ಮಂಡ್ಯ: ಮಂಡ್ಯದಲ್ಲಿ ಕೊರೋನಾ ಮಹಾ ಮಾರಿಗೆ ಮೊದಲ ಬಲಿಯಾಗಿದೆ. ಪ್ರಕರಣ ಕುರಿತಂತೆ ಮಂಡ್ಯ ಜಿಲ್ಲೆ ಆರೋಗ್ಯಾಧಿಕಾರಿ ಡಾ.ಮಂಚೇಗೌಡ ಮಾಹಿತಿ ನೀಡಿದ್ದು ಕೊರೊನಾ ವೈರಸ್ ಸೋಂಕಿನಿಂದ ಸುಮಾರು 55 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ,
ಮದ್ದೂರಿನ ಲಾಲಿ ಎಂಬಲ್ಲಿ ವಾಸವಿದ್ದ 55 ವರ್ಷದ ವ್ಯಕ್ತಿಯಲ್ಲಿ ಜುಲೈ 5 ರಂದು ಅನಾರೋಗ್ಯ ಸಮಸ್ಯೆ ಕಂಡುಬಂದಿತ್ತು. ಪರಿಸ್ಥಿತಿ ಗಂಭೀರವಾದುದರಿಂದ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಖಾಸಗಿ ಆಸ್ಪತ್ರೆಯವರು ಚಿಕಿತ್ಸೆ ನೀಡಿದ್ದಾರೆ. ಅವರ ಗಂಟಲಿನ ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿ ಬಂದಾಗ ಪಾಸಿಟಿವ್ ಇರುವುದು ದೃಢಪಟ್ಟಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.
ಪಾಸಿಟಿವ್ ಬರುತ್ತಿದ್ದಂತೆ ಮಂಡ್ಯ ಕೊವಿಡ್ ಆಸ್ಪತ್ರೆಗೆ ಅವರನ್ನು ಸ್ಥಳಾಂತರಿಸಲಾಗಿತ್ತು. ಇಲ್ಲಿಗೆ ತಂದ 10 ನಿಮಿಷದಲ್ಲೇ ಆ ವ್ಯಕ್ತಿ ಮೃತಪಟ್ಟಿದ್ದಾರೆ. ಕೊವಿಡ್ - 19ರ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಅಂತ್ಯಕ್ರಿಯೆ ಮಾಡಲಾಗುವುದು. ಮುಸ್ಲಿಂ ಸಮುದಾಯದ ಸ್ವಯಂ ಸೇವಕರು ಅಂತ್ಯಸಂಸ್ಕಾರ ನಡೆಸಲು ಮುಂದೆ ಬಂದಿದ್ದಾರೆ. ಅಂತ್ಯ ಕ್ರಿಯೆಗೆ ಜಿಲ್ಲಾಡಳಿತದಿಂದ ಜಾಗ ಗುರುತಿಸಲಾಗಿದೆ.
ಮಂಡ್ಯ ತಾಲ್ಲೂಕಿನ ಯತ್ತಗದಹಳ್ಳಿಯಲ್ಲಿ 8 ಎಕರೆ ಭೂಮಿ ಗುರುತಿಸಲಾಗಿದ್ದು, ಬೇರೆ ಬೇರೆ ಜನಾಂಗಕ್ಕೆ ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಲಾಗಿದೆ. ಆ ಜಾಗಕ್ಕೆ ನೇರವಾಗಿ ಪಾರ್ಥಿವ ಶರೀರ ತರಲು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವರದಿ: ನಾಗಯ್ಯ
Advertisement