ಬೆಂಗಳೂರು: ಆಟವಾಡುತ್ತಿದ್ದ ಬಾಲಕಿಯೊಬ್ಬಳು ಆಯತಪ್ಪಿ ಬಿದ್ದು ಮಾರತಹಳ್ಳಿಯ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿರುವ ಘಟನೆ ನಗರದ ಮಂತ್ರಿ ಅಪಾರ್ಟ್ಮೆಂಟ್ ಬಳಿ ನಡೆದಿದೆ.
6 ವರ್ಷದ ಮೊನಾಲಿಕ ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ. ಅಸ್ಸಾಂ ಮೂಲದ ನಿತ್ಯಾನಂದ ಎಂಬುವವರ ಪುತ್ರಿ ಮೊನಾಲಿಕಾ ತಮ್ಮ ಕುಟುಂಬದೊಂದಿಗೆ ಮಂತ್ರಿ ಅಪಾರ್ಟ್ಮೆಂಟ್ ಹಿಂಭಾಗದ ಗುಡಿಸಿಲಿನಲ್ಲಿ ವಾಸವಾಗಿದ್ದರು.
ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಮೊನಾಲಿಕಾ ಆಟವಾಡುತ್ತಿದ್ದಾಗ ಆಯ ತಪ್ಪಿ ಪಕ್ಕದಲ್ಲಿದ್ದ ಕಾಲುವೆಗೆ ಬಿದ್ದಿದ್ದಾಳೆ. ಪೋಷಕರು ನೋಡ ನೋಡುತ್ತಿದ್ದಂತೆ ಬಾಲಕಿ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾಳೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಮಾರತಹಳ್ಳಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಗುವಿನ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ನೀರಿನ ಮೇಲ್ಬಾಗದಲ್ಲಿ ಕಸ ಮತ್ತು ಹುಲ್ಲು ತುಂಬಿಕೊಂಡಿರುವುದರಿಂದ ರಕ್ಷಣಾ ಕಾರ್ಯಾಚರಣೆ ಗೆ ಅಡ್ಡಿಯಾಗಿದೆ. ಕಾಲುವೆಯಲ್ಲಿ ನೀರು ವೇಗವಾಗಿ ಹರಿಯುತ್ತಿದ್ದು, ಬಾಲಕಿ 100 ಮೀಟರ್ಗೂ ಹೆಚ್ಚು ದೂರ ಕೊಚ್ಚಿ ಹೋಗಿರೋ ಶಂಕೆ ವ್ಯಕ್ತವಾಗಿದೆ.
Advertisement