ಬೆಂಗಳೂರು: ನಾಲ್ಕು ವರ್ಷ ಪ್ರೀತಿಸಿ ಪ್ರಿಯಕರನಿಗೆ ಕೈಕೊಟ್ಟು ನಂತರ ಆತನ ಸ್ನೇಹಿತನನ್ನು ಬಲೆಗೆ ಹಾಕಿಕೊಂಡಿದ್ದ ಯುವತಿ ಮೇಲೆ ಮಾಜಿ ಪ್ರಿಯಕರ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.
ನಗರದ ಸಿಡೆದಹಳ್ಳಿ ನಿವಾಸಿಯಾಗಿರುವ 23 ವರ್ಷದ ಮೋನಿಕಾ ಸದ್ಯ ಐಸಿಯುನಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ಮಾರಣಾಂತಿಕ ಹಲ್ಲೆ ನಡೆಸಿದ ಮಾಜಿ ಪ್ರಿಯಕರ ಬಬಿತ್, ಬಳಿಕ ಅಪಘಾತದ ನಾಟಕವಾಡಿ ಯುವತಿಯರ ಪೋಷಕರಿಗೆ ಕರೆ ಮಾಡಿ ಆಸತ್ರೆಗೆ ಸೇರಿಸುವಂತೆ ತಿಳಿಸಿದ್ದಾನೆ.
ಮೋನಿಕಾ ನಗರದ ಸೋಲದೇವನಹಳ್ಳಿ ರಸ್ತೆಯ ಆಚಾರ್ಯ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಳು. ಕಳೆದ ನಾಲ್ಕು ವರ್ಷದ ಹಿಂದೆ ಚಿಕ್ಕಬಾಣಾವಾರದ ನಿವಾಸಿ ಬಬೀತ್ ಜೊತೆ ಪ್ರೇಮಾಂಕುರವಾಗಿದೆ. ಆದರೆ, ಮೋನಿಕಾಗೆ ಇತ್ತೀಚೆಗೆ ಬಬಿತ್ ಸ್ನೇಹಿತ ರಾಹುಲ್ ಜೊತೆ ಪ್ರೀತಿ ಶುರುವಾಗಿದೆ. ಕಳೆದ ಆರು ತಿಂಗಳಿನಿಂದ ರಾಹುಲ್ ಜೊತೆ ಮೋನಿಕಾ ಓಡಾಡಿಕೊಂಡಿದ್ದಳು.
ಭಾನುವಾರ ಸಂಜೆ ಹುಟ್ಟುಹಬ್ಬದ ಶುಭಾಶಯ ತಿಳಿಸಲು ಮೋನಿಕಾ, ರಾಹುಲ್ ಮನೆಗೆ ತೆರಳಿದ್ದಳು. ಈ ವಿಷಯ ತಿಳಿದು ರಾಹುಲ್ ಮನೆಗೆ ಬಂದಿದ್ದ ಬಬಿತ್, ಮೋನಿಕಾಳ ಮೇಲೆ ಹೆಲ್ಮೇಟ್ ನಿಂದ ಹಲ್ಲೆ ಮಾಡಿದ್ದಾನೆ. ಬಳಿಕ ಮೋನಿಕಾ ತಂದೆಗೆ ಕರೆ ಮಾಡಿ ನಿಮ್ಮ ಮಗಳಿಗೆ ಅಪಘಾತವಾಗಿದೆ. ಮನೆಯ ಬಳಿ ಇದ್ದಾಳೆ ಬನ್ನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದಿದ್ದಾನೆ. ತಕ್ಷಣ ಸ್ಥಳಕ್ಕೆ ಮೋನಿಕಾ ಪೋಷಕರು ಹೋಗಿ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಬಿತ್ ನನ್ನು ಬಂಧಿಸಿರುವ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement