ಕುಂದಾಪುರ: ಕೊರೋನಾವೈರ್ಸ್ ಸೋಂಕಿತರ ಚಿಕಿತ್ಸೆಗಾಗಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಲಕ್ಷಗಟ್ಟಲೆ ಹಣ ಪಡೆಯುತ್ತಿದೆ ಎಂದು ಸುಳ್ಳು ಸುದ್ದಿಯನ್ನು ವೈರಲ್ ಮಾಡಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಪೋಲೀಸರು ಬಂಧಿಸಿದ್ದಾರೆ.
ಕೊರೋನಾವೈರಸ್ ಚಿಕಿತ್ಸೆಗಾಗಿ ಜಿಲ್ಲಾಡಳಿತ ಸೋಂಕಿತರಿಂದ 3.50 ಲಕ್ಷ ಹಣ ಪಡೆಯುತ್ತಿದೆ ಎಂದು ಆರೋಪಿಸಿ ಸಾಮಾಜಿಕ ತಾಣಗಳಲ್ಲಿ ಸಂದೇಶ ಹಾಕಿದ್ದ ಕಮಲಶಿಲೆ ನಿವಾಸಿ ಸುರೇಶ್ ಕುಲಾಲ್ (22) ನನ್ನು ಶಂಕರನಾರಾಯಣ ಪೋಲೀಸರು ಬಂಧಿಸಿದ್ದಾರೆ.
“ಕೊರೋನಾವೈರಸ್ ಚಿಕಿತ್ಸೆಗೆ 3.50 ಲಕ್ಷ ಹಣ ಪಡೆಯಲಾಗುತ್ತಿದ್ದು ಜಿಲ್ಲಾಡಳಿತ ಯಾವ ರೀತಿಯಲ್ಲಿಯೂ ಪ್ರತಿಕ್ರಯಿಸುತ್ತಿಲ್ಲ” ಎಂಬ ವಾಟ್ಸಪ್ ಸಂದೇಶವನ್ನು ಈತ ವೈರಲ್ ಮಾಡಿದ್ದಾನೆ. ಈ ಸಂಬಂಧ ವಂಡ್ಸೆ ಗ್ರಾಮ ಕಂದಾಯ ನಿರೀಕ್ಷಕ ರಾಘವೇಂದ್ರ ಶಂಕರನಾರಾಯಣ ಠಾಣೆಗೆ ದೂರು ಸಲ್ಲಿಸಿದ್ದರು
ಸಧ್ಯ ಆಪಾದಿತನ ವಿರುದ್ದ ಐಟಿ ಕಾಯಿದೆ, ಡಿಎಂ ಕಾಯಿದೆ ಹಾಗೂ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ ಎಂದು ತಿಳಿದುಬಂದಿದೆ.
Advertisement