ಚಿಕ್ಕಮಗಳೂರು: ಮದುವೆಗಳು ಸ್ವರ್ಗದಲ್ಲಿಯೇ ನಿಶ್ಚರವಾಗಿರುತ್ತವೆ ಎಂಬ ನಾಣ್ಣುಡಿಯಿದೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಮತ್ತು ಕಾಫಿ ಡೇ ಮಾಲೀಕ ಸಿದ್ದಾರ್ಥ್ ಪುತ್ರ ಅಮರ್ಥ್ಯ ಹೆಗ್ಡೆ ಮದುವೆ ಮಾತುಕತೆಗೆ ಅವಧೂತ ವಿನಯ್ ಗುರೂಜಿ ಕಾರಣ ಎಂದು ಹೇಳಲಾಗುತ್ತಿದೆ.
ಅಮರ್ಥ್ಯ ಹೆಗ್ಡೆ ಮತ್ತು ಅಜ್ಜಿ ವಾಸಂತಿ ಗಂಗಯ್ಯ ಹೆಗ್ಡೆ, 15 ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿರುವ ವಿನಯ್ ಗುರೂಜಿ ಆಶ್ರಮಕ್ಕೆ ಬಂದು ಅವರ ಅಭಿಪ್ರಾಯ ಕೇಳಿ ಹೋಗಿದ್ದರು ಎಂದು ಗುರೂಜಿ ಆಪ್ತರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ವಾಸಂತಿ ಅವರು ವಿನಯ್ ಗುರೂಜಿ ಅವರ ಭಕ್ತೆಯಾಗಿದ್ದು ಈ ಸಂಬಂಧಕ್ಕೆ ಅನುಮತಿ ನೀಡಿದ್ದಾರೆ. ಇದೇ ವೇಳೆ ಎರಡು ಕುಟುಂಬಗಳ ಮಧ್ಯೆ ಮಾತುಕತೆ ನಡೆದಿದ್ದು ಶೀಘ್ರವೇ ನಿಶ್ಚಿತಾರ್ಥ ನಡೆಯಲಿದೆ ಎಂದು ತಿಳಿದುಬಂದಿದೆ.
ಶಿವಕುಮಾರ್ ಮತ್ತು ಸಿದ್ಧಾರ್ಥ್ ವ್ಯವಹಾರಿಕ ಪಾಲುದಾರರಾಗಿದ್ದರು, ಸಿದ್ದಾರ್ಥ್ ಅವರ ಮಾವ ಎಸ್ ಎಂ ಕೃಷ್ಣ, ಶಿವಕುಮಾರ್ ಅವರ ರಾಜಕೀಯ ಗುರು, ಹೀಗಾಗಿ ಮದುವೆ ಮಾತುಕತೆಗಳು ಮುಂದುವರಿದಿವೆ.
ಸಿದ್ದಾರ್ಥ್ ಅವರ ಆಪ್ತ ಸ್ನೇಹಿತ ಶೃಂಗೇರಿ ಶಾಸಕ ಟಿಡಿ ರಾಜೇಗೌಡ ಈ ವಿವಾಹ ನಿಶ್ಚಯದ ಬಗ್ಗೆ ಮಾತನಾಡಿದ್ದು, ಇದು ಅಚ್ಚರಿಯ ವಿಷಯವಲ್ಲ, ಏಕೆಂದರೇ ಎರಡು ಕುಟುಂಬಗಳು ತುಂಬಾ ಆಪ್ತರಾಗಿದ್ದಾರೆ ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೌರಿಗದ್ದೆ ದತ್ತಾಶ್ರಮದ ಅವಧೂತ ವಿನಯ್ ಗುರೂಜಿಯ ಪರಮಭಕ್ತರಾಗಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ, ಮತ್ತು ನರೇಂದ್ರ ಮೋದಿ ಅವರ ವಿಷಯದಲ್ಲಿ ವಿನಯ್ ಗುರೂಜಿ ಹೇಳಿದ್ದ ಭವಿಷ್ಯ ನಿಜವಾಗಿತ್ತು. ಇಲ್ಲಿಗೆ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಸಿಎಂ ಯಡಿಯೂರಪ್ಪ ಆಗಾಗ್ಗೆ ಭೇಟಿ ನೀಡುತ್ತಿರುತ್ತಾರೆ.
Advertisement