ಬೆಂಗಳೂರು: ಮಳೆಗಾಲ ಅಥವಾ ಪ್ರವಾಹದ ಸಂದರ್ಭಗಳಲ್ಲಿ ಯಾವುದೇ ರಾಜ್ಯದ ಜಲಾಶಯಗಳಿಂದ ನೀರು ಹೊರ ಬಿಡುವ ಮುನ್ನ ನೀರು ಹರಿದು ಹೋಗುವ ನೆರೆ ರಾಜ್ಯಗಳಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡುವುದು ಕಡ್ಡಾಯವಾಗಿದ್ದು, ಈ ಕುರಿತು ಕೈಗೊಳ್ಳುವ ಕ್ರಮಗಳ ಕುರಿತು ವಿವರಣೆ ನೀಡುವಂತೆ ರಾಷ್ಟ್ರೀಯ ವಿಪತ್ತು ಕಾರ್ಯ ನಿರ್ವಹಣಾ ಸಮಿತಿಗೆ ಹೈಕೋರ್ಟ್ ಶುಕ್ರವಾರ ಸೂಚಿಸಿದೆ.
ಈ ಕುರಿತು ತುಮಕೂರಿನ ಗುಬ್ಬಿ ತಾಲೂಕು ಚೇಳೂರು ಗ್ರಾಮದ ಎ.ಮಲ್ಲಿಕಾರ್ಜುನ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ನ್ಯಾಯಪೀಠ, ಯಾವುದೇ ರಾಜ್ಯ ತನ್ನ ಜಲಾಶಯದಿಂದ ನೀರಕು ಹೊರಕ್ಕೆ ಹರಿಬಿಟ್ಟರೆ, ಅದಕ್ಕೂ ಮುನ್ನ ಆ ನೀರು ಹರಿದು ಹೋಗುವ ರಾಜ್ಯಕ್ಕೆ ಮಾಹಿತಿ ಹೇಗೆ ಸಿಗುತ್ತದೆ. ಎಂದು ಪ್ರಶ್ನಿಸಿತು. ಅಲ್ಲದೆ. ಈ ಕುರಿತು ನೆರೆ ರಾಜ್ಯಗಳಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡುವುದು ಹಾಗೂ ಈ ಕುರಿತು ಕೈಗೊಳ್ಳುವ ಕ್ರಮಗಳ ಕುರಿತು ವಿವರಣೆ ನೀಡುವಂತೆ ರಾಷ್ಟ್ರೀಯ ವಿಪತ್ತು ಕಾರ್ಯ ನಿರ್ವಹಣಾ ಸಮಿತಿಗೆ ಸೂಚನೆ ನೀಡಿ ಆ.7ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿತು.
Advertisement