ಮಂಡ್ಯ; ಕೋವಿಡ್ ೧೯ ವೈರಸ್ ಪರಿಣಾಮ ಮೇಲುಕೋಟೆಯಲ್ಲಿಂದು ಐತಿಹಾಸಿಕ ಶ್ರೀ ಚೆಲುವನಾರಾಯಣಸ್ವಾಮಿ “ಶ್ರೀಕೃಷ್ಭರಾಜಮುಡಿ” ಉತ್ಸವ ಶಾಸ್ತೋಕ್ತವಾಗಿ ಸರಳವಾಗಿ ನೆರವೇರಿತು
ದೇವಾಲಯದ ಒಳಪ್ರಾಕಾರದಲ್ಲಿ ನಡೆದ ಉತ್ಸವದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗಮಾತ್ರ ಭಾಗವಹಿಸಿದ್ದರು. ಶೀಘ್ರ ಕರೋನ ಮುಕ್ತವಾಗಿ ನಾಡು ಸುಭೀಕ್ಷವಾಗಲಿ ಎಂದು ಪ್ರಾರ್ಥಿಸಿ ಸ್ವಾಮಿಯ ಉತ್ಸವಕ್ಕೆ ಚಾಲನೆ ನೀಡಲಾಯಿತು. ಸಂಜೆ ೬-೩೦ ಗಂಟೆಗೆ ಆರಂಭವಾದ ಉತ್ಸವ ಮಂಗಳವಾದ್ಯ ಮತ್ತು ದಿವ್ಯಪ್ರಬಂಧ ಪಾರಾಯಣದೊಂದಿಗೆ ಒಳಪ್ರಕಾರದಲ್ಲಿ ನೆರವೇರಿತು. ಶನಿವಾರವೇ ಪೊಲೀಸ್ ಭದ್ರತೆಯೊಂದಿಗೆ ಮೇಲುಕೋಟೆಗೆ ತಂದು ಪರಿಶೀಲಿಸಿದ್ದ ವಜ್ರಖಚಿತ ಶ್ರೀಕೃಷ್ಣರಾಜಮುಡಿ ಕಿರೀಟವನ್ನು ಕೈ ಬೊಕ್ಕಸದಿಂದ ತೆಗೆದು ಶ್ರೀದೇವಿ ಭೂದೇವಿಯರೊಂದಿಗೆ ಗರುಡಾರೂಢನಾಗಿ ಅಲಂಕಾರಗೊಂಡ ಚೆಲುವನಾರಾಯಣಸ್ವಾಮಿ ತೊಡಿಸಲಾಯಿತು. ಗರುಡದೇವನ ಉತ್ಸವವನ್ನು ನಡೆಸಿದ ನಂತರ ಉಪವಿಭಾಧಿಕಾರಿ ಶಿವಾನಂದಮೂರ್ತಿ ಸಮಕ್ಷಮ ಸ್ವಾಮಿಗೆ ಸಂಜೆ ೬-೩೦ಕ್ಕೆ ಮಂಗಳಾರತಿ ನೆರವೇರಿಸಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ದೇವಾಲಯದ ಹೊರಭಾಗದಲ್ಲಿ ಉತ್ಸವ ನಡೆಸಲು ಅನುಮತಿಯಿಲ್ಲದ ಕಾರಣ ವೈರಮುಡಿ ಕಿರೀಟಧಾರಣೆಯಾಗುವ 'ಆಚಾರ್ಯ ರಾಮಾನುಜರ ಸನ್ನಿಧಿಯ ಆವರಣದಲ್ಲೇ ಸ್ವಾಮಿಗೆ ಅಲಂಕಾರ ಮಾಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಪಾಂಡವಪುರ ತಹಶೀಲ್ದಾರ್ ಪ್ರಮೋದ್ ಪಾಟೀಲ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನಂಜೇಗೌಡ, ಮತ್ತಿತರ ಅಧಿಕಾರಿಗಳು ಮಾತ್ರ ಭಾಗವಹಿಸಿದ್ದರು.
