ಕೊಪ್ಪಳ: ಕೊರೋನಾ ಸಂಕಷ್ಟದಲ್ಲೂ ಶಿಕ್ಷಕರಿಗೆ ತರಬೇತಿ ನೀಡುತ್ತಿರುವ ಡಯಟ್!

ಎಲ್ಲೆಡೆ ಕೊರೊನಾ ಭೀತಿ ಆವರಿಸಿದೆ. ಶಾಲಾ-ಕಾಲೇಜುಗಳು,  ಶಿಕ್ಷಣ ಸಂಸ್ಥೆಗಳು ಆನ್ಲೈನ್ ಮೂಲಕವೇ ಮಕ್ಕಳಿಗೆ ಪಾಠ ಮಾಡಬೇಕು ಎಂದು ಒಂದು ಕಡೆ ಹೇಳುತ್ತಿರುವ ಸರಕಾರ. ಮಕ್ಕಳಿಗೆ ಪಾಠ ಮಾಡಬೇಕಾದ ಶಿಕ್ಷಕರಿಗೆ ಆನ್ಲೈನ್ ಮೂಲಕ ತರಬೇತಿ ನೀಡುವ ಬದಲಾಗಿ, ನಿಗದಿತ ಸ್ಥಳ, ದಿನಗಳಲ್ಲಿ ಖುದ್ದು ತರಬೇತಿಗೆ ಹಾಜರಾಗುವಂತೆ ನಿರ್ದೇಶನ ನೀಡಿದ್ದು, ಎಷ್ಟರಮಟ್ಟಿಗೆ ಸರಿ ಎಂಬ ಚರ್ಚೆ ಈಗ
ಮುನಿರಾಬಾದ್ ಡಯಟ್
ಮುನಿರಾಬಾದ್ ಡಯಟ್

ಕೊಪ್ಪಳ: ಎಲ್ಲೆಡೆ ಕೊರೊನಾ ಭೀತಿ ಆವರಿಸಿದೆ. ಶಾಲಾ-ಕಾಲೇಜುಗಳು,  ಶಿಕ್ಷಣ ಸಂಸ್ಥೆಗಳು ಆನ್ಲೈನ್ ಮೂಲಕವೇ ಮಕ್ಕಳಿಗೆ ಪಾಠ ಮಾಡಬೇಕು ಎಂದು ಒಂದು ಕಡೆ ಹೇಳುತ್ತಿರುವ ಸರಕಾರ. ಮಕ್ಕಳಿಗೆ ಪಾಠ ಮಾಡಬೇಕಾದ ಶಿಕ್ಷಕರಿಗೆ ಆನ್ಲೈನ್ ಮೂಲಕ ತರಬೇತಿ ನೀಡುವ ಬದಲಾಗಿ, ನಿಗದಿತ ಸ್ಥಳ, ದಿನಗಳಲ್ಲಿ ಖುದ್ದು ತರಬೇತಿಗೆ ಹಾಜರಾಗುವಂತೆ ನಿರ್ದೇಶನ ನೀಡಿದ್ದು, ಎಷ್ಟರಮಟ್ಟಿಗೆ ಸರಿ ಎಂಬ ಚರ್ಚೆ ಈಗ ಶುರುವಾಗಿದೆ.

ಕೊಪ್ಪಳ ಜಿಲ್ಲೆಯ ಮುನಿರಾಬಾದ್ ನ ಡಯಟ್ ನಲ್ಲಿ ಜಿಲ್ಲೆಯ ನಾನಾ ತಾಲೂಕುಗಳ 20 ಶಾಲೆಯ ಶಿಕ್ಷಕರನ್ನು ಆಯ್ಕೆ ಮಾಡಿ ಅವರಿಗೆ ಜುಲೈ 15ರಿಂದ 15 ದಿನಗಳ ಕಾಲ ಇಂಗ್ಲಿಷ್ ಲಾಂಗ್ವೆಜ್ ಎಂಪಾವರ್ಮೆಂಟ್ ಟ್ರೇನಿಂಗ್ ಪ್ರೋಗ್ರಾಂ ಮಾಡಲಾಗುತ್ತಿದೆ. ಈ ತರಬೇತಿಯನ್ನು ಆನ್ಲೈನ್ ಮೂಲಕವೇ ಮಾಡಬಹುದಿತ್ತು ಎಂಬುದು ಸದ್ಯ ಕೇಳಿ ಬರುತ್ತಿರುವ ಮಾತು.

ಇಡೀ ಜಿಲ್ಲೆಯ 20 ಶಾಲೆಗಳ ಶಿಕ್ಷಕರು ಎಂದರೆ ಕೆಲ ಶಿಕ್ಷಕರಿಗೆ ಮುನಿರಾಬಾದ್ ಬಹಳ ಹತ್ತಿರವೂ ಇರಬಹುದು. ಹತ್ತಿರ ಇರುವಂಥ ಶಿಕ್ಷಕರಿಗೆ ಇದು ಅಷ್ಟೇನೂ ಸಮಸ್ಯೆಯಾಗಲಿಕ್ಕಿಲ್ಲ. ಆದರೆ ಮುನಿರಾಬಾದ್ ಗೆ ದೂರದ ತಾಲೂಕುಗಳಾದ ಕೊಪ್ಪಳವೂ ಸೇರಿದಂತೆ ಕಾರಟಗಿ, ಕನಕಗಿರಿ, ಕುಷ್ಟಗಿ, ಯಲಬುರ್ಗಾ ತಾಲೂಕುಗಳಿಂದ ಆಯ್ಕೆಯಾದ ಶಿಕ್ಷಕರಿಗೆ ಖಂಡಿತವಾಗಿಯೂ ಈ ತರಬೇತಿ ಸಮಸ್ಯೆಯಾಗಿ ಕಾಡುತ್ತದೆ.

