ಬೆಂಗಳೂರಿನಲ್ಲಿ 16 ಸಾವಿರ ಕಂಟೈನ್ ಮೆಂಟ್ ವಲಯಗಳು: ತಜ್ಞರು, ಬಿಬಿಎಂಪಿ ಅಧಿಕಾರಿಗಳು, ಜನರು ಏನು ಹೇಳುತ್ತಾರೆ?

ಈ ಅಂಕಿಅಂಶ ನೋಡಿದರೆ ಬೆಂಗಳೂರಿಗರು ಬೆಚ್ಚಿಬೀಳದೆ ಇರರು. ಬೆಂಗಳೂರು ನಗರದಲ್ಲಿ ಈಗ 16 ಸಾವಿರದ 005 ಕಂಟೈನ್ ಮೆಂಟ್ ವಲಯಗಳಿವೆ. ಮೇ ತಿಂಗಳಲ್ಲಿ ಇದ್ದದ್ದು ಕೇವಲ 20 ಕಂಟೈನ್ ಮೆಂಟ್ ವಲಯಗಳು.
ಜೆ ಸಿ ರೋಡ್ ಹತ್ತಿರ ಹಾಕಲಾದ ಸೀಲ್ ಡೌನ್ ಬೋರ್ಡ್
ಜೆ ಸಿ ರೋಡ್ ಹತ್ತಿರ ಹಾಕಲಾದ ಸೀಲ್ ಡೌನ್ ಬೋರ್ಡ್

ಬೆಂಗಳೂರು: ಈ ಅಂಕಿಅಂಶ ನೋಡಿದರೆ ಬೆಂಗಳೂರಿಗರು ಬೆಚ್ಚಿಬೀಳದೆ ಇರರು. ಬೆಂಗಳೂರು ನಗರದಲ್ಲಿ ಈಗ 16 ಸಾವಿರದ 005 ಕಂಟೈನ್ ಮೆಂಟ್ ವಲಯಗಳಿವೆ. ಮೇ ತಿಂಗಳಲ್ಲಿ ಇದ್ದದ್ದು ಕೇವಲ 20 ಕಂಟೈನ್ ಮೆಂಟ್ ವಲಯಗಳು.ಇವುಗಳಲ್ಲಿ 12 ಸಾವಿರದ 325 ಸಕ್ರಿಯ ಕಂಟೈನ್ ಮೆಂಟ್ ವಲಯಗಳಾಗಿವೆ.

ಬೆಂಗಳೂರು ದಕ್ಷಿಣ ವಲಯ ಅದರಲ್ಲಿ ಮುಂಚೂಣಿಯಲ್ಲಿದ್ದು 3 ಸಾವಿರದ 935 ಕಂಟೈನ್ ಮೆಂಟ್ ವಲಯಗಳು, ಪೂರ್ವದಲ್ಲಿ 2 ಸಾವಿರದ 256, ಪಶ್ಚಿಮದಲ್ಲಿ 1,770, ಬೊಮ್ಮನಹಳ್ಳಿಯಲ್ಲಿ 1,548, ಯಲಹಂಕದಲ್ಲಿ 437 ಪ್ರಕರಣಗಳಿವೆ. ಒಟ್ಟಾರೆ 13 ಸಾವಿರದ 276 ರಸ್ತೆಗಳು, 1,276 ಅಪಾರ್ಟ್ ಮೆಂಟ್ ಗಳು, 23 ಕೊಳಚೆ ಪ್ರದೇಶಗಳು, 40 ಕ್ಲಸ್ಟರ್ ಗಳು ಮತ್ತು ಒಂದು ಹೊಟೇಲ್ ಗಳನ್ನು ಕಳೆದ ಸೋಮವಾರ ನಿಷೇಧಿತ ಪ್ರದೇಶವೆಂದು ಗುರುತಿಸಲಾಗಿದೆ ಎಂದು ಬಿಬಿಎಂಪಿ ಕೋವಿಡ್-19 ವಾರ್ ರೂಂ ಅಂಕಿಅಂಶ ತಿಳಿಸಿದೆ.

