ಕೊರೋನಾ ಸೋಂಕಿತ ಶವಕ್ಕೆ ಸಂಸ್ಕಾರ ನೆರವೇರಿಸಿ ನೈಜ ಮಾನವೀಯತೆ ಮೆರೆಯುವ ಆಶಾ

ಕೊರೋನಾ ಸಾಂಕ್ರಾಮಿಕ ರೋಗದಿಂದ ಮೃತಪಟ್ಟವರನ್ನು ಅವರ ಸಂಬಂಧಿಕರೆ ಮುಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಅದೆಷ್ಟೋ ಸೋಂಕಿತರು ಬೀದಿ ಹೆಣವಾಗುತ್ತಿದ್ದರೆ, ಇತ್ತೀಚೆಗೆ ಅಮಾನವೀಯವಾಗಿ ಗುಂಡಿಗೆ ಶವಗಳನ್ನು ಎಸೆದಿದ್ದು ಕೂಡ ಸುದ್ದಿಯಾಗಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗದಿಂದ ಮೃತಪಟ್ಟವರನ್ನು ಅವರ ಸಂಬಂಧಿಕರೆ ಮುಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಅದೆಷ್ಟೋ ಸೋಂಕಿತರು ಬೀದಿ ಹೆಣವಾಗುತ್ತಿದ್ದರೆ, ಇತ್ತೀಚೆಗೆ ಅಮಾನವೀಯವಾಗಿ ಗುಂಡಿಗೆ ಶವಗಳನ್ನು ಎಸೆದಿದ್ದು ಕೂಡ ಸುದ್ದಿಯಾಗಿತ್ತು.

ಆದರೆ ಇಲ್ಲೊಂದು ಮಹಿಳಾ ತಂಡ ಇಂತಹ ಅನಾಥ ಶವಗಳನ್ನು ವಿಧಿವಿಧಾನ ಮೂಲಕ ಶವಸಂಸ್ಕಾರ ಮಾಡಿ ನೈಜ ಮನುಷ್ಯತ್ವ ಮೆರೆಯುತ್ತಿದೆ. ಹೌದು, ರಾಮನಗರ ಜಿಲ್ಲೆಯ ಆಶಾ ಎಂಬುವರು ಕೊರೋನಾ ಸೋಂಕಿತ ಶವಗಳನ್ನೂ ಸಹ ವಿಧಿವಿಧಾನ ಮೂಲಕ ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ.

ಅವು ಬೀದಿ ಬದಿ ಹೆಣಗಳೇ ಆಗಲೀ, ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಜೀವಗಳೇ ಆಗಲೀ, ವಾರಸುದಾರರಿಲ್ಲದ ಶವಗಳಿಗೆ ಕಳೆದ ಮೂರು ವರ್ಷಗಳಿಂದ ಮುಕ್ತಿಕೊಡುವ ಕೆಲಸ ನಿರ್ವಹಿಸುತ್ತಾ ಬರುತ್ತಿದ್ದಾರೆ ಈ ಆಶಾ.
 
ಅಂದ್ಹಾಗೆ ಪಿಯುಸಿವರೆಗೆ ಓದಿರುವ ಆಶಾ ಇತರೆ ಮೂವರ ಜೊತೆ ಚನ್ನಪಟ್ಟಣದಲ್ಲಿ ಈ ಕಾಯಕದಲ್ಲಿ ತೊಡಗಿದ್ದಾರೆ. ಪೊಲೀಸರಿಂದ ಬಂದ ಕರೆಯೋ ಅಥವಾ ಇತರೆ ಯಾರೇ ಈ ರೀತಿ ಶವದ ಮಾಹಿತಿ ನೀಡಿದ ತಕ್ಷಣ “ಜೀವರಕ್ಷಾ ಚಾರಿಟೇಬಲ್ ಟ್ರಸ್ಟ್’’ ಸಿದ್ಧವಿರುತ್ತದೆ.

ಈ ರೀತಿ ಅನಾಥಶವಗಳಿಗೆ ಅಂತ್ಯಸಂಸ್ಕಾರ ಮಾಡಲು ಪ್ರೇರಣೆ ಒಂದು ಕರೆಯಂತೆ. ಮೂರು ವರ್ಷದ ಹಿಂದೆ ಆಶಾ ತನ್ನ ಭಾವರೊಂದಿಗೆ ರೈಲ್ವೆ ಹಳಿ ಮೇಲೆ ಅನಾಥವಾಗಿ ರಕ್ತಸಿಕ್ತವಾಗಿ ಬಿದ್ದಿದ್ದ ಶವವನ್ನು ಮುಟ್ಟಲು ಯಾರೂ ಹತ್ತಿರ ಬಾರದಿರುವುದನ್ನು ಕಂಡು ಅವರ ಮನಸು ಕರಗಿಹೋಯಿತಂತೆ. ಅಂದಿನಿಂದ ಇಂತಹ ಅನಾಥ ಶವಗಳಿಗೆ ಅಂತ್ಯಸಂಸ್ಕಾರ ಮಾಡಬೇಕೆಂದು ನಿರ್ಧರಿಸಿ ಈ ಟ್ರಸ್ಟ್ ನಿರ್ಮಿಸಿರುವುದಾಗಿ ಆಶಾ ಹೇಳುತ್ತಾರೆ.

ಆಶಾ ಸೇವೆ ಮೆಚ್ಚುಗೆ ಪಡೆದಿದ್ದು, ಮಾಜಿ ಮುಖ್ಯಮಂತ್ರಿ ರಾಮನಗರ ಶಾಸಕ ಹೆಚ್.ಡಿ.ಕುಮಾರಸ್ವಾಮಿ ಸಹ ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ. ಕೊರೋನಾ ಭೀತಿಯ ಈ ದಿನಗಳಲ್ಲಿ ಶವಸಂಸ್ಕಾರ ಮಾಡಲು ಜನರು ಹಿಂದೆ ಸರಿಯುತ್ತಿದ್ದಾರೆ. ಆದರೆ ಚನ್ನಪಟ್ಟಣದ ಆಶಾ ಮತ್ತವರ ತಂಡ ಅನಾಥ ಶವಗಳಿಗೆ ಸಂಸ್ಕಾರ ಮಾಡುತ್ತ ಇತರರಿಗೆ ಮಾದರಿ ಆಗಿದ್ದಾರೆ. ಅವರ ಕಾರ್ಯ ಜನಮೆಚ್ಚುವಂಥದ್ದು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com