ಬೆಂಗಳೂರು: ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಅವರ ಹೆಂಡತಿ ತಬು ಗುಂಡೂರಾವ್ ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಟಬು, ಬಿಬಿಎಂಪಿಯ ನಿರ್ಲಕ್ಷ್ಯ, ಬೇಜವಾಬ್ದಾರಿತನ ಪ್ರದರ್ಶನದ ಬಗ್ಗೆ ಕಿಡಿಕಾರಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿದಿನ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಕೊರೋನಾ ನಿಯಂತ್ರಣಕ್ಕಾಗಿ ಬಿಬಿಎಂಪಿ ಸಂಪೂರ್ಣ ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಟಬು ಗುಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ.
ಕೊರೋನಾದಿಂದ ಉಂಟಾದ ತೊಂದರೆ ಬಗ್ಗೆ ನಮಗೆ ಸ್ವತಃ ಅನುಭವವಾಗಿದೆ. ನಮ್ಮ ಸಿಬ್ಬಂದಿಯೊಬ್ಬರಿಗೆ ಕೊರೋನಾ ಸೋಂಕು ದೃಢವಾಗಿತ್ತು. ಆದರೆ ಈ ವೇಳೆ ಬಿಬಿಎಂಪಿ ಸರಿಯಾಗಿ ಸ್ಪಂದಿಸಿಲ್ಲ, ಜೊತೆಗೆ ಬಿಬಿಎಂಪಿಯಿಂದ ಯಾವುದೇ ಕರೆ ಕೂಡ ಬಂದಿಲ್ಲ. ಬಳಿಕ ನಾವೇ ಸಿಬ್ಬಂದಿಯನ್ನು ಆಸ್ಪತ್ರೆಗೆ ಸೇರಿಸಿದ್ದೆವು. ಇಲ್ಲಿಯವರೆಗೆ ಬಿಬಿಎಂಪಿ ಸೋಂಕಿತರ ಮನೆಗಳಿಗೆ ಭೇಟಿ ನೀಡಿಲ್ಲ ಎಂದು ಟಬು ಗುಂಡೂರಾವ್ ಬಿಬಿಎಂಪಿ ಕಾರ್ಯವೈಖರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮುಂದುವರೆ ಅವರು, ಸೋಂಕಿತರ ಕುಟುಂಬ ಸದಸ್ಯರನ್ನು ಮತ್ತು ನಿಕಟ ಸಂಪರ್ಕಿತರನ್ನು ಬಿಬಿಎಂಪಿ ಸಿಬ್ಬಂದಿ ಕ್ವಾರಂಟೈನ್ ಕೂಡ ಮಾಡಿರಲಿಲ್ಲ. ಕೊನೆಗೆ ನಾವೇ ಯಾರೂ ಸಹ ನಮ್ಮನ್ನು ಭೇಟಿ ಮಾಡದಂತೆ ಫೇಸ್ಬುಕ್ ಮುಖಾಂತರ ಮನವಿ ಮಾಡಿಕೊಂಡೆವು ಎಂದು ತಮಗಾದ ಅನುಭವವನ್ನು ಟಬು ಹೇಳಿಕೊಂಡಿದ್ದಾರೆ.
ಗುಂಡೂರಾವ್ ಅವರು ಮಾಜಿ ಸಚಿವ ಹಾಗೂ ಹಾಲಿ ಶಾಸಕರಾಗಿದ್ದಾರೆ, ನಮಗೆ ಇಂತಹ ಪರಿಸ್ಥಿತಿ ಆದರೆ ಸಾಮಾನ್ಯ ಜನರ ಪಾಡೇನು ಎಂದು ಟಬು ರಾವ್ ಆತಂಕ ವ್ಯಕ್ತ ಪಡಿಸಿದ್ದಾರೆ.
Advertisement