ಲಾಕ್ ಡೌನ್ ಸಡಿಲ ಮಾಡಿದ ನಂತರ ನಿಮ್ಮ ಎಚ್ಚರಿಕೆ, ಮುಂಜಾಗರೂಕತೆಯಲ್ಲಿ ನೀವಿರಿ ಎಂದು ಎಷ್ಟು ಹೇಳಿದರೂ ಜನರು ಮುಂಜಾಗ್ರತೆ ಪಾಲಿಸುತ್ತಿಲ್ಲ, ಇದರಿಂದಾಗಿಯೇ ಇಷ್ಟೊಂದು ಸಂಖ್ಯೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಿವೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಿದ್ದರೆ ತಜ್ಞರ ಪ್ರಕಾರ, ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಜನರನ್ನು ಆರೋಪಿಸುವುದನ್ನು ನಿಲ್ಲಿಸಬೇಕು. ತೀವ್ರ ಸೋಂಕಿನ ಸಮಸ್ಯೆಯಲ್ಲಿರುವವರು ಮತ್ತು ಅಸೌಖ್ಯ ಹೊಂದಿರುವವರ ಬಗ್ಗೆ ಸರಿಯಾಗಿ ಸಮೀಕ್ಷೆ ನಡೆಸಿ ಹಿರಿಯರು ಮತ್ತು ಕೊಮೊರ್ಬಿಡ್ ರೋಗಿಗಳ ಹಿಮ್ಮುಖ ಪ್ರತ್ಯೇಕತೆ ಮಾಡಬೇಕು ಎನ್ನುತ್ತಾರೆ.

ಕೋವಿಡ್ ತಜ್ಞರ ಸಮಿತಿಯ ಸದಸ್ಯ ಮತ್ತು ಪ್ರೊಫೆಸರ್ ಡಾ ಗಿರಿಧರ್ ಬಾಬು, SARI(ಸಾರಿ) ಮತ್ತು ILI(ಐಎಲ್ಐ)ಸಮೀಕ್ಷೆಗಳನ್ನು ಪ್ರತಿ 10 ದಿನಗಳಿಗೊಮ್ಮೆ ನಡೆಸಬೇಕು. ಅದರ ಜೊತೆಗೆ ವಿಸ್ತೃತ ಪರೀಕ್ಷೆ, ಕಟ್ಟುನಿಟ್ಟಿನ ಕೊರೋನಾ ಸೋಂಕಿತರ ಪ್ರತ್ಯೇಕತೆ, ಹಿಮ್ಮುಖ ಕ್ವಾರಂಟೈನ್ ಗೊಳಪಡಿಸಬೇಕು. ಇದರಿಂದ ಕೊರೋನಾ ಹರಡುವುದನ್ನು ತಡೆಗಟ್ಟಬಹುದು ಜೊತೆಗೆ ಆಸ್ಪತ್ರೆಗಳ ಮೇಲೆ ಭಾರ ಬೀಳುವುದಿಲ್ಲ.ಸಾವಿನ ಪ್ರಮಾಣವನ್ನು ಕೂಡ ಕಡಿಮೆ ಮಾಡಬಹುದು ಎನ್ನುತ್ತಾರೆ.

ಆರಂಭಿಕ ಹಂತದಲ್ಲಿ ಕಂಟೈನ್ ಮೆಂಟ್ ಪ್ರದೇಶಗಳೆಂದು ಸೀಲ್ ಡೌನ್ ಮಾಡುವುದು ಉಪಯೋಗವಾಗಬಹುದು. ಅದರ ಬದಲು ಈಗ ರಿವರ್ಸ್ ಕ್ವಾರಂಟೈನ್ ಮೇಲೆ ಗಮನ ನೀಡಬೇಕು.ಹಲವು ಪ್ರದೇಶಗಳಲ್ಲಿ ಸೋಂಕು ಹರಡಿದಾಗ ಕಂಟೈನ್ ಮೆಂಟ್ ಉತ್ತಮ ಕಾರ್ಯತಂತ್ರವಾಗುವುದಿಲ್ಲ. ಸರ್ಕಾರ ಕೊರೋನಾ ಸಮುದಾಯಕ್ಕೆ ಪಸರಿಸಿದೆ ಎಂದು ಒಪ್ಪಿಕೊಂಡರೆ ಆಗ ಕಂಟೈನ್ ಮೆಂಟ್ ನಿಂದ ಆದ್ಯತೆಯನ್ನು ಬೇರೆಡೆಗೆ ಗಮನಹರಿಸಬೇಕು, ಅದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದನ್ನು ತಪ್ಪಿಸುವುದು ಮತ್ತು ಅಧಿಕ ಅಪಾಯ ಇರುವ ಗುಂಪನ್ನು ರಕ್ಷಿಸುವುದರತ್ತ ಗಮನ ನೀಡಬೇಕು ಎನ್ನುತ್ತಾರೆ ಡಾ ಸಿಲ್ವಿಯಾ ಕರ್ಪಗಮ್.

