ಬೆಂಗಳೂರು: ಮುಂದಿನ ವಾರದಿಂದ ದೇವಸ್ಥಾನ, ಚರ್ಚ್, ಮಸೀದಿಗಳು ತೆರೆಯುತ್ತವೆ. ಸಾಮಾಜಿಕ ಅಂತರ ನಿಯಮದೊಂದಿಗೆ ಸಂಪ್ರದಾಯಗಳನ್ನು ಪಾಲಿಸುವುದು ಇದೀಗ ದೇವಸ್ಥಾನಗಳಲ್ಲಿ ಅರ್ಚಕರಿಗೆ, ಚರ್ಚ್, ಮಸೀದಿಗಳ ಮುಖ್ಯಸ್ಥರು ಮತ್ತು ಭಕ್ತರಿಗೆ ಪರೀಕ್ಷೆಯ ಸಮಯ.
ದೇವಸ್ಥಾನಗಳಿಗೆ ಹೋಗುವವರಿಗೆ ಬಾಗಿಲಲ್ಲಿ ಸ್ಯಾನಿಟೈಸರ್ ಮತ್ತು ತಾಪಮಾನ ಪರೀಕ್ಷೆಯನ್ನು ಕಡ್ಡಾಯವಾಗಿ ಇಡಬೇಕು ಎಂದು ಹೇಳಲಾಗಿದೆ. ದೇವಸ್ಥಾನ, ಚರ್ಚ್,ಮಸೀದಿಗಳಲ್ಲಿ ಇನ್ನು ಮುಂದೆ ಈ ಹಿಂದಿನ ವಾತಾವರಣವಿರುವುದಿಲ್ಲ.ಭಕ್ತರಿಗೆ ಮತ್ತೆ ಆರಂಭವಾಗುವುದು ಖುಷಿ ನೀಡಿದರೂ ಸಹ ಹೇಗೆ ಹೋಗುವುದು, ಮುನ್ನೆಚ್ಚರಿಕೆ ಹೇಗೆ ತೆಗೆದುಕೊಳ್ಳುವುದು ಎಂಬ ಗೊಂದಲದಲ್ಲಿ ಜನರಿದ್ದಾರೆ.
ಜೂನ್ 8ಕ್ಕೆ ತೆರೆಯಲು ರಾಜ್ಯ ಸರ್ಕಾರ ಅವಕಾಶ ನೀಡಿದರೂ ಸಹ ಇನ್ನು ಎರಡು ಮೂರು ವಾರದವರೆಗೆ ತೆರೆಯುವುದಿಲ್ಲ ಎಂದು ಇಸ್ಕಾನ್ ದೇವಸ್ಥಾನದ ಮಾಹಿತಿ ವಿಭಾಗದ ನವೀನ ನೀರಡ ದಾಸ ಹೇಳುತ್ತಾರೆ. ಜನರು ಬರುವಾಗ ಏನೇನು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ನಾವು ಇನ್ನೂ ಹೆಚ್ಚಿನ ಯೋಜನೆ ರೂಪಿಸುತ್ತಿದ್ದೇವೆ. ಭಕ್ತರನ್ನು ಮುಟ್ಟದೆ ಪ್ರಸಾದ, ತೀರ್ಥ ನೀಡುವ ಬಗ್ಗೆ ಕೂಡ ಯೋಚಿಸುತ್ತಿದ್ದೇವೆ. ದೇವಸ್ಥಾನಕ್ಕೆ ಪ್ರವೇಶಿಸುವ ಭಕ್ತರ ಸಂಖ್ಯೆಗೆ ಸಹ ನಿರ್ಬಂಧ ಹೇರುವ ಸಾಧ್ಯತೆಯಿದೆ ಎನ್ನುತ್ತಾರೆ ದಾಸ.
ಬೆಂಗಳೂರಿನ ಕಮರ್ಷಿಯಲ್ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ ತೆರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಹೆಚ್ಚು ಭಕ್ತರು ಸೇರಿದಾಗ ಏನು ಮಾಡುವುದು, ಜನ ದಟ್ಟಣೆ ಹೇಗೆ ನಿಭಾಯಿಸುವುದು, ಒಂದು ಬಾರಿಗೆ ಎಷ್ಟು ಮಂದಿಯನ್ನು ದೇವಸ್ಥಾನದೊಳಗೆ ಬಿಡುವುದು ಎಂದು ಯೋಜನೆ ಮಾಡುತ್ತಿದ್ದೇವೆ ಎಂದು ಅರ್ಚಕ ಶ್ರೀಕಾಂತ್ ಹೇಳಿದರು.ಇದು 250 ವರ್ಷಗಳಷ್ಟು ಹಳೆಯ ದೇವಸ್ಥಾನ.
ಶಿವಾಜಿನಗರದ ಕಾಂಬಲ್ ಪೊಶ್ ಇ ಹಸ್ರತ್ ಮಸೀದಿಯಲ್ಲಿ ಮರು ಆರಂಭಕ್ಕೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಪ್ರಾರ್ಥನೆ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತೇವೆ ಎಂದು ಮಸೀದಿ ಆಡಳಿತಾಧಿಕಾರಿ ಅತೀಖ್ ಅಹ್ಮದ್ ಹೇಳುತ್ತಾರೆ.
ಪ್ರತಿದಿನ ಆವರಣ ಸ್ವಚ್ಛ ಮಾಡುವುದು. ಬರುವವರು ಅವರೇ ಪ್ರಾರ್ಥನಾ ಮ್ಯಾಟ್ ತರಬೇಕು ಎಂದು ಹೇಳುವುದು ಇತ್ಯಾದಿಗಳನ್ನು ಹೇಳುತ್ತೇವೆ. ಮುನ್ನೆಚ್ಚರಿಕೆ ವಹಿಸದವರನ್ನು ಮಸೀದಿಯೊಳಗೆ ಬಿಡುವುದಿಲ್ಲ ಎನ್ನುತ್ತಾರೆ.
ಚರ್ಚ್ ನಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಇಲ್ಲದವರನ್ನು ಒಳಗೆ ಬಿಡುವುದಿಲ್ಲ. ಒಬ್ಬರಿಗೊಬ್ಬರು ಸ್ಪರ್ಶಿಸುವಂತಿಲ್ಲ. ಧಾರ್ಮಿಕ ನೀರನ್ನು ನೀಡುವುದಿಲ್ಲ, ಜನರು ಪ್ರಾರ್ಥನೆ ಮುಗಿಸಿದ ತಕ್ಷಣ ತಮ್ಮ ತಮ್ಮ ಮನೆಗಳಿಗೆ ಹೋಗಬೇಕು ಎಂದು ಶಿವಾಜಿನಗರದ ಸೈಂಟ್ ಮೇರಿಸ್ ಬೆಸಿಲಿಕಾ ಚರ್ಚ್ ನ ಫಾದರ್ ಮಾರ್ಟಿನ್ ಕುಮಾರ್ ಹೇಳುತ್ತಾರೆ.
ಚರ್ಚ್ ಒಳಗೆ ಬೆಂಚ್ ನಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಸಿಗದವರಿಗೆ ಹೊರಗೆ ಎಲ್ ಇಡಿ ಸ್ಕ್ರೀನ್ ಹಾಕಿ ವ್ಯವಸ್ಥೆ ಮಾಡಲಾಗುವುದು ಎಂದರು.
Advertisement