ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ 8 ವಲಯ ವಿಂಗಡಣೆ, 8 ಹಿರಿಯ ಐಎಎಸ್ ಅಧಿಕಾರಿಗಳ ನೇಮಕ

ನಗರದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಬೆಂಗಳೂರನ್ನು 8 ವಲಯಗಳಾಗಿ ವಿಭಾಗಿಸಿ ಪ್ರತೀ ವಲಯಗಳಿಗೆ ಓರ್ವ ಸಚಿವರು ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಗೆ ಜವಾಬ್ದಾರಿ ನೀಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಬೆಂಗಳೂರನ್ನು 8 ವಲಯಗಳಾಗಿ ವಿಭಾಗಿಸಿ ಪ್ರತೀ ವಲಯಗಳಿಗೆ ಓರ್ವ ಸಚಿವರು ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಗೆ ಜವಾಬ್ದಾರಿ ನೀಡಲಾಗಿದೆ. ಅಲ್ಲದೆ 8 ವಲಯಗಳಿಗೂ 8 ಹಿರಿಯ ಐಎಎಸ್ ಅಧಿಕಾರಿಗಳನ್ನು ಮೇಲ್ವಿಚಾರಣೆಗಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

ಈ ಸಂಬಂದ ಅಧಿಕೃತ ಆದೇಶ ಹೊರಡಿಸಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್, ಬೆಂಗಳೂರು ನಗರದಲ್ಲಿ ಕೋವಿಡ್-19 ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿರ್ವಹಣಾ ಕ್ರಮಗಳ ಮೇಲ್ವಿಚಾರಣೆ ಮತ್ತು ಪರಿಶೀಲಿಸಲು ಹಾಗೂ ತಕ್ಷಣದ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರ್ಯೋನ್ಮುಖರಾಗಲು ಅನುವಾಗುವಂತೆ ಈ ಕೆಳಕಂಡ ವಲಯ ಸಂಯೋಜಕರನ್ನು ಜುಲೈ 9, 2020ರಿಂದ ಅನ್ವಯವಾಗುವಂತೆ ರಚಿಸಿ, ನೇಮಿಸಲಾಗಿದೆ.

ಬೆಂಗಳೂರಿನ 8 ವಲಯಗಳಿಗೆ 8 ಐಎಎಸ್ ಅಧಿಕಾರಿಗಳಿಗೆ ವಲಯವಾರು ಹಂಚಿಕೆ ಇಂತಿದೆ.
1. ಬೆಂಗಳೂರು ಪೂರ್ವ ವಲಯ - ತುಷಾರ್ ಗಿರಿನಾಥ್
2. ಬೆಂಗಳೂರು ಪಶ್ಚಿಮ ವಲಯ - ರಾಜೇಂದ್ರ ಕುಮಾರ್ ಕಠಾರಿಯಾ
3. ಬೊಮ್ಮನಹಳ್ಳಿ ವಲಯ - ಕ್ಯಾಪ್ಟನ್ ಪಿ.ಮಣಿವಣ್ಣನ್
4. ಯಲಹಂಕ ವಲಯ - ನವೀನ್ ರಾಜ್ ಸಿಂಗ್
5. ಬೆಂಗಳೂರು ದಕ್ಷಿಣ ವಲಯ - ಮುನಿಷ್ ಮೌದ್ಗಿಲ್
6. ಮಹದೇವಪುರ ವಲಯ - ಡಾ.ಎನ್.ಮಂಜುಳ
7. ದಾಸರಹಳ್ಳಿ ವಲಯ - ಡಾ.ಪಿ.ಸಿ.ಜಾಫರ್
8. ರಾಜರಾಜೇಶ್ವರಿನಗರ ವಲಯ - ಡಾ.ಆರ್.ವಿಶಾಲ್

ಮೇಲ್ಕಂಡಂತೆ ವಲಯ ಸಂಯೋಜಕರು, ಆಯುಕ್ತರು, ಬಿಬಿಎಂಪಿರವರ ಒಟ್ಟಾರೆ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ವಲಯ ಸಂಯೋಜಕರು, ಕೋವಿಡ್-19 ಧಾರಕ ಮತ್ತು ನಿರ್ವಹಣಾ ಕ್ರಮಗಳ ಪುನರ್ ಪರಿಶೀಲನೆ ಮತ್ತು ಮೇಲ್ವಿಚಾರಣೆ ನಡೆಸುವುದು, ಜಂಟಿ ಆಯುಕ್ತರು, ಬಿಬಿಎಂಪಿಯ ಅಧಿ ಕಾರಿಗಳು, ಸಿಬ್ಬಂದಿ, ರಾಜ್ಯ ಸರ್ಕಾರದ ಹಾಗೂ ನಿಗಮ, ಮಂಡಳಿಯ ಅಧಿಕಾರಿಗಳು ,ಸಿಬ್ಬಂದಿಗಳು ಎಲ್ಲರೂ ವಲಯ ಸಂಯೋಜಕರಿಗೆ ಅಗತ್ಯ ನೆರವು ನೀಡತಕ್ಕದ್ದು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯಭಾಸ್ಕರ್ ಸೂಚಿಸಿದ್ದಾರೆ. ಆ ಮೂಲಕ ಬೆಂಗಳೂರಿನಲ್ಲಿ ಕರೋನಾ ನಿಯಂತ್ರಣಕ್ಕೆ, ಸೋಂಕಿತರಿಗೆ ತಕ್ಷಣ ಅಗತ್ಯ ಚಿಕಿತ್ಸೆಗೆ ಅನುಕೂಲವಾಗಲು ಸರ್ಕಾರ ತೀರ್ಮಾನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com