ಬೆಂಗಳೂರು: ತಿಂಗಳು ತಿಂಗಳು ನೀರಿನ ಬಿಲ್ಲನ್ನು ಸರಿಯಾಗಿ ಕಟ್ಟದೆ, ಅವಧಿ ಮುಗಿದ ಬಳಿಕ ಪಾವತಿ ಮಾಡಲು ಮುಂದಾಗುವ ಜನರಿಗೆ ಇನ್ನು ಮುಂದೆ ಬಡ್ಡಿ ಬಿಸಿ ತಟ್ಟಲಿದೆ.
ಅವಧಿ ಮುಗಿದ ಬಳಿಕ ನೀರಿನ ಬಿಲ್ ಕಟ್ಟುವ ಜನರಿಗೆ ಬಡ್ಡಿ ಹೇರಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯೂಎಸ್ಎಸ್ಬಿ)ಯು ಮುಂದಾಗಿದೆ.
ನಿರ್ಧಾರವು ಬಿಡಬ್ಲ್ಯೂಎಸ್ಎಸ್ಬಿ ಕಾಯ್ದೆಗೆ ಅನುಗುಣವಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ, ಲಾಕ್ಡೌನ್ ಕಾರಣದಿಂದಾಗಿ ಅನೇಕ ಗ್ರಾಹಕರು ತಮ್ಮ ಬಿಲ್ಗಳನ್ನು ಪಾವತಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ನಾವು 1.26 ಕೋಟಿ ರೂ. ಬಡ್ಡಿ ವಿಧಿಸಲು ಮುಂದಾಗಿದ್ದೆವು, ಆದರೆ ಸರ್ಕಾರವು ಬಡ್ಡಿಯನ್ನು ಮನ್ನಾ ಮಾಡುವಂತೆ ತಿಳಿಸಿತ್ತು ಬಿಡಬ್ಲ್ಯೂಎಸ್ಎಸ್ಬಿ ಮುಖ್ಯ ಎಂಜಿನಿಯರ್ ಕೆಂಪರಾಮಯ್ಯ ಅವರು ಹೇಳಿದ್ದಾರೆ.
ತೆರಿಗೆ ಮನ್ನಾ ಜೂನ್ ತಿಂಗಳಿನಿಂದ ಅನ್ವಯವಾಗುವುದಿಲ್ಲ. ಬಿಲ್ಲನ್ನು ಜುಲೈ ಅಥವಾ ನಂತರದ ತಿಂಗಳುಗಳಲ್ಲಿ ಪಾವತಿ ಮಾಡಬೇಕಾಗುತ್ತದೆ. ಲಾಕ್ಡೌನ್ ಕಾರಣ ಈ ಹಿಂದೆ ಮುಚ್ಚಲಾಗಿದ್ದ ಬೆಂಗಳೂರು ಒನ್ ಕೇಂದ್ರಗಳನ್ನು ಇದೀಗ ಮರಳಿ ತೆರೆಯಲಾಗಿದೆ. ಆನ್'ಲೈನ್ ನಲ್ಲಿ ಬಿಲ್ ಪಾವತಿ ಮಾಡುವವರನ್ನು ಪ್ರೋತ್ಸಾಹಿಸುತ್ತಿದ್ದೇವೆಂದು ತಿಳಿಸಿದ್ದಾರೆ.
ಬಿಲ್ ಪಾವತಿ ಹೇಗೆ...?
ಬಿಡಬ್ಲ್ಯೂಎಸ್ಎಸ್ಬಿಯು ತನ್ನ ಅಧಿಕೃತ ವೆಬ್ಸೈಟ್ ಮೂಲಕ (www.bwssb.gov.in) ಎಲ್ಲಾ ಗ್ರಾಹಕರ ವಾಟರ್ ಮೀಟರ್ ರೀಡಿಂಗ್ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ತಿಳಿಸುತ್ತದೆ. ಅದರ ಅನ್ವಯ ಪಾವತಿ ಮಾಡಬಹುದಾಗಿದೆ. ‘ಬಿಡಬ್ಲ್ಯೂಎಸ್ಎಸ್ಬಿ ಪೇಮೆಂಟ್ ಅಪ್ಲಿಕೇಶನ್’ ಕೂಡ ಲಭ್ಯವಿದ್ದು, ಈ ಆ್ಯಪ್ ಮೂಲಕ ತ್ವರಿತಗತಿಯಲ್ಲಿ ಹಣವನ್ನು ಪಾವತಿ ಮಾಡಬಹುದುದಾಗಿದೆ. ಪೇಟಿಯಂ, ಫೋನ್ ಪೆ, ಗೂಗಲ್ ಪೇ ಮೂಲಕ ಕೂಡ ಬಿಲ್ ಪಾವತಿ ಮಾಡಬಹುದಾಗಿದೆ.
ಕಾವೇರಿ ಭವನದ 2ನೇ ಮಹಡಿ ಬಂದ್
ತಾಂತ್ರಿಕ ಎಂಜಿನಿಯರ್ ಒಬ್ಬರಲ್ಲಿ ಕೊರೋನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಕಾವೇರಿ ಭವನವನ್ನು ಬಂದ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರದವರೆಗೂ ಬಿಡಬ್ಲ್ಯೂಎಸ್ಎಸ್ಬಿ ಕಚೇರಿ ಬಂದ್ ಆಗಿರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಹಡಿಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುತ್ತಿದ್ದು, ಜು.27ರ ಬಳಿಕ ಕಚೇರಿಗಳು ಪುನರಾರಂಭಗೊಳ್ಳಲಿದೆ ಎಂದು ತಿಳಿದುಬಂದಿದೆ. ಎಂಜಿನಿಯರ್ ಜೊತೆಗೆ ಸಂಪರ್ಕದಲ್ಲಿದ್ದ 18 ಮಂದಿ ಸಿಬ್ಬಂದಿಗಳು ಕ್ವಾರಂಟೈನ್ ಒಳಗಾಗಿದ್ದಾರೆಂದು ಕೆಂಪರಾಮಯ್ಯ ಅವರು ತಿಳಿಸಿದ್ದಾರೆ.
Advertisement