ಬೆಂಗಳೂರು: ಐಎಲ್ಐ, ಸಾರಿ, ಐಸೋಲೇಷನ್ ನಲ್ಲಿರುವವರು, ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವವರನ್ನು ಪರಿಶೀಲಿನೆ ನಡೆಸಲು ತಂಡ ನಿಯೋಜಿಸಲು ಬೂತ್ ಮಟ್ಟದ ಕಾರ್ಯಪಡೆಗಳ ಅಧಿಕಾರಿಗಳಿಗೆ ರಾಜ್ಯ ಸರ್ಕಾರ 24 ಗಂಟೆಗಳ ಗಡುವು ನೀಡಿದೆ.
ಬೂತ್ ಮಟ್ಟದ ಕಾರ್ಯಪಡೆಗಳಿಗೆ ನೀಡಬೇಕಾಗಿರುವ ಮಾರ್ಗಸೂಚಿಗಳ ಕುರಿತು ವಿವರಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ಐಎಲ್ಐ, ಸಾರಿ, ಐಸೋಲೇಷನ್ ನಲ್ಲಿರುವವರು, ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವವರನ್ನು ಪರಿಶೀಲಿನೆ ನಡೆಸಲು ತಂಡ ನಿಯೋಜಿಸಲು ಬೂತ್ ಮಟ್ಟದ ಕಾರ್ಯಪಡೆಗಳ ಅಧಿಕಾರಿಗಳಿಗೆ 24 ಗಂಟೆಗಳ ಗಡುವು ನೀಡಲಾಗಿದೆ.
ನಿಯೋಜನೆಗೊಂಡ ತಂಡಗಳು ತಮ್ಮ ತಮ್ಮ ಬೂತ್ ಗಳಲ್ಲಿರುವ ಪ್ರತೀ ಮನೆಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ಐಸೋಲೇಷನ್ ನಲ್ಲಿರುವವರು ಮನೆಯಲ್ಲಿಯೇ ಇದ್ದಾರೆಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆಯೇ ಎಂಬ ಮಾಹಿತಿಯನ್ನು ಕಲೆ ಹಾಕಲಿದ್ದಾರೆ. ಸಾರಿ ಹಾಗೂ ಐಎಲ್ಐನಿಂದ ಬಳಲುತ್ತಿರುವ ಜನರನ್ನು ಪರೀಕ್ಷೆಗೊಳಪಡಿಸುವ ಕೆಲಸಗಳೂ ಇದೇ ವೇಳೆ ನಡೆಯುತ್ತವೆ. ಕೊರೋನಾ ಪಾಸಿಟಿವ್ ಬಂದ ಜನರನ್ನು ಕೂಡಲೇ ಅವರೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿರುವವರನ್ನು 24 ಗಂಟೆಗಳೊಳಗೆ ಕಂಡು ಹಿಡಿಯುವ ಕಾರ್ಯ ಮಾಡುತ್ತಾರೆಂದು ಹೇಳಿದ್ದಾರೆ.
ಕಲೆದ ಮೂರು ದಿನಗಳಿಂದ ರಾಜ್ಯದಲ್ಲಿ 216 ಮಂದಿ ಸಾವನ್ನಪ್ಪಿದ್ದು, ಇದರಲ್ಲಿ ಶೇ.25ರಷ್ಟು ಸಾವು ಕೊರೋನಾದಿಂದ ಸಂಭವಿಸಿದೆ. ಉಳಿದೆಲ್ಲವೂ ಕೊರೋನಾವಲ್ಲದ ಸಾವುಗಳಾಗಿವೆ. ಕೊರೋನಾ ದೃಢಪಡುತ್ತಿದ್ದಂತೆಯೇ ಜನರು ಭೀತಿಗೊಳಗಾಗುವ ಅಗತ್ಯವಿಲ್ಲ. ಮುಂದಿನ 2-3 ದಿನಗಳೊಳಗಾಗಿ ಕೊರೋನಾ ಸಾವಿನ ಕುರಿತ ಪರಿಶೀಲನೆಗಳು ಪೂರ್ಣಗೊಳ್ಳಲಿವೆ ಎಂದು ತಿಳಿಸಿದ್ದಾರೆ.
