ಕೊರೋನಾ ಸೋಂಕು: ಅಪರಾಧ ನಿಯಂತ್ರಣ ಪೊಲೀಸರಿಗೆ ದೊಡ್ಡ ಸವಾಲು!

ಬೆಂಗಳೂರಿನ ಪೊಲೀಸರಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವುದು ಪೊಲೀಸರಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರಿನ ಪೊಲೀಸರಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವುದು ಪೊಲೀಸರಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. 

ನಗರದ ಪೊಲೀಸರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಪರಿಣಾಮ ಅನೇಕ ಪೊಲೀಸ್ ಠಾಣೆಗಳು ಸೀಲ್ ಡೌನ್ ಆಗುತ್ತಿವೆ. ಮುಂಜಾಗ್ರತಾ ಕ್ರಮವಾಗಿ ಸೋಂಕಿತರ ಸಂಪರ್ಕದಲ್ಲಿದ್ದ ಸಿಬ್ಬಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗುತ್ತಿದೆ. ಹೀಗಾಗಿ ಕರ್ತವ್ಯದಲ್ಲಿರುವ ಸಿಬ್ಬಂದಿ ಸಂಖ್ಯೆ ಕಾಲ ಕ್ರಮೇಣ ಕಡಿಮೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಗಸ್ತು ತಿರುಗುವುದು ಕಡಿಮೆಯಾಗುತ್ತಿದೆ.

ಪೊಲೀಸರು ಸಹ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿ ತೊಡಗಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಹಲವೆಡೆ ಆರೋಪಿಗಳಲ್ಲಿ ಸೋಂಕು ಕಂಡು ಬಂದಿರುವ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬೆನ್ನಟ್ಟಿ ಹಿಡಿಯಲು ಪೊಲೀಸರಿಂದ ನಿಷ್ಕಾಳಜಿ ವ್ಯಕ್ತವಾಗುತ್ತಿದೆ. 

ಹೀಗಾಗಿ ಈ ವಿಷಯವನ್ನೇ ಕೇಂದ್ರಿಕರಿಸಿಕೊಂಡ ದುಷ್ಕರ್ಮಿಗಳ ತಂಡವೊಂದು ತಡರಾತ್ರಿ ತಾವರೆಕೆರೆ ಮುಖ್ಯರಸ್ತೆಯ ಭುವನಪ್ಪ ಲೇಔಟ್ ನಲ್ಲಿ ದರೋಡೆ ಮಾಡಿರುವ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.

ಜೂ. 27ರಂದು ಖಾಸಗಿ ಕಂಪನಿಯ ನೌಕರರು ಕೆಲಸ ಮುಗಿಸಿಕೊಂಡು ಮಧ್ಯರಾತ್ರಿ ಮನೆಯತ್ತ ತೆರಳುತ್ತಿದ್ದಾಗ ನೌಕರರನ್ನು ಅಡ್ಡಗಟ್ಟಿ ದರೋಡೆ ಮಾಡಲು ಮುಂದಾಗಿದ್ದರು.

ಎರಡು ಬೈಕ್ ಗಳಲ್ಲಿ ಬಂದ ಮೂವರ ತಂಡ ಚಾಕು ತೋರಿಸಿ ಹಲ್ಲೆಗೆ ಮುಂದಾಗಿದ್ದರು. ಆಗ ಓರ್ವ ನೌಕರ ಗೌರವ್ ಅಗರ್ವಾಲ್ ಎಂಬುವವರು ಅವರ ವಿರುದ್ಧ ತಿರುಗಿ ಬಿದ್ದಿದ್ದರು. ಇದರಿಂದ ಆಕ್ರೋಶಗೊಂಡ ದುಷ್ಕರ್ಮಿಗಳು ಅಗರ್ ವಾಲ್ ಕೈ ಬೆರಳುಗಳಿಗೆ ಚಾಕುವಿನಿಂದ ರಕ್ತ ಬರುವಂತೆ ಹಲ್ಲೆ ಮಾಡಿ ಪರಾರಿಯಾಗಿದ್ದರು.

ಘಟನೆಗೆ ಸಂಬಂಧಿಸಿದಂತೆ ಎಲ್ಲಾ ದೃಶ್ಯವು ಹತ್ತಿರದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಂತರ ಗಾಯಗೊಂಡು ಕೆಳಗೆ ಬಿದ್ದ ನೌಕರರನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಪೊಲೀಸರು ಈ ಕುರಿತು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ದೂರು ದಾಖಲಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. 

ಈ ಕುರಿತು ನೌಕರರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಟ್ವೀಟ್ ಮಾಡಿ ಅವರ ಗಮನಕ್ಕೆ ತಂದಿದ್ದರು. ತನಿಖೆ ನಡೆಸುವುದಾಗಿ ಆಯುಕ್ತರು ರಿಟ್ವೀಟ್ ಮಾಡಿ, ಕೂಡಲೇ ಕ್ರಮ ಕೈಗೊಳ್ಳುವಂತೆ ಮಡಿವಾಳ ಪೊಲೀಸರಿಗೆ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com