ಬೆಂಗಳೂರು: ಮಂಗಳವಾರ ರಾತ್ರಿಯಿಂದ ಒಂದು ವಾರ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಲಾಕ್ ಡೌನ್ ಘೋಷಣೆಯಾದ ನಂತರ ಜನರು ಸಾಮೂಹಿಕವಾಗಿ ನಗರ ತೊರೆದು ಊರುಗಳಿಗೆ ಹೋಗುವ ದೃಶ್ಯ ಸಾಮಾನ್ಯವಾಗಿದೆ.
ಬೆಂಗಳೂರು ನಗರ ತೊರೆದು ಜನ ಬೇರೆ ಊರುಗಳು, ಹಳ್ಳಿಗಳಿಗೆ ಗುಳೆ ಹೋಗುತ್ತಿರುವುದರಿಂದ ಇಲ್ಲಿರುವ ಕೊರೋನಾ ಸೋಂಕನ್ನು ಅಲ್ಲಿಗೆ ವರ್ಗಾಯಿಸಲಿದ್ದಾರೆ ಎಂಬ ಆತಂಕ ಹಳ್ಳಿಯಲ್ಲಿರುವ ಜನರಿಗೆ ಮತ್ತು ಜಿಲ್ಲಾಡಳಿತಕ್ಕೆ ಎದುರಾಗಿದೆ.
ಕೆಎಸ್ ಆರ್ ಟಿಸಿಯಲ್ಲಿ ಬೆಂಗಳೂರು ನಗರದಿಂದ ನಿನ್ನೆ 30 ಸಾವಿರಕ್ಕೂ ಅಧಿಕ ಮಂದಿ ಬೇರೆ ಬೇರೆ ಊರುಗಳಿಗೆ ಹೋಗಿದ್ದಾರೆ. ಇಂದು ಸಾಯಂಕಾಲದೊಳಗೆ ಮತ್ತೆ ಒಂದಷ್ಟು ಮಂದಿ ಹೋಗುವ ಸಾಧ್ಯತೆಯಿದ್ದು ಸಾವಿರ ಬಸ್ಸುಗಳನ್ನು ಓಡಿಸುವ ಯೋಜನೆಯಲ್ಲಿದೆ ಕೆಎಸ್ ಆರ್ ಟಿಸಿ. ಗೂಡ್ಸ್ ವಾಹನಗಳಲ್ಲಿ, ಸ್ವಂತ ವಾಹನಗಳಲ್ಲಿ ಕೂಡ ನಗರ ಬಿಟ್ಟು ಹೋಗುವ ದೃಶ್ಯ ನಿನ್ನೆ ಮತ್ತು ಇಂದು ಸಾಮಾನ್ಯವಾಗಿದೆ.
ದೇವನಹಳ್ಳಿ, ತುಮಕೂರು ರಸ್ತೆಯ ಟೋಲ್ ಗೇಟ್, ಮೈಸೂರು ರಸ್ತೆ, ಹೊಸೂರು ರಸ್ತೆ, ಹೈದರಾಬಾದ್ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. 2 ಸಾವಿರಕ್ಕೂ ಹೆಚ್ಚು ಟ್ಯಾಕ್ಸಿ ಮತ್ತು ಖಾಸಗಿ ವಾಹನಗಳು ಸಂಚಾರದಲ್ಲಿ ನಿಲುಗಡೆಯಾಗಿದ್ದವು. ನೆಲಮಂಗಲ ಹತ್ತಿರ ನವಯುಗ ಟೋಲ್ ನಲ್ಲಿ ಸುಮಾರು 2 ಕಿಲೋ ಮೀಟರ್ ವರೆಗೆ ವಾಹನ ನಿಲುಗಡೆಯಾಗಿತ್ತು.
ಕಳೆದ ವಾರ ಸಾವಿರಾರು ಮಂದಿ ನಗರ ತೊರೆದು ಊರುಗಳಿಗೆ ಹೋಗಿದ್ದರು. ಬೆಂಗಳೂರು ನಗರದಲ್ಲಿ ಕೆಲಸವಿಲ್ಲದೆ, ಜೀವನ ಸಾಗಿಸಲು ಸಾಧ್ಯವಾಗದೆ, ಕೊರೋನಾ ಸೋಂಕು ಹೆಚ್ಚಾಗಬಹುದೆಂದು ಬಿಟ್ಟು ಹೋಗುವವರೇ ಅಧಿಕ ಮಂದಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಆದರೆ ಅಲ್ಲಿ ಸಾಕಷ್ಟು ಹಣ ಸಿಗುತ್ತಿಲ್ಲ. ನಾಲ್ಕು ತಿಂಗಳಿನಿಂದ ಮನೆ ಬಾಡಿಗೆ ಕಟ್ಟಿಲ್ಲ.ಕೊರೋನಾ ಕೂಡ ಜಾಸ್ತಿಯಾಗುತ್ತಿದೆ.ಹೀಗಾಗಿ ನಮ್ಮೂರು ಚನ್ನರಾಯಪಟ್ಟಣಕ್ಕೆ ಹೋಗುತ್ತಿದ್ದು ಪರಿಸ್ಥಿತಿಯೆಲ್ಲ ಸುಧಾರಿಸಿದ ಬಳಿಕ ಹಿಂತಿರುಗುತ್ತೇನೆ ಎಂದಿದ್ದಾರೆ.
ಬೆಂಗಳೂರು ನಗರದಿಂದ ಊರುಗಳಿಗೆ ಹೋಗುವವರು ಇಂದು ರಾತ್ರಿಯೊಳಗೆ ಹೋಗಿ. ಮತ್ತೆ ಸಂಚಾರ ನಿರ್ಬಂಧವಿರುತ್ತದೆ ಎಂದು ನಗರ ಉಸ್ತುವಾರಿ ಸಚಿವ ಆರ್ ಅಶೋಕ್ ಹೇಳಿದ್ದರು. ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಹ ಊರುಗಳಿಗೆ ಹೋಗುವವರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದಿದ್ದಾರೆ.
Advertisement