ಕಲ್ಯಾಣ ಕರ್ನಾಟಕದ  6 ಜಿಲ್ಲೆಗಳ ಸರ್ವತೋಮುಖ ಅಭಿವೃದ್ಧಿಗೆ ಸಂಘ ಶ್ರಮಿಸಲಿ: ಯಡಿಯೂರಪ್ಪ

ಕಲಬುರಗಿ ನಗರದ ಐವಾನ್-ಎ-ಶಾಹಿ ರಸ್ತೆಯ ಲೋಕೋಪಯೋಗಿ ಇಲಾಖೆ ಕಟ್ಟಡದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ನೂತನ ಕಚೇರಿಯನ್ನು ಮಂಗಳವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆನ್ ಲೈನ್ ಮೂಲಕ ಉದ್ಘಾಟಿಸಿದರು.
ಯಡಿಯೂರಪ್ಪ
ಯಡಿಯೂರಪ್ಪ

ಕಲಬುರಗಿ: ಕಲಬುರಗಿ ನಗರದ ಐವಾನ್-ಎ-ಶಾಹಿ ರಸ್ತೆಯ ಲೋಕೋಪಯೋಗಿ ಇಲಾಖೆ ಕಟ್ಟಡದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ನೂತನ ಕಚೇರಿಯನ್ನು ಮಂಗಳವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆನ್ ಲೈನ್ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಈ ಪ್ರದೇಶಕ್ಕೆ ದಾಸ್ಯ ಪದವಾಗಿದ್ದ ಹೈದ್ರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ; ಎಂದು ಮರುನಾಮಕರಣ ಮಾಡಿ ಇಲ್ಲಿನ ಬಹುಜನರ ಬೇಡಿಕೆ ಈಡೇರಿಸಲಾಗಿದೆ. ಬರೀ ನಾಮಕಾರಣ ಮಾಡಿದರೆ ಸಾಲದು, ನಿಜ ಅರ್ಥದಲ್ಲಿ ಪ್ರದೇಶದ ಕಲ್ಯಾಣವನ್ನು ಸಾಕಾರಗೊಳಿಸಲು ಆಯವ್ಯಯದಲ್ಲಿ 500 ಕೋಟಿ ರೂ. ಈ ಸಂಘಕ್ಕೆ ಮೀಸಲಿಟ್ಟಿದ್ದು, ಸಂಘದ ಮೂಲಕ ಇಲ್ಲಿನ ಜನರ ಕಲ್ಯಾಣಕ್ಕಾಗಿ ಕೆಲಸಗಳು ನಡೆಯಲಿವೆ ಎಂದರು. ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಅವರ ನೇತೃತ್ವದಲ್ಲಿ 15 ಜನರ ಆಡಳಿತ ಮಂಡಳಿಯು ಈ ಪ್ರದೇಶದ 6 ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಸಂಘ ಶ್ರಮಿಸಲಿದೆ. ಒಟ್ಟಾರೆ ಜನರ ಕಲ್ಯಾಣಕ್ಕಾಗಿ ಸಂಘ ಕಾರ್ಯನಿರ್ವಹಿಸಲಿದೆ ಎಂದರು.

ಕೃಷಿ, ಶಿಕ್ಷಣ, ಸಾಹಿತ್ಯ, ಸ್ವಯಂ ಉದ್ಯೋಗ, ಆರೋಗ್ಯ, ಯುವಜನ ಮತ್ತು ಮಹಿಳಾ ಸಬಲೀಕರಣ, ಗ್ರಾಮ ಸಬಲೀಕರಣ ಹೀಗೆ ನಾನಾ ಕ್ಷೇತ್ರದಲ್ಲಿ ಪ್ರಗತಿಗೆ ಸಂಘವು ನಿರಂತರವಾಗಿ ಕಾರ್ಯನಿರ್ವಹಿಸಲಿದೆ. 3000 ಸಂಪರ್ಕ ಕೇಂದ್ರಗಳ ಮೂಲಕ ಆರೋಗ್ಯ, ವಿಚಾರ ಸಂಕಿರಣ, ಅರಿವು, ಸ್ವಯಂ ಉದ್ಯೋಗ ಕಲ್ಪಿಸುವ ಮೂಲಕ ಜನರ ಜೀವನ ಶೈಲಿಯಲ್ಲಿ ಅಮೂಲಗಾಗ್ರ ಬದಲಾವಣೆಗೆ ಸಂಘ ನಾಂದಿ ಹಾಡಲಿದೆ. ಇದಕ್ಕೆ ಪೂರಕವಾಗಿ ಕಾರ್ಯಕ್ರಮಗಳು ಸಂಘದ ಮೂಲಕ ರೂಪುಗೊಳ್ಳಲಿವೆ ಎಂದರು. ಕಲ್ಯಾಣ ಕರ್ನಾಟಕದ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ ಮಾತನಾಡಿ, ಮುಖ್ಯಮಂತ್ರಿಗಳ ಆಶಯದಂತೆ ಮುಂದಿನ 3 ವರ್ಷಗಳಲ್ಲಿ ಸಂಘವು ಪ್ರದೇಶದಲ್ಲಿ ಮಾನವ ವಿಕಸನಕ್ಕೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಲ್ಲರ ಪ್ರಶಂಸಾರ್ಹ ರೀತಿಯಲ್ಲಿ ಕೆಲಸ ಮಾಡಲಿದೆ. ಸಹಕಾರ ಕಾಯ್ದೆಯಡಿ ರಚನೆಯಾಗಿರುವ ಮಂಡಳಿಗೆ ಸರ್ಕಾರವು 500 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಕೆಕೆಆರ್ಡಿಬಿ ಮಂಡಳಿಗೆ ನೀಡುವ ಅನುದಾನದಲ್ಲಿ ಇದು ಸೇರಿಲ್ಲ ಎಂದು ಸ್ಪಷ್ಪಪಡಿಸಿದರು.

