ಬೆಂಗಳೂರು: ಮೆಟ್ರೊ ರೈಲು ಯೋಜನೆಗೆ ಮರಗಳನ್ನು ಕಡಿಯುವುದು ಮತ್ತು ಸ್ಥಳಾಂತರಿಸುವುದಕ್ಕೆ ತಡೆ ನೀಡಿ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಇ ಎಸ್ ಇಂದ್ರೇಶ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಮರಗಳನ್ನು ಕಡಿದುರುಳಿಸುವುದು ಮತ್ತು ಸ್ಥಳಾಂತರಿಸುವ ಬಗ್ಗೆ ಅರಣ್ಯಾಧಿಕಾರಿಗಳು ನೀಡಿರುವ ಆದೇಶದ ಮೇಲೆ ಯಾವುದೇ ಮುಂದಿನ ಕ್ರಮ ಕೈಗೊಳ್ಳುವಂತಿಲ್ಲ ಎಂದಿದ್ದಾರೆ.
ದತ್ತಾತ್ರೇಯ ಟಿ ದೇವರೆ ಮತ್ತು ಬೆಂಗಳೂರು ಪರಿಸರ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಲಿಸಿದ ವಿಭಾಗೀಯ ಪೀಠ, ಮರಗಳನ್ನು ಕಡಿದುರುಳಿಸುವುದು ಮತ್ತು ಸ್ಥಳಾಂತರಿಸುವ ಬಗ್ಗೆ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ(ಬಿಎಂಆರ್ ಸಿಎಲ್ )ಸಲ್ಲಿಸಿರುವ ಅರ್ಜಿಯನ್ನು ಪರಿಶೀಲಿಸಲು ರಚಿಸಲಾಗಿದ್ದ ವಿಶೇಷ ಸಮಿತಿ ಅಥವಾ ಅರಣ್ಯಾಧಿಕಾರಿ, ಮರಗಳನ್ನು ಕಡಿದುರುಳಿಸುವ ಬಗ್ಗೆ ಸರಿಯಾಗಿ ಯೋಚಿಸಿಲ್ಲ ಎಂದು ಹೇಳಿದೆ.
ಸ್ಥಳಾಂತರ ಮಾಡಿರುವ ಮರಗಳ ಬಗ್ಗೆ 3 ವರ್ಷಗಳ ಕಾಲ ಬಿಎಂಆರ್ ಸಿಎಲ್ ಜಾಗ್ರತೆ ವಹಿಸಬೇಕು ಎಂದು ಹೇಳಿತು.
ಹಲವು ಮರಗಳು ಧರೆಗೆ:ಕಳೆದ ಮಂಗಳವಾರ ಬೆಂಗಳೂರು ಮೆಟ್ರೊ ರೈಲು ನಿಗಮ ಬನ್ನೇರುಘಟ್ಟ ರಸ್ತೆಯ ಅಗ್ನಿಶಾಮಕ ಸ್ಟೇಷನ್ ಹತ್ತಿರ ರಾತ್ರೋ ರಾತ್ರಿ ಬೆಂಗಳೂರು ಮೆಟ್ರೊ ರೈಲು ನಿಗಮ 10 ಮರಗಳನ್ನು ಕಡಿದು ಧರೆಗೆ ಉರುಳಿಸಿದೆ. ಕಳೆದ ಭಾನುವಾರ ಸಹ ಅದೇ ದಾರಿಯಲ್ಲಿ 30 ಮರಗಳನ್ನು ಕಡಿದುರುಳಿಸಿದ್ದು ಪರಿಸರ ಪ್ರೇಮಿಗಳಿಗೆ ಮತ್ತು ನಿವಾಸಿಗಳಿಗೆ ಆಘಾತವಾಗಿದೆ.
ಈ ಹಾದಿಯ ಮೂಲಕ ವಾಹನದಲ್ಲಿ ಹಾದುಹೋಗುತ್ತಿದ್ದಾಗ ಪರಿಸರ ಕಾರ್ಯಕರ್ತ ಅರುಣ್ ಪ್ರಸಾದ್ ಅವರಿಗೆ ಮರಗಳನ್ನು ಕಡಿಯುವ ಶಬ್ದ ಕೇಳಿದೆ. ಅವರು ತಕ್ಷಣ ಮೈಕೊ ಲೇ ಔಟ್ ಪೊಲೀಸ್ ಠಾಣೆಗೆ ತಿಳಿಸಿದರು. ಅಧಿಕಾರಿಗಳು ಬಂದು ಮರ ಕಡಿಯುವುದನ್ನು ನಿಲ್ಲಿಸಿದರು.
ನಿನ್ನೆ ಹೈಕೋರ್ಟ್ ಮರ ಕಡಿಯುವುದಕ್ಕೆ ತಡೆ ನೀಡಿ ಆದೇಶ ಹೊರಡಿಸುವುದಕ್ಕೆ ಹಿಂದಿನ ದಿನ ಈ ಘಟನೆ ನಡೆದಿದೆ. ಗೊಟ್ಟಿಗೆರೆ-ನಾಗವಾರ ಮಾರ್ಗದಲ್ಲಿ ಎರಡನೇ ಹಂತದ ಮೆಟ್ರೊ ಕಾಮಗಾರಿಗೆ 165 ಮರಗಳನ್ನು ಕಡಿಯಲು ಅವಕಾಶ ನೀಡಿದ ಬಿಬಿಎಂಪಿ ವಿರುದ್ಧ ಪರಿಸರವಾದಿಗಳು ಕೋರ್ಟ್ ಮೊರೆ ಹೋಗಿದ್ದರು. ಜನರ ಅಭಿಪ್ರಾಯ ಕೇಳದೆ ಬಿಬಿಎಂಪಿ ಮೆಟ್ರೊ ನಿಗಮಕ್ಕೆ ಈ ರೀತಿ ಅನುಮತಿ ನೀಡಲು ಹೇಗೆ ಸಾಧ್ಯ? ಇಂತಹ ಮರಗಳನ್ನು ನೂರಾರು ವರ್ಷಗಳಿಂದ ಕಾಪಾಡಿಕೊಂಡು ಬರಲಾಗಿದೆ ಎಂದು ತಜ್ಞರ ಸಮಿತಿಯ ಸದಸ್ಯರು ಹೇಳುತ್ತಾರೆ.
ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳನ್ನು ಕೇಳಿದರೆ ನಾವು ಇತ್ತೀಚೆಗೆ ಮೇ ಕೊನೆ ವಾರದಲ್ಲಿ ನೊಟೀಸ್ ನೀಡಿ ಜನರಿಂದ ಅಭಿಪ್ರಾಯ ಕೇಳಿದ್ದೆವು ಎಂದು ಬಿಬಿಎಂಪಿಯ ಉಪ ಅರಣ್ಯ ಸಂರಕ್ಷಾಧಿಕಾರಿ ರಂಗನಾಥ ಸ್ವಾಮಿ ಹೇಳುತ್ತಾರೆ. ನಾವು 15 ದಿನ ಕಾದೆವು, ಯಾರೂ ಪ್ರತಿಕ್ರಿಯೆ, ಆಕ್ಷೇಪ ನೀಡದಿದ್ದರಿಂದ 15 ದಿನಗಳೊಳಗೆ ಯಾರೂ ದೂರು ಸಲ್ಲಿಸದಿದ್ದರೆ ಕರ್ನಾಟಕ ಮರ ಸಂರಕ್ಷಣೆ ಕಾಯ್ದೆ ಪ್ರಕಾರ ಕಡಿಯಬಹುದು ಎಂದು ಹೇಳಿದರು.
Advertisement