ಹಾಸನ: ಯುವತಿಯೊಬ್ಬಳನ್ನು ಅಪಹರಣ ಮಾಡಿದ್ದಾನೆಂದು ಆರೋಪಿಸಿ 30 ವರ್ಷದ ವ್ಯಕ್ತಿಯೊಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಆಲೂರು ತಾಲೂಕಿನ ಸೊಪ್ಪಿನಹಳ್ಳಿಯಲ್ಲಿ ನಡೆದಿದೆ.
ಮಧು (30) ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಮಧು ಸೊಪ್ಪಿನಹಳ್ಳಿಯ ನಿವಾಸಿಯಾಗಿದ್ದು, ಇದೇ ಗ್ರಾಮದ ಮತ್ತೊಬ್ಬ ನಿವಾಸಿ ರೂಪೇಶ್ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ.
ಮೃತಪಟ್ಟ ಮಧು ಆರೋಪಿ ರೂಪೇಶ್ ಅಣ್ಣನ ಮಗಳನ್ನು ಪ್ರೀತಿಸಿದ್ದು, ಕೆಲ ತಿಂಗಳ ಹಿಂದಷ್ಟೇ ಆಕೆಯನ್ನು ಅಪಹರಿಸಿ ಬೆಂಗಳೂರಿಗೆ ಕರೆದೊಯ್ದಿದ್ದ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಯುವತಿಯ ಮನೆಯವರು ಹುಡುಗಿಯನ್ನು ಹುಡುಕಿ ಕರೆತಂದಿದ್ದರು. ನಂತರ ಪೊಲೀಸರು ಮಧುಗೆ ಬುದ್ದಿ ಮಾತು ಹೇಳಿದ್ದರು. ಬಳಿಕ ಮಧುಗೆ ಜಾಮೀನು ದೊರೆತಿತ್ತು. ಆದರೂ ಯುವತಿಯೊಂದಿಗಿನ ಸಂಪರ್ಕವನ್ನು ಮಾತ್ರ ಮುಂದುವರೆಸಿದ್ದ. ಈ ಸಂಬಂಧ ಎರಡೂ ಕುಟುಂಬಗಳ ನಡುವೆ ವೈಷಮ್ಯ ಮೂಡಿತ್ತು.
ಇದರಂತೆ ಮಧು ಮತ್ತೆ ಯುವತನ್ನು ಕರೆದೊಯ್ಯಲು ಮುಂದಾಗಿದ್ದು, ಈ ಬಗ್ಗೆ ಮಾಹಿತಿ ತಿಳಿದ ರೂಪೇಶ್ ಕೂಡಲೇ ಹಿಂಬಾಲಿಸಿ ಮಧುನನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾನೆ.
ಇದೀಗ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವ ಪೊಲೀಸರು ಆರೋಪಿ ರೂಪೇಶ್ ಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ.
Advertisement