ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವ್ಯಾಪ್ತಿಗೆ ಒಳಪಟ್ಟ ಜಮೀನುಗಳಲ್ಲಿ 3 ಹೋಮ್ ಸ್ಟೇ ಗಳಿಗೆ ಪ್ರವಾಸೋದ್ಯಮ ಇಲಾಖೆವತಿಯಿಂದ ನೀಡಲಾಗಿರುವ ನೊಂದಣಿ ರದ್ದುಪಡಿಸಿ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಆದೇಶಿಸಿದ್ದಾರೆ. ಈ ಪೈಕಿ 2 ಹೋಮ್ ಸ್ಟೇ ಕಟ್ಟಡಗಳನ್ನು 10 ದಿನದೊಳಗೆ ತೆರವುಗೊಳಿಸಲು ತಹಶೀಲ್ದಾರರಿಗೆ ಸೂಚನೆ ನೀಡಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಹಂಗಳ ಹೋಬಳಿಯ ಕಣಿಯನಪುರ ಗ್ರಾಮದ ಸರ್ವೇ ನಂ. 56ರ 5 ಎಕರೆ ಜಮೀನಿನ ಪೈಕಿ 2 ಎಕರೆ ಜಮೀನನ್ನು ವಾಸದ ಮನೆ ಮತ್ತು ಫಾರಂ ಹೌಸ್ ಉದ್ದೇಶಕ್ಕೆ ಅನ್ಯಕ್ರಾಂತವಾಗಿತ್ತು. ಸದರಿ ಜಮೀನಿನಲ್ಲಿ ನಿರ್ಮಿಸಿರುವ ಕಟ್ಟಡಗಳಲ್ಲಿ ಹೋಮ್ ಸ್ಟೇ ನಡೆಸಲು ಕಾರ್ತಿಕ್ದವೆ ಅವರಿಗೆ, ಗುಂಡ್ಲುಪೇಟೆ ತಾಲೂಕಿನ ಹಂಗಳ ಹೋಬಳಿಯ ಮಂಗಲ ಗ್ರಾಮದ ಸರ್ವೇ ನಂ. 146ರ 4.35 ಎಕರೆ ಜಮೀನಿನಲ್ಲಿ ನಿರ್ಮಿಸಿರುವ ಕಟ್ಟಡಗಳಲ್ಲಿ ಹೋಮ್ ಸ್ಟೇ ನಡೆಸಲು ಎನ್.ಕೆ ಕಾರ್ತಿಕ್ ಅವರಿಗೆ ಹಾಗೂ ಗುಂಡ್ಲುಪೇಟೆ ತಾಲೂಕಿನ ಹಂಗಳ ಹೋಬಳಿಯ ಮಂಗಲ ಗ್ರಾಮದ ಸರ್ವೇ ನಂ. 517ರ 8.3 ಎಕರೆ ಜಮೀನಿನಲ್ಲಿ ನಿರ್ಮಿಸಿರುವ ಕಟ್ಟಡಗಳಲ್ಲಿ ಹೋಮ್ ಸ್ಟೇ ನಡೆಸಲು ವಿ. ಸೋಮಶೇಖರ್ ಅವರಿಗೆ ನೊಂದಣಿ ಪ್ರಮಾಣ ಪತ್ರ ನೀಡಲಾಗಿತ್ತು.
ಕೇಂದ್ರಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯದ ಅಧಿಸೂಚನೆಯನ್ನು ಉಲ್ಲಂಘನೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಸದರಿ ಮೂರು ಹೋಮ್ ಸ್ಟೇ ಗಳಿಗೆ ನೀಡಲಾಗಿರುವ ನೊಂದಣಿ ರದ್ದುಪಡಿಸಿ ಆದೇಶಿಸಲಾಗಿದೆ. ಎನ್.ಕೆ. ಕಾರ್ತಿಕ್, ವಿ. ಸೋಮಶೇಖರ್ ಅವರು ನೊಂದಣಿ ಪ್ರಮಾಣಪತ್ರ ಹೊಂದಿದ್ದ ಹೋಮ್ ಸ್ಟೇ ಕಟ್ಟಡವನ್ನು 10 ದಿನದೊಳಗೆ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತಹಶಿಲ್ದಾರರಿಗೆ ಸೂಚಿಸಿದ್ದಾರೆ.
ವರದಿ: ಗುಳಿಪುರ ನಂದೀಶ್
Advertisement