ಆರೋಗ್ಯ ಸಿಬ್ಬಂದಿಗಳಿಗೆ ಧರ್ಮಲ್ ಸ್ಕ್ಯಾನರ್ ಗಳು ಹಾಗೂ ಪಲ್ಸ್ ಆಕ್ಸಿಮೀಟರ್ ಗಳನ್ನು ನೀಡಲಾಗುತ್ತಿದೆ. ಇದರಿಂದ ಅವರು ಕೊರೋನಾ ಸೋಂಕಿತರನ್ನು ಪರಿಶೀಲನೆ ನಡೆಸಲು ಸುಲಭವಾಗುತ್ತದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ 200 ಆ್ಯಂಬುಲೆನ್ಸ್ ಗಳನ್ನು ಸೇರ್ಪಡೆಗೊಳಿಸಲಾಗುತ್ತದೆ. ಪರೀಕ್ಷೆ ನಡೆಸಲು ಅನುಮತಿ ನೀಡಿದ್ದರೂ, ವೈದ್ಯಕೀಯ ವರದಿಗಳನ್ನು ಶೀಘ್ರಗತಿಯಲ್ಲಿ ನೀಡದ ವೈದ್ಯಕೀಯ ಕಾಲೇಜುಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಕೋರಿ ರಾಜ್ಯ ಸರ್ಕಾರ ಐಸಿಎಂಆರ್'ಗೆ ಪತ್ರ ಬರೆಯಲಿದೆ ಎಂದಿದ್ದಾರೆ.
ರೋಗಿಗಳಿಗೆ ಚಿಕಿತ್ಸೆ ನೀಡಲು ಯಾವುದೇ ಆಸ್ಪತ್ರೆ ನಿರಾಕರಿಸುವಂತಿಲ್ಲ.ಕೊರೋನಾ ವೈದ್ಯಕೀಯ ವರದಿ ಇಲ್ಲದಿದ್ದರೂ ಕೂಡ ಅವರಿಗೆ ಚಿಕಿತ್ಸೆ ನೀಡಬೇಕು. ಇಲ್ಲದಿದ್ದಲೆ, ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಸೋಂಕಿತ ವ್ಯಕ್ತಿಗಳಿಗೆ ಡಿಜಿಟಲ್ ಎಕ್ಸ್'ರೇಗಳನ್ನು ಬಳಸಬಹುದಾಗಿದೆ. ಇದರಿಂದ ಶ್ವಾಸಕೋಶ ಸೋಂಕು ಶೀಘ್ರಗತಿಯಲ್ಲಿ ತಿಳಿದುಬರಲಿದೆ. ಪರಿಸ್ಥಿತಿ ಚಿಂತಾಜನಕವಾಗಿದ್ದರೆ, ಕೂಡಲೇ ವ್ಯಕ್ತಿಯನ್ನು ಕೊರೋನಾ ಚಿಕಿತ್ಸೆಗೆ ನಿಯೋಜಿಸಲಾಗಿರುವ ಆಸ್ಪತ್ರೆಗಳಿಗೆ ಸ್ಥಳಾಂತರಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಬಳಿಕ ಮಾತನಾಡಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆಯುಕ್ತ ಪಂಕಜ್ ಕುಮಾರ್ ಪಾಂಡೆಯವರು, ಪ್ರಸ್ತುತ ಬೆಂಗಳೂರಿನಲ್ಲಿ ಇನ್ನೂ 5,000 ಹಾಸಿಗೆಗಳು ಆಕ್ಸಿಜನ್ ಜೊತೆಗೆ ಖಾಲಿಯಿದ್ದು, ಜನರು ಹಾಸಿಗೆ ಖಾಲಿಯಿಲ್ಲ ಎಂದು ಚಿಂತೆಗೀಡಾಗಬಾರದು ಎಂದು ಹೇಳಿದ್ದಾರೆ.
Advertisement