ಬೆಂಗಳೂರು: ಮೆಟ್ರೋ ರೈಲು ಯೋಜನೆಯ ಕಾಮಗಾರಿಗಾಗಿ ನಗರದಲ್ಲಿ ಕತ್ತರಿಸಲು ಉದ್ದೇಶಿಸುವ ಮರಗಳು ಹಾಗೂ ಈಗಾಗಲೇ ಕತ್ತರಿಸಿದ ಮರಗಳನ್ನು ವೈಜ್ಞಾನಿಕವಾಗಿ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಕೈಗೊಳ್ಳುವ ಬಗ್ಗೆ ವಸ್ತುಸ್ಥಿತಿ ಪರಿಶೀಲಿಸಲು ಬೆಂಗಳೂರು ಕೃಷಿ ವಿವಿಯ (ಜಿಕೆವಿಕೆ) ಅರಣ್ಯ ವಿಭಾಗವನ್ನು ತಜ್ಞ ಸಂಸ್ಥೆಯಾಗಿ ನೇಮಕ ಮಾಡಲು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಆದೇಶಿಸಿದೆ.
ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಹಾಗೂ ದತ್ತಾತ್ರೇಯ ಟಿ. ದೇವರೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ನಟರಾಜ ರಂಗಸ್ವಾಮಿ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಕೋರ್ಟ್ ಆದೇಶದ ಪ್ರತಿ ಲಭ್ಯವಾದ ನಂತರದ ಮೂರು ವಾರಗಳಲ್ಲಿ ಬೆಂಗಳೂರು ಕೃಷಿ ವಿವಿ ಕುಲಪತಿ ತಮ್ಮ ಸಂಸ್ಥೆಯ ಅರಣ್ಯ ವಿಭಾಗದ ತಜ್ಞರನ್ನು ಒಳಗೊಂಡ ಸಮಿತಿ ರಚಿಸಬೇಕು. ಆ ಸಮಿತಿಯು ಮೇ 21ರಂದು ಮರ ಅಧಿಕಾರಿಯು ಹೊರಡಿಸಿದ ಆದೇಶದಂತೆ ಮರಗಳನ್ನು ಕತ್ತರಿಸಿ ಸ್ಥಳಾಂತರಿಸಿದ ಪ್ರಕ್ರಿಯೆಯು ವೈಜ್ಞಾನಿಕ ರೀತಿಯಲ್ಲಿ ನಡೆದಿದೆಯೇ? ಸ್ಥಳಾಂತರಿಸಿದ ಮರಗಳ ಬೆಳವಣಿಗೆ ಹೇಗಿದೆ? ಎಂಬುದರ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.
ಸಮಿತಿಯ ಕಾರ್ಯನಿರ್ವಹಣೆಗೆ ತಗಲುವ ಸಂಪೂರ್ಣ ಖರ್ಚು- ವೆಚ್ಚವನ್ನು ಬಿಎಂಆರ್ಸಿಎಲ್ ಭರಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಅಲ್ಲದೆ, ಸದ್ಯ ತೀರ್ಮಾನಿಸಿರುವಂತೆ 59 ಮರಗಳನ್ನು ಕತ್ತರಿಸುವ ಹಾಗೂ ಬುಡಸಮೇತ ಸ್ಥಳಾಂತರಿಸುವ ಪ್ರಕ್ರಿಯೆ ಬಗ್ಗೆ ಪರಿಶೀಲಿಸಬೇಕು. ಈ 59 ಮರಗಳ ಪೈಕಿ ಎಷ್ಟು ಮರಗಳನ್ನು ಕತ್ತರಿಸದೆ ಉದ್ದೇಶಿತ ರೈಲು ಮಾರ್ಗಕ್ಕೆ ತೊಂದರೆಯಾಗದಂತೆ ಉಳಿಸಬಹುದು ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದೂ ನ್ಯಾಯಾಲಯ ಸೂಚನೆ ನೀಡಿದೆ.
ಇದನ್ನು ಗಮನದಲ್ಲಿಟ್ಟುಕೊಂಡು, ಈ ವಿಷಯವನ್ನು ಪರಿಶೀಲಿಸಲು ಮೂರನೇ ಏಜೆನ್ಸಿಯನ್ನು ಸೂಚಿಸುವಂತೆ ನ್ಯಾಯಪೀಠ ರಾಜ್ಯ ಮತ್ತು ಬಿಎಂಆರ್ಸಿಎಲ್ಗೆ ನಿರ್ದೇಶನ ನೀಡಿತ್ತು. ಅದರಂತೆ ಬಿಎಂಆರ್ ಸಿಎಲ್ ಅರಣ್ಯ ಇಲಾಖೆ, ಜಿಕೆವಿಕೆ ಸೂಚಿಸಿದರು ಮತ್ತು ಅದನ್ನು ನ್ಯಾಯಾಲಯವು ಅಂಗೀಕರಿಸಿದೆ.
ತನಗೆ ವಹಿಸಿಕೊಟ್ಟ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಲು ನ್ಯಾಯಾಲಯವು ಏಜೆನ್ಸಿಯನ್ನು ಕೇಳಿತು. ತಜ್ಞರ ಸಮಿತಿ ಮಾಡಿದ ಶಿಫಾರಸುಗಳು ಮತ್ತು ಅರ್ಜಿದಾರರು ಎತ್ತಿದ ಆಕ್ಷೇಪಣೆಗಳನ್ನು ಪರಿಶೀಲಿಸುವಂತೆ ನ್ಯಾಯಪೀಠ ಏಜೆನ್ಸಿಗೆ ಆದೇಶಿಸಿದೆ
Advertisement