ಕೋವಿಡ್ ನಿಯಂತ್ರಣ ನಿಯಮ ಉಲ್ಲಂಘನೆ
ಮೇಲುಕೋಟೆ ದೇವಾಲಯದಲ್ಲಿಂದು ಕೃಷ್ಣರಾಜಮುಡಿ ಉತ್ಸವದ ಅಂಗವಾಗಿ ಶನಿವಾರ ನಡೆದ ತಿರುವಾಭರಣಪೆಟ್ಟಿಗೆ ಪಾರ್ಕಾವಣೆ ಕಾರ್ಯದ ವೇಳೆ ಕೋವಿಡ್ ೧೯, ಧಾರ್ಮಿಕದತ್ತಿ ಕಾಯ್ದೆಯ ನಿಯಮಗಳು ಮತ್ತು ಅನೂಚಾನ ಪರಂಪರೆಯನ್ನು ಉಲ್ಲಂಘಿಸಿದ್ದುದು ಕಂಡು ಬಂತು. ಭಾನುವಾರ ನಡೆದ ಕೃಷ್ಣರಾಜಮುಡಿ ಉತ್ಸವ ಲಾಕ್ ಡೌನ್ ಮತ್ತು ಕರ್ಪ್ಯೂ ಇದ್ದ ಕಾರಣ ಕಿರೀಟವನ್ನು ಶನಿವಾರವೇ ಜಿಲ್ಲಾ ಖಜಾನೆಯಿಂದ ನೀಡಲಾಗಿದ್ದು ಶನಿವಾರ ಸಂಜೆ ಪಾರ್ಕಾವಣೆ ಮಾಡಲಾಗಿದೆ. ಕೋವಿಡ್ ನಿಯಮ ಪಾಲಿಸುವ ಕಾರಣ ಮುಂದಿಟ್ಟು ನೂರಾರು ವರ್ಷಗಳಿಂದ ವೇದಾಂತ ದೇಶಿಕರ ಸನ್ನಿಧಿಯಲ್ಲಿ ಉತ್ಸವದಂದೆ ನಡೆಯುತ್ತಿದ್ದ ಕೃಷ್ಣರಾಜಮುಡಿ ಕಿರೀಟದ ಪಾರ್ಕಾವಣೆಯನ್ನು ಸಂಪ್ರದಾಯ ಮತ್ತು ದೇವಾಲಯದ ಕೈಪಿಡಿಯ ನಿಯಮಾವಳಿಗಳಿಗೆ ತಿಲಾಂಜಲಿ ನೀಡಿ ಉತ್ಸವಕ್ಕೆ ಒಂದು ದಿನ ಮುಂಚೆಯೇ ದೇವಾಲಯದ ಒಳಭಾಗದಲ್ಲೇಕಿರೀಟ ಪರಿಶೀಲನೆ ಮತ್ತು ಹಸ್ತಾಂತರ ಪ್ರಕ್ರಿಯೆ ನಡೆಸಲಾಗಿದೆ.
ಆದರೆ ಪಾರ್ಕಾವಣೆ ನಡೆಸಿದ ವೇಳೆ ಕೋವಿಡ್ ನಿಯಮಗಳನ್ನು ಸಂಪೂರ್ಣ ಉಲ್ಲಂಘಿಸಲಾಗಿದೆ. ಮಾಸ್ಕ ಧರಿಸದೆ ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೆ ಮೈಸೂರು ಡಿವಿಜಿನಲ್ ಕಮಿ಼ಷಿನರ್ರ ಇಡೀ ಕುಟುಂಬ ಪಾರ್ಕಾವಣೆಯಲ್ಲಿ ಭಾಗಿಯಾಗಿದ್ದಾರೆ. ಕುಟುಂಬ ಸದಸ್ಯರಿಗೆ ಪೋಟೋ ತೆಗೆಯಲೂ ಅವಕಾಶ ನೀಡಿದ್ದು, ವರದಿಗಾಗಿ ಪೋಟೋ ವಿಡಿಯೋ ಮಾಡಲು ಮಾಧ್ಯಮಕ್ಕೆ ಮಾತ್ರ ದೇಗುಲದ ಅಧಿಕಾರಿ ಅವಕಾಶ ನಿರಾಕರಿಸಿರುವುದು ಅನುಮಾನಕ್ಕಡೆಮಾಡಿದೆ. ಇದರ ಜೊತೆಗೆ ಧಾರ್ಮಿಕದತ್ತಿ ಇಲಾಖೆಯ ಸುತ್ತೋಲೆಗೆ ವಿರುದ್ಧವಾಗಿ ೬೫ ವರ್ಷ ಮೇಲ್ಪಟ್ಟ ದೇಗುಲದ ಸಿಬ್ಬಂದಿಗೆ ಕಿರೀಟ ಹಸ್ತಾಂತರಮಾಡಿದ್ದು, ಯಾವುದೇ ಆದೇಶವಿಲ್ಲದವರೂ ಸಹ ಪಾರ್ಕಾವಣೆಯ ದಾಖಲೆಗೆ ಸಹಿಮಾಡಲು ಅವಕಾಶ ನೀಡಲಾಗಿದೆ. ಈ ಬಗ್ಗೆ ಮೊದಲೇ ದೂರು ಬಂದಿದ್ದರೂ ಯಾವುದೇ ಕ್ರಮ ಜರುಗಿಸದಿರುವುದು ಅಧಿಕಾರಿಗಳಿಗೊಂದು ನಿಯಮ ಭಕ್ತರಿಗೊಂದು ನಿಯಮ ಜಾರಿಯಾಗಿ ಹೇಳಿದ್ದೊಂದು ಮಾಡಿದ್ದೇ ಮತ್ತೊಂದಾಗಿದೆ.
ವರದಿ: ನಾಗಯ್ಯ
Advertisement