ಚಿತ್ರದುರ್ಗ: ಕೊರೋನ ಭೀತಿ ರಾಜ್ಯವನ್ನು ಎಡಬಿಡದೇ ಕಾಡುತ್ತಿದೆ, ಇಂತಹ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜನತೆಯಲ್ಲಿ ಅರಿವು ಮೂಡಿಸಬೇಕ್ದಿದ ಜವಾಬ್ದಾರಿ ಆರೋಗ್ಯ ಸಚಿವರದ್ದು. ಆದರೇನು ಮಾಡೋದು, ಆರೋಗ್ಯ ಸಚಿವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲೇ ಸಾಮಾಜಿಕ ಅಂತರಕ್ಕೆ ಅರ್ಥವೇ ಇಲ್ಲದ ಚಿತ್ರಣವೊಂದು ಚಿತ್ರದುರ್ಗದಲ್ಲಿ ವೇದಾವತಿ ನದಿಗೆ ಗಂಗಾಪೂಜೆ ಸಲ್ಲಿಸುವ ವೇಳೆ ಕಂಡುಬಂದಿದೆ.
ಚಿತ್ರದುರ್ಗದ ಪರಶುರಾಮಪುರದಲ್ಲಿ ಬೃಹತ್ ಸೇಬಿನ ಹಾರ ತಯಾರಿಸಿ ಕ್ರೇನ್ ಸಹಾಯದಿಂದ ಅದನ್ನು ಶ್ರೀರಾಮುಲು ಅವರಿಗೆ ಹಾಕುವ ಮೂಲಕ ಸಚಿವರಿಗೆ ಸನ್ಮಾನ ಮಾಡಲಾಯಿತು ಈ ವೇಳೆ ಸ್ವತಃ ಆರೋಗ್ಯ ಸಚಿವರೇ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿಲ್ಲ, ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಕೆ ಮಾಡುವ ನಿಯಮಗಳನ್ನೂ ಪಾಲನೆ ಮಾಡಲಿಲ್ಲ. ರಾಮುಲು ಅವರೊಂದಿಗೆ ಚಿತ್ರದುರ್ಗದ ಶಾಸಕ, ಜಿಹೆಚ್ ತಿಪ್ಪಾರೆಡ್ಡಿ, ಎಂಪಿ ಎ ನಾರಾಯಣ ಸ್ವಾಮಿ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಇವರೂ ಸಹ ಮಾಸ್ಕ್ ಗಳನ್ನು ಧರಿಸಿರಲಿಲ್ಲ.
ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ಚಳ್ಳಕೆರೆ ಕಾಂಗ್ರೆಸ್ ನ ಶಾಸಕ ಟಿ ರಘುಮೂರ್ತಿ ಚಳ್ಳಕೆರೆ, ಮೊಳಕಾಲ್ಮೂರು ತಾಲೂಕುಗಳ ಕೆರೆಗಳಿಗೆ 0.50 ಟಿಎಂಸಿ ನೀರು ಹರಿಸುವುದಕ್ಕೆ ಶ್ರಮಿಸಿದ್ದರು. ವೇದಾವತಿ ನದಿಗೆ ಗಂಗಾಪೂಜೆ ಸಲ್ಲಿಸುವುದಕ್ಕಾಗಿ ಶ್ರೀರಾಮುಲು ಚಳ್ಳಕೆರೆ ತಾಲೂಕಿಗೆ ಜೂ.೦2 ರಂದು ಭೇಟಿ ನೀಡಿದ್ದರು.
ಚಳ್ಳಕೆರೆಯ ಬಿಸಿಎಂ ಹಾಸ್ಟೆಲ್ ಕಾಂಪ್ಲೆಸ್ ಹಾಗೂ ಪಕ್ಕದಲ್ಳೇ ಇರುವ ಕಲ್ಯಾಣದುರ್ಗಗಳಲ್ಲಿ 30 ಕ್ಕೂ ಹೆಚ್ಚು ಕೋವಿಡ್-19 ರೋಗಿಗಳಿರಬೇಕಾದರೆ ಸಚಿವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಬೇಜವಾಬ್ದಾರಿತನದ ವರ್ತನೆ ತೋರಿರುವುದು ಆತಂಕಕ್ಕೆ ಕಾರಣವಾಗಿದೆ.
Advertisement