿಎಂಪಿ ಆಯುಕ್ತ ಬಿಎಚ್ ಅನಿಲ್ ಕುಮಾರ್ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ.
Advertisement