ಉಡುಪಿ: ಉಡುಪಿ ಜಿಲ್ಲೆ ತೆಂಕನಿಡಿಯೂರು ಲಕ್ಷ್ಮೀನಗರ ನಿವಾಸಿ ಯೋಗೀಶ್ ಪೂಜಾರಿ (26) ಹತ್ಯೆಯಲ್ಲಿ ಭಾಗಿಯಾದ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ಮಲ್ಪೆ ಪೋಲೀಸರು ಬಂಧಿಸಿದ್ದಾರೆ. ಜುಲೈ 6 ರ ಭಾನುವಾರ ರಾತ್ರಿ 11.30 ರ ಸುಮಾರಿಗೆ ಕಾರಿನಲ್ಲಿ ಆಗಮಿಸಿದ ಗ್ಯಾಂಗ್ನಿಂದ ಯೋಗೀಶ್ ಮೇಲೆ ಮಾರಣಾಂತಿಕ ಆಯುಧದಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು.
ಕೊಲೆ ಬಗ್ಗೆ ಮಾಹಿತಿ ದೊರೆತ ಕೂಡಲೇ ಮಲ್ಪೆ ಪೊಲೀಸರು ಕಾರ್ಯಪ್ರವೃತ್ತರಾದರು ಮತ್ತು ಪ್ರಕರಣವನ್ನು ಭೇದಿಸಿ ಜುಲೈ 7 ರ ಮಂಗಳವಾರ ತಡರಾತ್ರಿ ನಾಲ್ವರನ್ನು ಬಂಧಿಸಿದ್ದಾರೆ, ಬಂಧಿತರ ಪೈಕಿ ಪ್ರಸಿದ್ಧ ರೌಡಿ ಶೀಟರ್ ಸುಜಿತ್ ಪಿಂಟೊ (37) ಕೂಡ ಇದ್ದಾನೆ. ಬಂಧನಕ್ಕೊಳಗಾದ ಇತರೆ ಆರೋಪಿಗಳೆಂದರೆ ರೋಹಿತ್ ಪಿಂಟೊ (43), ಅನ್ನೂ ಅಲಿಯಾಸ್ ಪ್ರದೀಪ್ (40) ಮತ್ತು ವಿನಯ್ (36).
ಪ್ರಕರಣದ ಇನ್ನೂ ಇಬ್ಬರು ಆರೋಪಿಗಳಾದ ಗಿರೀಶ್ ಮತ್ತು ಅನುಪ್ ಪರಾರಿಯಾಗಿದ್ದು ಅವರನ್ನು ಪತ್ತೆಹಚ್ಚಲು ಪೋಲೀಸರು ವ್ಯಾಪಕ ಶೋಧ ನಡೆಸಿದ್ದಾರೆ. ಪೊಲೀಸರು ಬಂಧಿತ ಆರೋಪಿಗಳನ್ನು ಕೊಲೆ ನಡೆದ ಜಾಗಕ್ಕೆ ಕರೆದೊಯ್ದು ಪರಿಶೀಲನೆ ಕೈಗೊಂಡಿದ್ದಾರೆ. ಕೃತ್ಯದ ವೇಳೆ ಬಳಸಿದ ಕಾರು ಮತ್ತು ಚಾಕುಗಳನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದು ಮೂಲಗಳ ಪ್ರಕಾರ, ಜುಲೈ 8 ರ ಬುಧವಾರ ಸಂಜೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
Advertisement