ಬೆಂಗಳೂರು: ಕೊರೋನಾ ವೈರಸ್ ಸೋಂಕು ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಂಡು ಸ್ಪರ್ಶರಹಿತ ಪ್ರಯಾಣಕ್ಕೆ ವ್ಯವಸ್ಥೆಯನ್ನು ಅನುಸರಿಸಲಾಗುತ್ತಿದೆ.
ವಿಮಾನ ನಿಲ್ದಾಣದ ಪಾರ್ಕಿಂಗ್'ನಿಂದ ಹಿಡಿದು ವಿಮಾನದೊಳಗೆ ಪ್ರವೇಶಿಸುವ ವರೆಗೂ ವ್ಯವಸ್ಥೆಯನ್ನು ಸ್ಪರ್ಶ ರಹಿತವನ್ನಾಗಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಅತ್ಯಾಧುನಿಕ ತಂತ್ರಜ್ಞಾನದದಿಂದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಯಾಣಿಕರು ಯಾವುದೇ ಸಿಬ್ಬಂದಿಯೊಂದಿಗೆ ಸ್ಪರ್ಶವಿಲ್ಲದೆ ಪ್ರಯಾಣಿಸಬಹುದಾಗಿದೆ. ಅಲ್ಲದೆ ಪ್ರತಿ ಸಿಬ್ಬಂದಿ ಪ್ರಯಾಣದ ಬಳಿಕ ಎಲ್ಲಾ ಸ್ಥಳಗಳನ್ನು ಸ್ಯಾನಿಟೈಸ್ ಮಾಡುವ ಕೆಲಸ ಮಾಡಲಾಗುತ್ತಿದೆ.
ನಿಲ್ದಾಣದ ಪ್ಲಾಟ್'ಫಾರ್ಮ್ ಪ್ರವೇಶದ್ವಾರದಲ್ಲಿ ಭದ್ರತಾ ಸಿಬ್ಬಂದಿಗಳು ಐಡಿ ಕಾರ್ಡ್ ಮತ್ತು ಬೋರ್ಡಿಂಗ್ ಪಾಸನ್ನು ಸ್ಕ್ಯಾನರ್ ಮೂಲಕ ಪರೀಕ್ಷೆಗೊಳಪಡಿಸುತ್ತಾರೆ. ನಂತರ ವಿಮಾನ ನಿಲ್ದಾಣದೊಳಗೆ ಪ್ರವೇಶಿಸಿದ ನಂತರ ಅಲ್ಲಿನ ಕಿಯೋಸ್ಕ್ ಮೂಲಕ ಬ್ಯಾಗೇಜ್ ಟ್ಯಾಗ್ ಪಡೆದು, ಅದನ್ನು ಬ್ಯಾಗ್ ಗಳಿಗೆ ಅಳವಡಿಸಿ ನಿಗದಿತ ಕೌಂಟರ್ ಗಳಿಗೆ ನೀಡಬೇಕು. ಆ ಬ್ಯಾಗ್ ಗಳು ಟ್ರಾಲಿ ಮೂಲಕ ಮುಂದಿನ ಸ್ಥಳಕ್ಕೆ ತೆರಳುತ್ತದೆ. ನಂತರ ಬ್ಯಾಗ್'ನ್ನು ಸ್ಯಾನಿಟೈಸ್ ಮಾಡಿ ವಿಮಾನದ ಬ್ಯಾಗೇಜ್ ವಿಭಾಗದಲ್ಲಿ ತಂಡಿಲಾಗುತ್ತದೆ.
