ಬೆಂಗಳೂರು: ಕೌರವನ ಕುಟುಂಬಕ್ಕೆ ಮಹಾಮಾರಿ ಕೊರೋನಾ ವಕ್ಕರಿಸಿದ್ದು, ಕೃಷಿ ಸಚಿವ ಬಿಸಿ ಪಾಟೀಲ್, ಅವರ ಪತ್ನಿ ಹಾಗೂ ಅಳಿಯನಿಗೆ ಮತ್ತು ಅವರ ನಿವಾಸದ ಮೂವರು ಸಿಬ್ಬಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ.
ಈ ಬಗ್ಗೆ ಸ್ಪತಃ ಸಚಿವ ಬಿಸಿ ಪಾಟೀಲ್ ಅವರೇ ಟ್ವೀಟ್ ಮಾಡಿದ್ದು, ಇದೀಗ ಬಂದ ವರದಿಯ ಪ್ರಕಾರ ನನಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಬೆಂಗಳೂರಿನ ನನ್ನ ನಿವಾಸದಲ್ಲಿ ಹೋಂ ಕ್ವಾರಂಟೈನ್ ಆಗುತ್ತಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಇತ್ತೀಚೆಗೆ ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ನನ್ನ ಜೊತೆ ಆಗಮಿಸಿದ ಐದು ಜನ ಸಿಬ್ಬಂದಿಗಳಿಗೂ ಕೊರೋನಾ ಪಾಸಿಟಿವ್ ಎಂದು ವರದಿ ಬಂದಿರುವುದಾಗಿ ಸಚಿವರು ತಿಳಿಸಿದ್ದಾರೆ.
ಕೊರೋನಾ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಕೋವಿಡ್ ವಿರುದ್ಧ ಗೆಲ್ಲುವ ವಿಶ್ವಾಸವಿದೆ. ಜೊತೆಗೆ ನಿಮ್ಮೆಲ್ಲರ ಆಶೀರ್ವಾದ ಮತ್ತು ಹಾರೈಕೆ ಇರಲಿ ಎಂದಿದ್ದಾರೆ.
ಇತ್ತೀಚಿಗೆ ಬೆಂಗಳೂರಿನ ಸಚಿವರ ಸರ್ಕಾರಿ ನಿವಾಸದಲ್ಲಿದ್ದ ಸಚಿವ ಬಿ.ಸಿ.ಪಾಟೀಲ್ ಸಂಬಂಧಿಕರೊಬ್ಬರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಅವರ ಜತೆ ಸಂಪರ್ಕದಲ್ಲಿದ್ದ ಕಾರಣಕ್ಕಾಗಿ ಬಿಸಿ ಪಾಟೀಲ್ ಹಾಗೂ ಕುಟುಂಬದವರಿಗೆ ಪಾಸಿಟಿವ್ ಬಂದಿದೆ.
Advertisement