ಬಸವಕಲ್ಯಾಣವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು ಎಂಬುದು ಮುಖ್ಯಮಂತ್ರಿಯವರ ಅಶಯವಾಗಿದ್ದು, ಆ ನಿಟ್ಟಿನಲ್ಲಿಯೂ ಸಂಘ ಹೆಜ್ಜೆ ಇಡಲಿದೆ. ಬಸವಕಲ್ಯಾಣದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಭವ್ಯ ಅನುಭವ ಮಂಟಪ ನಿರ್ಮಾಣ ಕಾರ್ಯ ಸಂಘದ ಮುಂದಿರುವ ಪ್ರಮುಖ ಕಾರ್ಯಕ್ರಮವಾಗಿದೆ. ಸಂಘ-ಸಂಸ್ಥೆಗಳು ಸೇರಿದಂತೆ ಜನಸಾಮಾನ್ಯರ ಸಹಕಾರ ಪಡೆದು ಈ ಪ್ರದೇಶದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ವಿಜಯಪುರದ ಜ್ಞಾನ ಯೋಗಾಶ್ರಮದ ಪರಮ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಬಸವರಾಜ ಪಾಟೀಲ್ ಸೇಡಂ ಅವರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಸಂಘವು ಕಾರ್ಯನಿರ್ವಹಿಸಲಿದೆ. ಇದು ಬಸವಣ್ಣನ ಭೂಮಿ, ಕೊಡುವುದುಂಟು ಕೇಳುವುದಲ್ಲ. ಇದರ ಮೂಲಾರ್ಥದಲ್ಲಿ ಸಂಘವು ಕಾರ್ಯನಿರ್ವಹಿಸಬೇಕಿದೆ. ಪ್ರದೇಶದಲ್ಲಿ ಬಡವ ಮತ್ತು ಕೊರತೆ ಎಂಬ ಶಬ್ದ ಉದ್ಭವಿಸದಂತೆ ಸಂಘವು ಕಾರ್ಯನಿರ್ವಹಿಸಬೇಕಿದೆ ಎಂದರು.

ಕಚೇರಿ ಉದ್ಘಾಟನೆ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕಲಬುರಗಿಯಲ್ಲಿ ಸಂಸದ ಡಾ.ಉಮೇಶ್ ಜಾಧವ್, ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ, ಸೇಡಂನ ಪೂಜ್ಯ ಸದಾಶಿವ ಸ್ವಾಮಿಗಳು, ಜಿಲ್ಲಾಧಿಕಾರಿ ಶರತ್ ಬಿ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ, ಸಂಘದ ಅಡಳಿತ ಮಂಡಳಿ ಸದಸ್ಯರಾದ ಈರೇಶ ಇಲ್ಲೂರ್, ಶ್ರೀನಿವಾಸ ನಂದಾಪೂರ, ವಿ.ಎಂ.ಭೂಸನೂರಮಠ, ಲೀಲಾ ಕಾರಟಗಿ, ಪ್ರಭುರಾಜ ಸಿದ್ದರಾಮಪ್ಪ, ಶಿವರಾಮೇಗೌಡ, ಬಾಬುಲಾಲ್ ಜೈನ್, ಪ್ರಭುದೇವ ಕಪ್ಗಲ್, ರೇವಣಸಿದ್ದಪ್ಪ ಜಾಲಾದಿ, ವಿ.ಶಾಂತರೆಡ್ಡಿ, ತಿಪ್ಪಣ್ಣರೆಡ್ಡಿ ಕೋಲಿ, ಮಂಜುಳಾ ಡೊಳ್ಳೆ, ದುರ್ದನಾ ಬೇಗಂ, ಹಣಮಂತ ರಾಣಪ್ಪ ತೆಗನೂರ, ನೀಲಕಂಠರಾಯ ಎಲ್ಹೇರಿ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com