ಬ್ಯಾಗೇಜ್ ಸ್ಕ್ಯಾನರ್ ಮೂಲಕ ಪರೀಕ್ಷಿಸಿದ ಬಳಿಕ ಮತ್ತೆ ಅದನ್ನು ಪರೀಕ್ಷೆ ನಡೆಸುವುದಿಲ್ಲ. ಅಲ್ಲದೆ, ಪ್ರಯಾಣಿಕರನ್ನು ಮೆಟಲ್ ಡಿಟೆಕ್ಟರ್ ಗಳಿಂದ ಪರೀಕ್ಷಿಸಲಾಗುತ್ತದೆ. ಅದನ್ನು ಹೊರತುಪಡಿಸಿ ಭದ್ರತಾ ಸಿಬ್ಬಂದಿ ಪ್ರಯಾಣಿಕರನ್ನು ಮುಟ್ಟುವುದಿಲ್ಲ. ವಿಮಾನ ಹತ್ತುವಾಗ ಪ್ರತಿಯೊಬ್ಬರಿಗೂ ಫೇಸ್ ಶೀಲ್ಡ್, ಮಾಸ್ಕ್ ಮತ್ತು ಸ್ಯಾನಿಟೈಸರ್ ಇರುವ ಕಿಟ್ ನೀಡಲಾಗುತ್ತಿದೆ.
ಲಾಕ್'ಡೌನ್ ಸಡಿಲಗೊಂಡ ಹಿನ್ನೆಲೆಯಲ್ಲಿ ನಿನ್ನೆ ಒಂದೇ ದಿನ 13,000 ಮಂದಿ ವಿಮಾನ ನಿಲ್ದಾಣದಿಂದ ಪ್ರಯಾಣಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಶೇ.60 ರಷ್ಟು ಮಂದಿ ಪ್ರಾಥಮಿಕ ಕಾರಣಗಳಿಂದ ಪ್ರಯಾಣ ಬೆಳೆಸಿದ್ದು, ಇನ್ನುಳಿದ ಶೇ.30ರಷ್ಟು ಮಂದು ವೈಯಕ್ತಿಕ ಕಾರಣಗಳಿಂದ ಪ್ರಯಾಣಿಸಿದ್ದಾರೆ. ಪ್ರತೀ ವಿಮಾನದಲ್ಲಿ ಶೇ.33ರಷ್ಟು ನೌಕರರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ವಿಮಾನ ನಿಲ್ದಾಣದ ಸುರಕ್ಷತಾ ಕ್ರಮಗಳಿಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಭುವನೇಶ್ವರಕ್ಕೆ ತೆರಳಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಜ್ಞಾ (23) ಎಂಬುವವರು ಮಾತನಾಡಿ, ಏರ್ ಪೋರ್ಟ್ ನಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳು ನಮ್ಮಲ್ಲಿದ್ದ ಭೀತಿಯನ್ನು ದೂರಾಗಿಸಿದೆ. ಅಧಿಕಾರಿಗಳಿಗೆ ನಾವು ಸಹಕರಿಸಬೇಕು. ಅವರಿಂದ ಸಾಧ್ಯವಾದಷ್ಟು ಕ್ರಮಗಳನ್ನು ಅವರು ಕೈಗೊಂಡಿದ್ದಾರೆಂದು ಹೇಳಿದ್ದಾರೆ.
ಪಿಪಿಇ ಕಿಟ್ ಧರಿಸಿ ತಮ್ಮ ಕುಟುಂಬದೊಂದಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಖುಷ್ವಂತ್ ಕುಮಾರ್ (32) ಎಂಬುವವರು ಮಾತನಾಡಿ, ಸಣ್ಣ ಸಣ್ಣ ಸಂಪರ್ಕದಿಂದಲೂ ವೈರಸ್ ಹರಡಿ ಬಿಡುತ್ತದೆ. ವಿಮಾನ ನಿಲ್ದಾಣದ ಸ್ಪರ್ಶ ರಹಿತ ಕ್ರಮ ಉತ್ತಮವಾಗಿದೆ. ಆದರೆ, ಫಲಿತಾಂಶ ಯಾವ ರೀತಿ ಬರಲಿದೆ ಎಂಬುದನ್ನು ನಾವು ಕಾದು ನೋಡಬೇಕಿದೆ ಎಂದು ತಿಳಿಸಿದ್ದಾರೆ.
Advertisement