ಝೂಸ್ ಆಫ್ ಕರ್ನಾಟಕ: ಆನ್'ಲೈನ್ ಮೂಲಕ ಪ್ರಾಣಿಗಳ ದತ್ತುಪಡೆದು, ಸಹಾಯ ಮಾಡಲು ಮೊಬೈಲ್ ಆ್ಯಪ್ ಬಿಡುಗಡೆ!
ಮೈಸೂರು: ಪ್ರಾಣಿಗಳನ್ನು ದತ್ತು ಪಡೆದು ಪ್ರೋತ್ಸಾಹ ನೀಡುವ ಪ್ರಾಣಿಪ್ರಿಯರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಶ್ರೀ ಚಾಮರಾಜೇಂದ್ರ ಮೃಗಾಲಯವು ಝೂಸ್ ಆಫ್ ಕರ್ನಾಟಕ ಎಂಬ ಮೊಬೈಲ್ ಆ್ಯಂಪ್ ವೊಂದನ್ನು ಬಿಡುಗಡೆಗೊಳಿಸಿದ್ದಾರೆ.
ಅರಣ್ಯ ಸಚಿವ ಆನಂದ್ ಸಿಂಗ್ ಅವರು ಕಾರ್ಯಕ್ರಮಕ್ಕೆ ಶುಭ ಕೋರಿದರೆ, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆ್ಯಪ್'ಗೆ ಚಾಲನೆ ನೀಡಿದರು.
ಲಾಕ್ಡೌನ್ ಸಂದರ್ಭದಲ್ಲಿ ಪ್ರವಾಸಿಗರ ಮೃಗಾಲಯಕ್ಕೆ ಭೇಟಿ ನೀಡದಿದ್ದಾಗ ಸಂಕಷ್ಟದಲ್ಲಿ ಮೃಗಾಲಯಕ್ಕೆ ಅನೇಕರು ನೆರವಾಗಿದ್ದರು. ಈ ಸಂದರ್ಭದಲ್ಲಿ ಪ್ರಾಣಿಗಳ ಆಹಾರ ಮತ್ತು ಸಿಬ್ಬಂದಿ ವೇತನ ನೀಡಲು ಸಮಸ್ಯೆಯಾಗಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಅವರ ನೆರವಿನಿಂದಾಗಿ ರೂ.3.5 ಕೋಟಿ ಸಂಗ್ರಹವಾಗಿತ್ತು. ಈ ಝೂಸ್ ಆಫ್ ಕರ್ನಾಟಕ ಆ್ಯಪ್ ಬಿಡುಗಡೆಗೊಳಿಸಿರುವುದರಿಂದ ಸಾರ್ವಜನಿಕರು ಎಲ್ಲಿಂದ ಬೇಕಾದರೂ ಕನಿಷ್ಠ ರೂ.50 ಮೇಲ್ಪಟ್ಟು ಎಷ್ಟು ಬೇಕಾದರೂ ಹಣ ಪಾವತಿ ಮಾಡಿ ಆನ್'ಲೈನ್ ಮೂಲಕವೇ ಮೃಗಾಲಯದ ಪ್ರಮಾಣಪತ್ರವನ್ನು ಪಡೆಯಬಹುದಾಗಿದೆ.
ಸಚಿವ ಆನಂದ್ ಸಿಂಗ್ ಅವರು ಮನೆಯ ಐಸೋಲೇಷನ್ ಸೆಂಟರ್ ನಿಂದಲೇ ಆನ್'ಲೈನ್ ಮೂಲಕ ಆ್ಯಪ್ ಬಿಡುಗಡೆಗೊಳಿಸಿ, ಶುಭ ಕೋರಿದರು. ಅಲ್ಲದೆ, ಹಂಪೆ ಮೃಗಾಲಯದಲ್ಲಿನ ಸಿಂಧು ಎಂಬ ಹೆಣ್ಣು ಹುಲಿಯನ್ನು ದತ್ತು ಪಡೆಯುವ ಮೂಲಕ ಚಾಲನೆ ನೀಡಿದರು.