ಬೆಂಗಳೂರು: ಬೆಂಗಳೂರಿನ ಗಾರ್ಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡಲು ಒತ್ತಾಯಪೂರ್ವಕವಾಗಿ ಇರಿಸಿದ್ದ ಒಡಿಶಾದ 150 ಯುವತಿಯರು ಶ್ರಮಿಕ್ ರೈಲಿನಲ್ಲಿ ಬೆಂಗಳೂರಿನಿಂದ ಒಡಿಶಾ ತಲುಪಿದ್ದಾರೆ.
13 ರಿಂದ 19 ವರ್ಷದ ಯುವತಿಯರನ್ನು ಕಳೆದ ಆರು ತಿಂಗಳ ಹಿಂದೆ ಬೆಂಗಳೂರಿಗೆ ಕರೆತರಲಾಗಿತ್ತು. ಆದರೆ ಕೊರೋನಾ ಲಾಕ್ ಡೌನ್ ಆರಂಭವಾದ ಹಿನ್ನೆಲೆಯಲ್ಲಿ ವಾಪಾಸ್ ತೆರಳಲು ಸಾಧ್ಯವಾಗದೇ ಸಿಲುಕಿಕೊಂಡಿದ್ದರು.
ತಮ್ಮನ್ನು ವಾಪಸ್ ಕಳುಹಿಸುವಂತೆ ಕೇಳಿಕೊಂಡರು ಗಾರ್ಮೆಂಟ್ಸ್ ಮಾಲೀಕ ಅವರ ಮನವಿಯನ್ನು ಕಿವಿಗೆ ಹಾಕಿಕೊಂಡಿರಲಿಲ್ಲ, 150 ಯುವತಿಯರಲ್ಲಿ ಒಬ್ಬಾಕೆ ವಿಷಯವನ್ನು ತಮ್ಮ ರಾಜ್ಯದ ಸಿಎಂ ಗೆ ತಿಳಿಸಲು ನಿರ್ಧರಿಸಿದಳು.
ತಾವು ಅನುಭವಿಸುತ್ತಿರುವ ನೋವಿನ ಬಗ್ಗೆ ವಿಡಿಯೋ ಮಾಡಿದ ಯುವತಿ ತನಗೆ ಪರಿಚಯವಿರುವವರ ಮೂಲಕ ವಾಟ್ಸಾಪ್ ನಲ್ಲಿ ಸಿಎಂ ಕಚೇರಿಗೆ ಸಂದೇಶ ರವಾನಿಸಿದ್ದಳು. ಸಿಎಂ ನವೀನ್ ಪಟ್ನಾಯಕ್ ಕಚೇರಿ ಕೂಡಲೇ ಯುವತಿಯರ ಮನವಿಗೆ ಸ್ಪಂದಿಸಿ ಕರ್ನಾಟಕ ರಾಜ್ಯದೊಂದಿಗೆ ಸಂವಹನ ನಡೆಸಿತ್ತು ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
ಕರ್ನಾಟಕ ಸರ್ಕಾರ ಯುವತಿಯರನ್ನು ವಾಪಸ್ ಒಡಿಶಾಗೆ ಕಳುಹಿಸಲು ಅಗತ್ಯ ಕ್ರಮ ಕೈಗೊಂಡ ಪರಿಣಾಮ ಯುವತಿಯರು ತವರು ಸೇರಿದ್ದಾರೆ.ಇಂಟರ್ ನ್ಯಾಷನಲ್ ಜಸ್ಟೀಸ್ ಮಿಷನ್ ಗಾರ್ಮೆಂಟ್ಸ್ ಫ್ಯಾಕ್ಟರಿಗೆ ತೆರಳಿ ಅವರನ್ನು ರಕ್ಷಿಸಿದೆ, ರಾಜ್ಯ ಸರ್ಕಾರ ಅವರಿಗೆ ಟಿಕೆಟ್ ಬುಕ್ ಮಾಡಿ ಮಂಗಳವಾರ ರಾತ್ರಿ 9 ಗಂಟೆಯ ಶ್ರಮಿಕ್ ರೈಲಿನಲ್ಲಿ ಕಳುಹಿಸಿಕೊಟ್ಟಿದೆ.
ಪರಿಶೀಲನೆಯಿಂದ ತಪ್ಪಿಸಿಕೊಳ್ಳಲು ಅವರನ್ನು ಸಣ್ಣ ಬ್ಯಾಚ್ಗಳಲ್ಲಿ ನಗರಕ್ಕೆ ಕರೆತರಲಾಯಿತು ಮತ್ತು ಕಾರ್ಖಾನೆಯಲ್ಲಿ ಕೆಲಸಕ್ಕೆ ಇಡಲಾಯಿತು, ನಮ್ಮ ಇಷ್ಟಕ್ಕೆ ವಿರುದ್ಧವಾಗಿ ಕಾರ್ಖಾನೆ ಮಾಲೀಕ ನಮ್ಮನ್ನು ಬಲವಂತವಾಗಿ ಇರಿಸಿದ್ದ ಎಂದು ಯುವತಿಯೊಬ್ಬಳು ತಿಳಿಸಿದ್ದಾಳೆ.
Advertisement