ಬೆಂಗಳೂರು: ಹದಿನೈದು ವರ್ಷಗಳ ಹಿಂದೆ ಬಿಡಿಎ ಲೇ ಔಟ್ ಮಾಡಲು ತಮ್ಮ ಜಮೀನುಗಳನ್ನು ನೀಡಿದ್ದ ಸುಮಾರು 400 ರೈತರಿಗೆ ಪ್ರಯೋಜನವಾಗುವ ರೀತಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಒಂದು ನಿಯಮವನ್ನು ತಂದಿದೆ.
ರೈತರಿಗಾಗಿ ಪ್ರೋತ್ಸಾಹಕ ಯೋಜನೆ ನಿವೇಶನಗಳನ್ನು ನೀಡಲಿದೆ. ಈಗಿರುವ ಮಾರುಕಟ್ಟೆ ಮೌಲ್ಯ ಶೇಕಡಾ 70ರಿಂದ ಶೇಕಡಾ 25ಕ್ಕೆ ಇಳಿಸಿ ರೈತರಿಗೆ ನೀಡಲು ತೀರ್ಮಾನಿಸಿದೆ. 2004ರಲ್ಲಿ ರೈತರ ಜಮೀನುಗಳನ್ನು ವಿಭಾಗ ಮಾಡಿ ಸರ್ ಎಂ ವಿಶ್ವೇಶ್ವರಯ್ಯ ಲೇ ಔಟ್ ಮತ್ತು ಬನಶಂಕರಿ 6ನೇ ಹಂತದಲ್ಲಿ ಒಟ್ಟು 10 ಸಾವಿರ ನಿವೇಶನಗಳನ್ನು ಮಾಡಲಾಗಿತ್ತು. ಅದಕ್ಕೆ ಪ್ರತಿಯಾಗಿ ರೈತರಿಗೆ ಅಷ್ಟೇ ಅಳತೆಯ ಅಭಿವೃದ್ಧಿ ಹೊಂದಿದ ಸೈಟ್ ಗಳನ್ನು ಪರಿಹಾರವಾಗಿ ನೀಡಲಾಗುವುದು ಎಂದು ತೀರ್ಮಾನವಾಗಿತ್ತು.
ಆದರೆ ನಂತರದ ದಿನಗಳಲ್ಲಿ ನಗರ ವಿಸ್ತಾರವಾಗುತ್ತಿದ್ದಂತೆ ಸೈಟ್ ಗಳ ಬೆಲೆ ಗಗನಕ್ಕೇರುತ್ತಿದ್ದಂತೆ ಮಾರುಕಟ್ಟೆ ಬೆಲೆಯ ಶೇಕಡಾ 70ರಷ್ಟು ಮೌಲ್ಯವನ್ನು ರೈತರು ನೀಡಬೇಕೆಂದು ಬಿಡಿಎ ಹೇಳಿತ್ತು. ಅದನ್ನು ರೈತರು ತಿರಸ್ಕರಿಸಿ ಕಡಿಮೆ ಬೆಲೆಗೆ ನಿವೇಶನಗಳನ್ನು ನೀಡಬೇಕೆಂದು ಒತ್ತಾಯಿಸಿದರು.
ಇದೀಗ ಸರ್ಕಾರ ರೈತರ ಬೇಡಿಕೆಯನ್ನು ಒಪ್ಪಿ ನಿನ್ನೆ ನಡೆದ ಬಿಡಿಎ ಸಭೆಯಲ್ಲಿ ನಿವೇಶನಗಳ ಬೆಲೆಯನ್ನು ಕಡಿತಗೊಳಿಸಿ ರೈತರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ. ಈ ಮೂಲಕ ರೈತರ ದೀರ್ಘಕಾಲದ ಹೋರಾಟ, ಪ್ರತಿಭಟನೆ, ಬೇಡಿಕೆಗೆ ನ್ಯಾಯ ಸಿಕ್ಕಿದೆ.
ಈ ಬಗ್ಗೆ ಮಾತನಾಡಿದ ಬಿಡಿಎ ಆಯುಕ್ತ ಹೆಚ್ ಆರ್ ಮಹದೇವ, ರೈತರಿಗೆ ಮಾರಾಟ ಮಾಡುವ ನಿವೇಶನಗಳ ದರ ನಿಗದಿಪಡಿಸಿ ಸರ್ಕಾರಕ್ಕೆ ಕಳುಹಿಸಿದ್ದೇವೆ ಎಂದರು. ರೈತರ ಪ್ರತಿನಿಧಿ ಈ ಬಗ್ಗೆ ಪ್ರತಿಕ್ರಿಯೆಗೆ ಸಿಗಲಿಲ್ಲ. ಅರ್ಕಾವತಿ ಮತ್ತು ನಾಡಪ್ರಭು ಕೆಂಪೇಗೌಡ ಲೇ ಔಟ್ ನ ವಿಚಾರದಲ್ಲಿ ಸಹ ಬಿಡಿಎ ಮತ್ತು ರೈತರ ನಡುವೆ ದೀರ್ಘಕಾಲದಿಂದ ಹೋರಾಟ ನಡೆಯುತ್ತಿದೆ.
Advertisement