ತರಬೇತಿಗೆ ಆಯ್ಕೆಯಾದ ಶಿಕ್ಷಕರು ತಮ್ಮ ಮನೆ ಇರುವ ಊರಿನಿಂದ ಮುನಿರಾಬಾದ್ ಗೆ ತೆರಳಬೇಕೆಂದರೆ ಸ್ವಂತ ವಾಹನ ಹೊಂದಿರುವವರನ್ನು ಹೊರತುಪಡಿಸಿದರೆ ಉಳಿದವರು ಬಸ್ ಅವಲಂಬಿಸಲೇಬೇಕು. ಈಗ ಸಮಯಕ್ಕೆ ಸರಿಯಾಗಿ ಬಸ್ ಗಳ  ಸೌಕರ್ಯ ಸಹ ಇಲ್ಲ. ತರಬೇತಿಗೆ ಹಾಜರಾದರೆ ಬಸ್ ಪ್ರಯಾಣದಿಂದ ಕೊರೋನಾ ಭೀತಿ ಒಂದು ಕಡೆಯಾದರೆ, ತರಬೇತಿಗೆ ಹಾಜರಾಗದಿದ್ದರೆ ಇಲಾಖೆಯ ಕ್ರಮ ಎದುರಿಸುವ ಭೀತಿ ಮತ್ತೊಂದು ಕಡೆ. ಒಂದು ದಿನವಾದರೆ ಹೇಗೋ ಸಹಿಸಿಕೊಳ್ಳಬಹುದು. ಆದರೆ 15ದಿನಗಳ ಕಾಲ ಬಸ್ ಸಂಚಾರ ಕಷ್ಟವೂ ಹೌದು, ಆಪತ್ತು ತಂದೊಡ್ಡಿಕೊಳ್ಳುವ ವಿಚಾರವೂ ಹೌದು ಎಂಬುದು ಹೆಸರು ಹೇಳಲಿಚ್ಛಿಸದ ಶಿಕ್ಷಕರೊಬ್ಬರ ಅಳಲು.

ಸರಿ ತರಬೇತಿಗೆ ಹಾಜರಾದರೆ ಅಲ್ಲಾದರೂ ಸರಿಯಾದ ವ್ಯವಸ್ಥೆ, ಮುಂಜಾಗ್ರತೆ ಇದೆ ಎಂದುಕೊಂಡರೆ ಅದೂ ಸಹ ಇಲ್ಲ. ತರಬೇತಿಗೆ ಹಾಜರಾದ ಶಿಕ್ಷಕರಿಗೆ ಖಾನಾವಳಿಯಿಂದ ಊಟ ತರಿಸಿಕೊಡುತ್ತಿರುವುದು ಸಹ ಸಮಂಜಸ ಕ್ರಮವಲ್ಲ. ಕೊರೋನಾ ಹರಡದಿರುವ ಯಾವ ಎಚ್ಚರಿಕೆ ಕ್ರಮಗಳು ತರಬೇತಿ ಸಮಯದಲ್ಲಿ ಶಿಕ್ಷಕರಿಗೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಮುನಿರಾಬಾದ್ ಡಯಟ್ ನಲ್ಲಿ ಜುಲೈ 15ರಿಂದ 15ದಿನಗಳ ಕಾಲ ಆಯ್ದ ಶಿಕ್ಷಕರಿಗೆ ಇಂಗ್ಲಿಷ್ ವಿಷಯ ಕುರಿತ ತರಬೇತಿ ನಡೆಯುತ್ತಿರುವುದು ಸತ್ಯ. ಕೊರೋನಾ ವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ ತರಬೇತಿ ಕೇಂದ್ರದಲ್ಲಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ. ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಕೆ ಹಾಗೂ ಮಾಸ್ಕ್ ನೀಡಲಾಗುತ್ತಿದೆ. ತರಬೇತಿಗೆ ಬರುವ ಶಿಕ್ಷಕರಿಗೆ ತೊಂದರೆಯಾಗುತ್ತಿರುವುದು ನಿಜ. ಇದನ್ನು ಸರಕಾರದ ಗಮನಕ್ಕೆ ತರುತ್ತೇವೆ. ಮುಂದಿನ ದಿನಗಳಲ್ಲಿ ಕ್ಲಸ್ಟರ್ಮಟ್ಟದಲ್ಲಿ ತರಬೇತಿ ನೀಡಲು ಸರಕಾರಕ್ಕೆ ಕೋರಲಾಗಿದೆ. ಸದ್ಯ ಸರಕಾರದ ಆದೇಶದನ್ವಯ ತರಬೇತಿ ನಡೆಯುತ್ತಿದೆ. ಸರಕಾರದ ಆದೇಶವನ್ನು ಪಾಲಿಸಲೇಬೇಕಲ್ಲ ಎಂದು ಡಯಟ್ ಪ್ರಾಚಾರ್ಯ ಹನುಮಕ್ಕ ಅವರು ಹೇಳಿದ್ದಾರೆ.

-ಬಸವರಾಜ ಕರುಗಲ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com