ಬೆಂಗಳೂರಿನಲ್ಲಿ ಎಲ್ಲಾ ಪ್ರದೇಶಗಳು ಅಪಾಯದಲ್ಲಿದೆ ಎಂದು ತಜ್ಞರು ಹೇಳುತ್ತಿದ್ದರೆ, ಬಿಬಿಎಂಪಿ ಅಧಿಕಾರಿಗಳು ತಾವು ಸೂಕ್ಷ್ಮವಾಗಿ ಎಲ್ಲಾ ಪ್ರದೇಶಗಳನ್ನು ಗಮನಿಸುತ್ತಿದ್ದೇವೆ ಎನ್ನುತ್ತಾರೆ. ನಮ್ಮ ಫೀಲ್ಡ್ ಅಧಿಕಾರಿಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಸರಿಯಾದ ವಿಳಾಸ ಸಿಗದಿರುವುದರಿಂದ ಪಾಸಿಟಿವ್ ಆದವರನ್ನು ಪತ್ತೆ ಹಚ್ಚುವುದು ವಿಳಂಬವಾಗುತ್ತಿದೆ. ಇಲ್ಲದಿದ್ದರೆ ಅದೇ ದಿನ ಅಥವಾ ಮರುದಿನ ಬ್ಯಾರಿಕೇಡ್ ಹಾಕಲಾಗುತ್ತದೆ ಎಂದು ಬೆಂಗಳೂರಿನ ಕಂಟೈನ್ ಮೆಂಟ್ ಪ್ರದೇಶವೊಂದರ ಉಸ್ತುವಾರಿ ಹೊತ್ತಿರುವ ಬಿಬಿಎಂಪಿ ನೋಡಲ್ ಅಧಿಕಾರಿ ಬಸವರಾಜ್ ಹೇಳುತ್ತಾರೆ.

ಜನರು ನಿಯಮ ಮೀರದಂತೆ ಪೊಲೀಸರು ಮತ್ತು ಮಾರ್ಶಲ್ ಗಳನ್ನು ನೇಮಕ ಮಾಡಲಾಗಿದೆ. ಕ್ವಾರಂಟೈನ್ ನಲ್ಲಿರುವವರು, ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದವರನ್ನು ಸ್ಟಾಂಪ್ ಮಾಡಿ ಕೂರಿಸಲಾಗುತ್ತದೆ.ಕಂಟೈನ್ ಮೆಂಟ್ ಪ್ರದೇಶದಲ್ಲಿ ಪಾಸಿಟಿವ್ ಹೊಂದಿರುವವರನ್ನು ಮಾತ್ರ ಹೊರಗೆ ಹೋಗಲು ಬಿಡಬಾರದು, ಉಳಿದವರಿಗೆ ಅವಕಾಶ ನೀಡಬೇಕು ಎಂದು ಜನರು ಕೇಳುತ್ತಾರೆ. ಹೊರಗೆ ಹೋಗದಿದ್ದರೆ ನಮ್ಮ ಅಗತ್ಯ ಕೆಲಸಗಳಿಗೆ ಕಷ್ಟವಾಗುತ್ತದೆ ಎನ್ನುತ್ತಾರೆ. ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com