ಚಿಕ್ಕಬಳ್ಳಾಪುರ: ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಪುತ್ರಿಯ ಸಾವಿಗೆ ಆಕೆಯ ಪ್ರಿಯಕರನನ್ನು ಕೊಂದು ತಂದೆ ಸೇಡು ತೀರಿಸಿಕೊಂಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಬಾಗೇಪಲ್ಲಿ ತಾಲ್ಲೂಕಿನ ಗೂಳೂರು ಸಮೀಪದ ಯಗವಮದ್ದಲಖಾನೆ ಗ್ರಾಮದ ಹರೀಶ್ (25 ವರ್ಷ) ಕೊಲೆಯಾದ ಯುವಕ. ವೆಂಕಟೇಶ್ ಹಾಗೂ ಅವರ ಸ್ನೇಹಿತ ಗಣೇಶ್ ಬಂಧಿತ ಆರೋಪಿಗಳು. ಹರೀಶ್ ಹಾಗೂ ಆರೋಪಿ ವೆಂಕಟೇಶ್ ಅವರ ಪುತ್ರಿ ಶಿರಿಷಾ ಪರಸ್ಪರ ಪ್ರೀತಿಸುತ್ತಿದ್ದರು. ಶಿರಿಷಾಳ ಪ್ರೀತಿಗೆ ಆಕೆಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆಕೆ ಕಳೆದ 10 ತಿಂಗಳ ಹಿಂದೆ ತಮ್ಮ ಮನೆಯಲ್ಲಿಯೇ ಆತ್ಮಹತ್ಯೆ ಗೆ ಶರಣಾಗಿದ್ದಳು ಎನ್ನಲಾಗಿದೆ.
ಘಟನೆ ನಂತರ ಹರೀಶ್, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಆತ ಊರಿಗೆ ವಾಪಾಸಾಗಿದ್ದ. ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಈ ಕುರಿತು ಪ್ರತಿಕ್ರಿಯಿಸಿ, ತನ್ನ ಮಗಳ ಸಾವಿಗೆ ಪ್ರತಿಕಾರ ತೀರಿಸಿಕೊಳ್ಳಲು ಹರೀಶ್ ನನ್ನು ಕೊಲೆ ಮಾಡಲು ತಂದೆ ವೆಂಕಟೇಸ್ ಸಂಚು ರೂಪಿಸಿದ್ದ. ಈ ಕೃತ್ಯಕ್ಕಾಗಿ ಗೆಳೆಯ ಗಣೇಶ್ ಸಹಕಾರ ಪಡೆದಿದ್ದರು ಎಂದರು.
ವೆಂಕಟೇಶ್ ಹಾಗೂ ಗಣೇಶ್ ಶುಕ್ರವಾರ ರಾತ್ರಿ 11 ಸುಮಾರಿಗೆ ಹರೀಶ್ ನನ್ನು ಬೈಕಿನಲ್ಲಿ ಹಿಂಬಾಲಿಸಿ ಚಾಕುವಿನಿಂದ 17 ಬಾರಿ ಇರಿದು ಕೊಲೆ ಮಾಡಿದ್ದಾರೆ ಎಂದು ವಿವರಿಸಿದರು. ಘಟನೆ ನಡೆದ ಮೂರು ಗಂಟೆಗಳಲ್ಲಿ ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ. ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.
Advertisement